ಬಂಟ್ವಾಳ: ಹುಟ್ಟಿದವನಿಗೆ ಸಾವು ನಿಶ್ಚಿತ, ಆಯುಷ್ಯ ಮುಗಿದವನಿಗೆ ಎಲ್ಲಿದ್ದರೂ ಸಾವು ಬರುತ್ತದೆ. ಸೇನೆಗೆ ಸೇವೆಗೆ ಸೇರಿದವರು ಸಾಯುತ್ತಾರೆ ಎನ್ನುವುದು ಒಂದು ಮಿಥ್ಯಾಪವಾದ. ದೇಶಕ್ಕಾಗಿ ಸೇವೆ ಸಲ್ಲಿಸಿದ್ದೇನೆ ಎಂಬ ಸಾರ್ಥಕ ಭಾವಕ್ಕಾಗಿ ಸೇನೆಗೆ ಸೇರಿ ಎಂದು ನಿವೃತ್ತ ಯೋಧ ಹವಾಲ್ದಾರ್ ಗಣೇಶ್ ಕಾಮತ್ ಹೇಳಿದರು.
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯ್ ದಿನಾಚರಣೆಯ ಅಂಗವಾಗಿ ನಡೆದ ಯೋಧ ನಮನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.
ನಿವೃತ್ತ ಯೋಧ, ಶಾಲಾ ಸಿಬ್ಬಂದಿ ಹರೀಶ್ ದೇವಂದಬೆಟ್ಟು ಸೈನಿಕ ಕಾರ್ಯಾಚರಣೆಯ ವಿವರಗಳನ್ನು ತಿಳಿಸಿದರು. ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಅಳುಪ ಸಮಾಜ ವಿಜ್ಞಾನ ಸಂಘದ ಕಾರ್ಯದರ್ಶಿ ಗಣ್ಯ ಎಸ್ ಪೂಜಾರಿ ಅತಿಥಿಯನ್ನು ಪರಿಚಯಿಸಿದರು. ಕಾನೂನು ಸಂಘದ ಅಧ್ಯಕ್ಷೆ ಧೃತಿ ಸ್ವಾಗತಿಸಿ, ಕಾನೂನು ಸಂಘದ ಕಾರ್ಯದರ್ಶಿ ಆದಿತ್ಯ ವಂದಿಸಿದರು. ಸಮಾಜ ವಿಜ್ಞಾನ ಸಂಘದ ಅಧ್ಯಕ್ಷರಾದ ಫಾತಿಮತ್ ಸಾಬಿರಾ ನಿರ್ವಹಿಸಿದರು