ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ವತಿಯಿಂದ ಹಿರಿಯರ ಚಿಂತನ ಸಮಾವೇಶ ನಡೆಯಿತು.
ಆಡಳಿತ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಉದ್ಘಾಟಿಸಿ ಮಾತನಾಡಿ, 94 ವರ್ಷಗಳ ಕಾಲ ತನ್ನ ಜೀವಿತಾ ಅವಧಿಯಲ್ಲಿ 50 ವರ್ಷಗಳ ಬಳಿಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ನರಿಕೊಂಬು ದಿ. ಕೃಷ್ಣ ಸೋಮಯಾಜಿಯವರು ಕರ್ಮಯೋಗಿಯಾಗಿ ಸಮಾಜಸೇವೆಗೆ ಆದ್ಯತೆಯನ್ನು ಕೊಟ್ಟು ಮಕ್ಕಳಲ್ಲಿಯೂ ಅದೇ ಸಂಸ್ಕಾರವನ್ನು ನೀಡಿ ಆದರ್ಶ ಪ್ರಾಯರಾಗಿದ್ದಾರೆ ಎಂದರು.
ಶ್ರೀ ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ಚೈತನ್ಯಾನಂದಜೀ ಆಶೀರ್ವಚನ ನೀಡಿ, ಹಿರಿಯರಾದವರು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂದರು.
ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎ.ವಿ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿದರು. ಸಹ ಸಂಚಾಲಕ ವೇದವ್ಯಾಸ ರಾಮಕುಂಜ , ಮಹಿಳಾ ಘಟಕದ ಸಂಚಾಲಕಿ ಪ್ರೊ. ವತ್ಸಲಾ ರಾಜ್ಞಿ ಪುತ್ತೂರು ಉಪಸ್ಥಿತರಿದ್ದರು. ಶ್ರೀಮಾತಾ ಲಕ್ಷಣೀ ಶಾಂತಿಧಾಮ ಮೇರಮಜಲು ಸಂಚಾಲಕ ಹರೀಶ್ ಪೆರ್ಗಡೆ, ನಿವೃತ್ತ ಮುಖ್ಯೋಪಾಧ್ಯಾಯರಾದ ನಾರಾಯಣ ನಾಯಕ್ ಕರ್ಪೆ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸುಮಂಗಲಾ ಪತ್ತಿನ ಸಹಕಾರಿ ಸಂಘ ಪಾಣೆಮಂಗಳೂರು ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ ಬಿ.ಸಿ.ರೋಡು, ವ್ಯವಸ್ಥಾಪನಾ ಸಮಿತಿ ಸದಸ್ಯ ಲೋಕೇಶ್ ಉಪಸ್ಥಿತರಿದ್ದರು.
ಬಳಿಕ ನಡೆದ ಚಿಂತನ ಮಂಥನ ಗೋಷ್ಠಿಯಲ್ಲಿ ಡಾ. ರಮೀಳ ಶೇಖರ್ ಅವರು ಕೌಟುಂಬಿಕ ವ್ಯವಸ್ಥೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದರು.ಸೇವಾ ಭಾರತಿ ಕರ್ನಾಟಕದ ಕಾರ್ಯದರ್ಶಿ ಚೆನ್ನಯ್ಯ ಸ್ವಾಮಿ ನಶಾಮುಕ್ತ ಜಾಗೃತಿಯ ಬಗ್ಗೆ ಮಾತನಾಡಿದರು. ಕೇಶವ ಸ್ಮೃತಿ ಸಂವರ್ಧನ ಸಮಿತಿ ಮಂಗಳೂರಿನ ಗಜಾನನ ಪೈ ತೋನ್ಸೆ ಸಮಾರೋಪ ಭಾಷಣ ಮಾಡಿದರು. ಮಂಜುಳಾ ಸುಬ್ರಮಣ್ಯ ಭಟ್ ಮಂಚಿ ಮತ್ತು ಈಶ್ವರ ಭಟ್ ಗುಂಡ್ಯಡ್ಕ ಇವರಿಂದ ಗಮಕ ವಾಚನ -ವ್ಯಾಖ್ಯಾನ ಕಾರ್ಯಕ್ರಮವಿತ್ತು. ಪ್ರೊ. ರಾಜಮಣಿ ರಾಮಕುಂಜ ಯೋಗಾಸನ ಪ್ರದರ್ಶನ ಮಾಡಿದರು. ಜಯರಾಮ ಭಂಡಾರಿ ಬೆಳ್ತಂಗಡಿ ಇವರ ಪ್ರಾಯೋಜಕತ್ವದ ಬಟ್ಟೆ ಚೀಲವನ್ನು ಉಚಿತವಾಗಿ ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.
ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೊ. ಸುಬ್ರಾಯ ರಾಮ ಮಡಿವಾಳ , ಚಂದ್ರಶೇಖರ ಆಳ್ವ ಪಡುಮಲೆ ಪುತ್ತೂರು ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿ ಇದ್ದರು. ಜಯರಾಮ ಪೂಜಾರಿ , ಜಯಾನಂದ ಪೆರಾಜೆ , ಅನಾರು ಕೃಷ್ಣ ಶರ್ಮ ನಿರ್ವಹಣೆ ಮಾಡಿದರು. ಪ್ರಮುಖರಾದ ದೇವಪ್ಪ ಕುಲಾಲ್, ರಾಕೋಡಿ ಈಶ್ವರ ಭಟ್ , ರಾಜಾರಾಮ ಐತಾಳ ,ರಾಮ್ಗಣೇಶ್ ಪ್ರಭು ಕೈಕುಂಜೆ, ಪ್ರೇಮಲತಾ ರಾವ್ , ಶಂಕರಿ ಶರ್ಮ ಮೊದಲಾದವರು ಸಹಕರಿಸಿದರು.