ಬಂಟ್ವಾಳ ತಾಲೂಕಿನ ಎರಡು ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಮಹತೋಬಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆ.12ರಂದು ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ, ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.
ನರಹರಿ ಪರ್ವತ:
ಆಟಿ ಅಮಾವಾಸ್ಯೆಯ ಮುಂಜಾನೆ ಭಕ್ತರು ಮುಖ್ಯವಾಗಿ ನವ ವಧೂವರರು ನರಹರಿ ಪರ್ವತ ಏರಿ ಸದಾ ನೀರು ಇರುವ ಶಂಖ, ಚಕ್ರ, ಗದಾ, ಪಧ್ಮಗಳೆಂಬ ನಾಲ್ಕು ತೀರ್ಥ ಕೂಪಗಳಲ್ಲಿ ಮಿಂದು ನಾಗದೇವರಿಗೆ, ವಿನಾಯಕ ದೇವರಿಗೆ, ಸದಾಶಿವ ದೇವರಿಗೆ ವಿಧ ವಿಧ ವಾದ ಸೇವೆ ಸಲ್ಲಿಸುತ್ತಾರೆ. ಪ್ರಸ್ತುತ ದೇವಸ್ಥಾನ ಆಡಳಿತ ಮೊಕ್ತೇಸರ ಡಾ. ಪ್ರಶಾಂತ್ ಮಾರ್ಲ ನೇತೃತ್ವದಲ್ಲಿ 6 ಕೋಟಿ ರೂ ವೆಚ್ಚದಲ್ಲಿ ನವೀಕರಣವಾಗುತ್ತಿದ್ದು, ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ. ಸಮಿತಿ ಅಧ್ಯಕ್ಷರಾಗಿ ಡಾ, ಆತ್ಮರಂಜನ್ ರೈ ಸಹಿತ ಹಲವು ಪ್ರಮುಖರು ಸೇವೆ ಸಲ್ಲಿಸುತ್ತಿದ್ದಾರೆ.ರಾಷ್ಟ್ರೀಯ ಹೆದ್ದಾರಿಯಿಂದ ನರಹರಿ ಕ್ಷೇತ್ರದ ತುತ್ತತುದಿಯವರೆಗೆ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣಗೊಂಡಿದ್ದು ಭಕ್ತಾಧಿಗಳನ್ನು ಕೈ ಬೀಸಿ ಕರೆಯುತ್ತಿದೆ.
ಕಾರಿಂಜ ಕ್ಷೇತ್ರ:
ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆಯಂದು ಬೆಳಗ್ಗೆ 3 ಗಂಟೆಯಿಂದ ಆಟಿಯ ಅಮೃತ ಎಂದು ಬಣ್ಣಿಸಲಾದ ಹಾಳೆ ಮರದ ಕೆತ್ತೆ ಕಷಾಯ ವಿತರಣೆ ನಡೆಯಲಿದೆ. ಆ ದಿನ ವಿಶೇಷ ತೀರ್ಥಸ್ನಾನ ಮತ್ತು ದೇವರಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ವೀರೇಂದ್ರ ಅಮೀನ್ ತಿಳಿಸಿದ್ದಾರೆ. ಆಟಿ ಅಮಾವಾಸ್ಯೆಯಂದು ದೇವಸ್ಥಾನದ ದಕ್ಷಿಣ ಭಾಗದ ತಳದಲ್ಲಿರುವ ಗದಾತೀರ್ಥವೆಂಬ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿ ಪಾರ್ವತಿ ಪರಮೇಶ್ವರರಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಈಡೇರಿಸಿಕೊಳ್ಳುವ ಸಂಪ್ರದಾಯ ಕಾರಿಂಜ ಕ್ಷೇತ್ರದಲ್ಲಿದೆ.