ಬಂಟ್ವಾಳ ತಾಲೂಕಿನ ವೀರಕಂಭ ಸಮೀಪದ ಕೆಲ ಗ್ರಾಮಗಳಲ್ಲಿ ಕಾಡುಕೋಣದ ಕಾಟ ಹೆಚ್ಚಾಗಿದೆ ಎಂದು ಕೃಷಿಕರು ದೂರಿದ್ದಾರೆ. ಸ್ಥಳೀಯವಾಗಿ ಕಾಟಿ ಎನ್ನುವ ಈ ಕೋಣಗಳು, ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತಿರುವ ವಿಚಾರವೀಗ ಆತಂಕಕ್ಕೀಡುಮಾಡಿದೆ. ಕೃಷಿ ಕೂಲಿ ಕಾರ್ಮಿಕರು ಹಾಗೂ ಕೃಷಿಕರು ಇದರಿಂದ ತೋಟಕ್ಕೆ ತೆರಳಲೂ ಆತಂಕಪಡುವಂಥ ಸ್ಥಿತಿ ಬಂದೊದಗಿದೆ.
ಬಂಟ್ವಾಳ ತಾಲೂಕಿನ ವೀರಕಂಭದಿಂದ ಅನಂತಾಡಿ ಗ್ರಾಮದ ಗಡಿ ಭಾಗದಲ್ಲಿ ರಕ್ಷಿತಾರಣ್ಯ ಪ್ರದೇಶವಿದ್ದು, ಇಲ್ಲಿಂದ ಕಾಡುಕೋಣಗಳು ಕೃಷಿ ತೋಟಗಳಿಗೆ ನುಗ್ಗುತ್ತವೆ ಎನ್ನಲಾಗಿದೆ. ಇದರಿಂದ ತೊಂದರೆಗೆ ಒಳಗಾದ ಕೃಷಿಕ ರಾಮಪ್ರಸಾದ್ ಶೆಟ್ಟಿ ಕೊಂಬಿಲ ಅವರು ಈ ಕುರಿತು ಅಡಣ್ಯ ಇಲಾಖೆ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕೃಷಿ ತೋಟಗಳಿಗೆ ನುಗ್ಗಿ ಅಡಿಕೆ-ಬಾಳೆ ಗಿಡಗಳನ್ನು ನಾಶ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಉಡುಪಿ ಕಾಸರಗೋಡು ೪೦೦ ಕೆವಿ ವಿದ್ಯುತ್ ಲೈನ್ಗಾಗಿ ಮರಗಳನ್ನು ಕಡಿಯಲಾಗಿದ್ದು, ಈ ಹಾದಿಯ ಮೂಲಕ ಕೋಣಗಳು ತೋಟಕ್ಕೆ ನುಗ್ಗುತ್ತಿವೆ ಎಂದು ಆರೋಪಿಸಲಾಗಿದೆ. ಕೋಣಗಳ ದಾಳಿಯಿಂದ ದೂರುಗಳು ಬಂದರೆ ಅದರ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಬಂಟ್ವಾಳ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
Be the first to comment on "ವೀರಕಂಭ ಪರಿಸರದ ಗ್ರಾಮಗಳಲ್ಲಿ ಕಾಡುಕೋಣ ಕಾಟ"