ನಾವೆಲ್ಲರೂ ಮನುಷ್ಯರಾಗಿ ಹುಟ್ಟಿದ ಮೇಲೆ ಸುಖ, ಶಾಂತಿ, ನೆಮ್ಮದಿ ಬೇಕೇ ಬೇಕು. ಅದಕ್ಕೆ ದಾರಿದೀವಿಯ ರೂಪದಲ್ಲಿರುವವರು ಬ್ರಹ್ಮಶ್ರೀ ನಾರಾಯಣ ಗುರುವರ್ಯರು. ನಾರಾಯಣ ಗುರುಗಳ ಒಂದು ಸಿದ್ಧಾಂತವನ್ನು ಪಾಲಿಸಿದರೆ ನಮ್ಮ ಬದುಕು ಹಗುರವಾಗುತ್ತದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾರಾಜ್ ನುಡಿದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ) ನೀರಪಾದೆ ವತಿಯಿಂದ ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ಮೇ.10ರಂದು 7.23ರ ವೃಷಭ ಲಗ್ನದಲ್ಲಿ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುವರ್ಯರ ಮೂರ್ತಿ ಪ್ರತಿಷ್ಠೆ, ಕಲಶಾಭಿಷೇಕ, ಅಲಂಕಾರ ಶ್ರೀಪಾದಾರ್ಚನೆ ನೆರವೇರಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ,ಈ ಸಂಸ್ಥೆ ಎಲ್ಲ ಜಾತಿ ಜನಾಂಗಕ್ಕೆ ಒಂದು ದಿಕ್ಸೂಚಿಯಾಗಿ ಕೆಲಸ ಮಾಡಲಿ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಕಳೆದ ಅನೇಕ ವರ್ಷಗಳ ಕನಸು ಈಗ ನನಸಾಗಿದೆ. ಹರಿಕಥೆ, ಕೀರ್ತನೆ ಹಿಂದೂ ಸಮಾಜಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದೆ. ಸಮಾಜದಲ್ಲಿ ಆಘಾತ, ಸಮಸ್ಯೆ ಬಂದಾಗ, ಯಾರ ವಿರುದ್ಧವೂ ದ್ವೇಷ ಸಾಧನೆ ಮಾಡದೆ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುವಂತಹ ಕೆಲಸ ಮಾಡುವುದು ಹೇಗೆ ಎಂಬ ಯೋಚನೆ ಮಾಡಿದವರು ನಾರಾಯಣ ಗುರುಗಳು. ಅವರಲ್ಲಿ ದೇವರ ಅಂಶ ಇದೆ ಎಂದರು.
ಶಾಸಕ ರಾಜೇಶ್ ನಾಯ್ಕ್ , ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ವಹಿಸಿದ್ದರು.
ನೀರಪಾದೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷ ನಾರಾಯಣ ಪೂಜಾರಿ, ಬಂಟ್ವಾಳ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ತಾಲೂಕು ವಲಯ ಯೋಜನಾಧಿಕಾರಿ ಜಯಾನಂದ ಪಿ., ಸುಬ್ರಹ್ಮಣ್ಯದ ಸಮಾಜ ಸೇವಕ ರವಿ ಕಕ್ಯಪದವು, ಸಿದ್ದಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಮಂಜಿಲ, ಉದ್ಯಮಿ ರಾಘವ ಕೆ ಕಾಂದಿಲ, ಬ್ರಹ್ಮಶ್ರೀ ವಿವಿಧೋದ್ದೇಶ ಬ್ಯಾಂಕ್ ನ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿ ವಿಟ್ಲ, ವಿಟ್ಲ ಸಿವಿಲ್ ಇಂಜಿನಿಯರ್ ಯತೀಶ್ ಎನ್ ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟಿ ಡಿಕಯ್ಯ ಪೂಜಾರಿ, ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿಚಂದ್ರ, ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ, ಮಂಗಳೂರು ತಾಲೂಕು ಆರೋಗ್ಯಧಿಕಾರಿ ಡಾ. ಸುಜಯ್ ಭಂಡಾರಿ , ಬೆಳ್ತಂಗಡಿ ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ, ಉದ್ಯಮಿಗಳಾದ ಮುಳಿಯ ಕೇಶವ ಪ್ರಸಾದ್, ಸಂದೇಶ್ ಶೆಟ್ಟಿ ಅರೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.ಟ್ರಸ್ಟ್ ನ ಕಾರ್ಯದರ್ಶಿ ಮೋಹನ್ ಪಿ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶರತ್ ಕುಮಾರ್ ಸ್ವಾಗತಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಮಲ್ಲಿಕಾ ಸೇನರೆಕೊಡಿ ಧನ್ಯವಾದ ಸಮರ್ಪಿಸಿದರು