
ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಬಂಟ್ವಾಳ ಘಟಕದ 9 ನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧ್ಯಕ್ಷ ಬಾಬು ಕೆ.ವಿ. ಮಾತನಾಡಿ ಬೇರೆ ಬೇರೆ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶ್ರೀನಿವಾಸ ಪೂಜಾರಿಯವರು ಬಂಟ್ವಾಳ ಘಟಕದ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದರು. ಸಂಘಟನೆ ಯಾವುದೇ ಬೇಧ ಭಾವ ಇಲ್ಲದೆ ಎಲ್ಲರ ಸಹಕಾರದೊಂದಿಗೆ ಬಲಗೊಳ್ಳುತ್ತಿದೆ. ಸಂಘಟನೆಗಾಗಿ ದುಡಿದವರನ್ನು ನೂತನ ಪದಾಧಿಕಾರಿಯನ್ನಾಗಿ ಆಯ್ಕೆ ಮಾಡಬೇಕು. ಇಲ್ಲಿ ಅಂತಹ ಆಯ್ಕೆ ನಡೆದಿದೆ ಎಂದು ತಿಳಿಸಿದರು.

ನಿರ್ಗಮನ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮಾತನಾಡಿ ಹಲವಾರು ಒಳ್ಳೆಯ ಕಾರ್ಯಕ್ರಮಗಳನ್ನು ಸಂಘಟಿಸುವ ಯೋಜನೆ ಇತ್ತು. ಆದರೆ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದುದರಿಂದ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ತನ್ನ ಅಧ್ಯಕ್ಷವಧಿಯಲ್ಲಿ ಸಹಕರಿಸಿದವರನ್ನು ಗೌರವಿಸಿದರು
ಕಾರ್ಯಕ್ರಮದಲ್ಲಿ ಸಂಘದ ಇಬ್ಬರು ಹಿರಿಯ ಸದಸ್ಯರಾದ ಇಸ್ಮಾಯಿಲ್ ಹಾಗೂ ರತ್ನಾಕರ ರೈ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ಶಾಮಿಯಾನ ಮಾಲಕರ ಮಕ್ಕಳನ್ನು ಅಭಿನಂದಿಸಲಾಯಿತು. ಈ ಸಂದರ್ಭ ಹೊಸ ಸದಸ್ಯರನ್ನು ಘಟಕಕ್ಕೆ ಸೇರಿಸಿಕೊಳ್ಳಲಾಯಿತು. 2026-27 ನೇ ಸಾಲಿನ ಪದಾಧಿಕಾರಿಗಳ ಘೋಷಣೆ ಮಾಡಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷ ಐವನ್ ಡಿಸೋಜಾ ಆಶಯ ಭಾಷಣ ಮಾಡಿ ಮುಂದಿನ ವರ್ಷ ಘಟಕ ದಶಮಾನೋತ್ಸವವನ್ನು ಆಚರಿಸಲಿದ್ದು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ನಿರ್ಗಮನ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ಸುಧೀರ್ ನಿರ್ಮಲ್, ಕೋಶಾಧಿಕಾರಿ ಮೈಕಲ್ ಡಿಕೋಸ್ತಾ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲಕ್ಕಿ ವಿಜೇತರನ್ನು ಆಯ್ಕೆಗೊಳಿಸಿ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಪಿಯೂಸ್ ಮ್ಯಾಕ್ಸಿಂ ಸಿಕ್ವೇರಾ, ಜಿಲ್ಲಾ ಕೋಶಾಧಿಕಾರಿ ನಿಶಿತ್ ಪೂಜಾರಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಗೌರವಾಧ್ಯಕ್ಷ ಸುಭಾಶ್ಚಂದ್ರ ಜೈನ್ ಸ್ವಾಗತಿಸಿದರು., ಕಾರ್ಯದರ್ಶಿ ಸುಧೀರ್ ನಿರ್ಮಲ್ ವರದಿ ವಾಚಿಸಿದರು. ಕೋಶಾಧಿಕಾರಿ ಮೈಕಲ್ ಡಿಕೋಸ್ತಾ ಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಶಾಶ್ವತ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.ನೂತನ ಕೋಶಾಧಿಕಾರಿ ಕಿಶೋರ್ ಹಾಜರಿದ್ದರು.


Be the first to comment on "ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ ಬಂಟ್ವಾಳ ಘಟಕದ 9ನೇ ವಾರ್ಷಿಕ ಮಹಾಸಭೆ"