ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮೊಡಂಕಾಪು ಸಮೀಪ ಪಲ್ಲಮಜಲುವಿನಲ್ಲಿ ಮೇ 16ರ ಶುಕ್ರವಾರದಿಂದ 18ರವರೆಗೆ ಶ್ರೀ ರಾಮ ಭಕ್ತಾಂಜನೇಯ ಭಜನಾ ಮಂದಿರ, ಶ್ರೀ ಮಹಾಪವಮಾನ ಯಾಗ ಸಮಿತಿ ವತಿಯಿಂದ 108 ಪವಮಾನ ಪಾರಾಯಣ ಸಹಿತ ಮಹಾಪವಮಾನ ಯಾಗ, 108 ಲಕ್ಷ ಶ್ರೀರಾಮ ತಾರಕ ಜಪಯಜ್ಞ, ಶ್ರೀ ಆಂಜನೇಯ ದೇವರಿಗೆ ಸಹಸ್ರ ಕದಳೀಯಾಗ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ ಎಂದು ಯಾಗ ಸಮಿತಿಯ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಯಾಗದ ಕುರಿತು ಮಾಹಿತಿ ನೀಡಿದ ಅವರು, ಬಂಟ್ವಾಳ ತಾಲೂಕಿನ ಯತಿವರ್ಯರುಗಳ ದಿವ್ಯ ಉಪಸ್ಥಿತಿಯೊಂದಿಗೆ ದೈವಜ್ಞ ಶಶಿಕುಮಾರ್ ಪಂಡಿತ್ ಮಾರ್ಗದರ್ಶನದಲ್ಲಿ ವೇ.ಮೂ.ವಿನಾಯಕ ಕಾರಂತ ಅವರ ಪೌರೋಹಿತ್ಯದಲ್ಲಿ ಯಾಗ ನಡೆಯಲಿದೆ. 16ರಂದು ಸಂಜೆ 3ರಿಂದ ಪೊಳಲಿದ್ವಾರದ ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 6ಕ್ಕೆ ಋತ್ವಿಜರ ಆಗಮನ, 7ರಿಂದ ಉಗ್ರಾಣ ಮುಹೂರ್ತ, 17ರಂದು ಬೆಳಗ್ಗೆ 8ಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತಿಯಲ್ಲಿ ಯಾಗ ಸಂಕಲ್ಪ, ಪವಮಾನ ಸೂಕ್ತ ಪಾರಾಯಣ, ವಿಷ್ಣುಸಹಸ್ರನಾಮ ಾರಾಯಣ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಶೇಣಿ ಮುರಳಿಯಿಂದ ಶರಸೇತು ಬಂಧನ ಹರಿಕಥೆ, 18ರಂದು ಭಾನುವಾರ ಬೆಳಗ್ಗೆ 9ರಿಂದ ಶ್ರೀರಾಮ ತಾರಕ ಜಪಯಜ್ಞ, ಶ್ರೀ ಆಂಜನೇಯ ದೇವರಿಗೆ ಸಹಸ್ರ ಕದಳಿಯಾಗ, ಶ್ರೀ ಮಹಾಪವಮಾನ ಯಾಗ ಪ್ರಾರಂಭ, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪಲ್ಲಪೂಜೆ,. 12ರಿಂದ ಯಾಗದ ಮಹತ್ವದ ವಿಶ್ಲೇಷಣೆ, ಧನ್ಯೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಲೋಕಕಲ್ಯಾಣ, ಸಾಮಾಜಿಕ ಸಾಮರಸ್ಯ, ಸೈನಿಕರಿಗೆ ಶಕ್ತಿ ತುಂಬಲು ಯಾಗ: ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ, ಹಿಂದು ಸಮಾಜದಲ್ಲಿ ಸಾಮರಸ್ಯ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹಾಗೂ ಸಮಾಜವನ್ನು ಬಲಿಷ್ಠಗೊಳಿಸುವ ಉದ್ದೇಶ ಮತ್ತು ಲೋಕಕಲ್ಯಾಣಾರ್ಥವಾಗಿ ಯಾಗ ನಡೆಯಲಿದೆ. ಭಾರತದ ಗಡಿಯಲ್ಲಿ ಕಾದಾಡುತ್ತಿರುವ ಭಾರತದ ಹೆಮ್ಮೆಯ ಸೈನಿಕರಿಗೆ ಶಕ್ತಿ ತುಂಬಲು ಪ್ರಾರ್ಥಿಸಲಾಗುತ್ತದೆ. ಹಿಂದು ಸಮಾಜದ ಎಲ್ಲ ಸಮುದಾಯಗಳ ಜನರು ಯಾಗಕ್ಕೆ ದಂಪತಿ ಸಮೇತರಾಗಿ ಆಗಮಿಸಿ ಹವಿಸ್ಸು ಅರ್ಪಿಸಲಿದ್ದಾರೆ ಎಂದು ಹೇಳಿದರು. ಯಾಗದ ಪೂರ್ಣಾಹುತಿ ದಿನ ಶ್ರೀರಾಮ ಭಕ್ತಾಂಜನೇಯ ಮಂದಿರದ ಅನ್ನಛತ್ರಲೋಕಾರ್ಪಣೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಸಂದೇಶ್ ಬ್ರಹ್ಮರಕೂಟ್ಲು, ಕೋಶಾಧಿಕಾರಿ ಹರಿಪ್ರಸಾದ್ ಭಂಡಾರಿಬೆಟ್ಟು, ಶ್ರೀರಾಮಭಕ್ತಾಂಜನೇಯ ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ದಾಸ್ ಕಾಮೇರಕೋಡಿ, ಪ್ರಮುಖರಾದ ಜಗದೀಶ ಹೊಳ್ಳ ಉಪಸ್ಥಿತರಿದ್ದರು.
Be the first to comment on "ಪಲ್ಲಮಜಲುವಿನಲ್ಲಿ ಮಹಾಪವಮಾನ ಯಾಗ, ಶ್ರೀರಾಮತಾರಕ ಜಪ ಯಜ್ಞ. ಸಹಸ್ರಕದಳೀ ಯಾಗ == details"