ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಶ್ರೀ ರಕೇಶ್ವರೀ ದೇವಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏಪ್ರಿಲ್ 4 ರಿಂದ 9 ರ ವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ರಮೇಶಾನಂದ ಸೋಮಯಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ಮುಂಬಾಗ,ಶ್ರೀ ಚಂಡಿಕೇಶ್ವರೀ ಹಿಂಬಾಗದಲ್ಲಿದ್ದರೆ ಮಧ್ಯಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ಈ ಭಾಗದ ಸಮಸ್ತ ಜನರ ಶ್ರೇಯೋಭಿವೃದ್ಧಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸರ್ವ ಭಕ್ತರ ಸಹಕಾರ ಅಗತ್ಯವೆಂದರು.
ವಿವಿಧ ಸಮಿತಿ ಪದಾಧಿಕಾರಿಗಳಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಅಶ್ವನಿ ಕುಮಾರ್ ರೈ, ದೇವದಾಸ ಶೆಟ್ಟಿ ಮಾತನಾಡಿ, ಶ್ರೀಅನ್ನಪೂರ್ಣೇಶ್ವರೀ ಮತ್ತು ಶ್ರೀ ಚಂಡಿಕೇಶ್ವರೀ ದೇವಸ್ಥಾನದ ಬ್ರಹ್ಮಕಲಶವು ಸರ್ವ ಜನತೆ, ಸಂಘ ಸಂಸ್ಥೆಗಳ ಶ್ರಮ,ಸೇವೆಯಿಂದ ಅತ್ಯಂತ ಯಶಸ್ವಿಯಾಗಿದ್ದನ್ನು ಸ್ಮರಿಸಿದರಲ್ಲದೆ ರಕ್ತೇಶ್ವರೀ ದೇವಸ್ಥಾನದ ಬ್ರಹ್ಮಕಲಶದಲ್ಲೂ ಜಾತಿ, ಮತ, ಬೇಧ ಮರೆತು ಏಕ ಮನಸ್ಸಿನಿಂದ ಸಹಕಾರ ನೀಡಿದರೆ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎರಡೂ ದೇವಳದ ಬ್ರಹ್ಮಕಲಶದ ಸಂದರ್ಭ ಮಹಿಳೆಯರ ಸೇವಾಕಾರ್ಯ ಅದ್ಬುತವಾಗಿದ್ದು,ಇಲ್ಲು ಮಹಿಳೆಯರು ಅದೇ ಮಾದರಿಯಲ್ಲಿ ಸಹಕರಿಸುವಂತೆ ಕೋರಲಾಯಿತು. ಬ್ರಹ್ಮಕಲಶದ ಆರಂಭಿಕ ಹಂತದ ಹೊರೆಕಾಣಿಕೆ ಮೆರವಣಿಗೆ ಯಶಸ್ವಿಯಾದರೆ ಇಡೀ ಬ್ರಹ್ಮಕಲಶೋತ್ಸವವೇ ಯಶಸ್ವಿಯಾದಂತೆ ಈ ನಿಟ್ಟಿನಲ್ಲಿ ಸಹಕರಿಸುವಂತೆ ಮನವಿ ಮಾಡಲಾಯಿತು.
ಸುಮಾರು1.60 ಕೋ.ರೂ.ವೆಚ್ಚದಲ್ಲಿ ದೇವಸ್ಥಾನದ ಗರ್ಭಗುಡಿ,ಬಾಗಿಲು,ನಾಗಬನ ಸಹಿತ ವಿವಿಧ ಕಾಮಗಾರಿಯನ್ನು ನಡೆಸಲುದ್ದೇಶಿಸಲಾಗಿದೆ. ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಕವಚ ಹಾಕಲು ನಿರ್ಧರಿಸಲಾಗಿದೆ ಈಗಾಗಲೇ ಕಾಮಗಾರಿ ಆರಂಭವಾಗಿದ್ದು, 960 ಮಂದಿ ಭಕ್ತರು ಸಮಿತಿಗೆ ಸೇರ್ಪಡೆಯಾಗಿದ್ದರೆ, 50 ಸಂಘ ಸಂಸ್ಥೆಗಳು ಹೆಸರನ್ನು ನೋಂದಾಯಿಸಿಕೊಂಡಿದೆ ಎಂದುಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ ಅವರು ಪ್ರಸ್ತಾವನೆಯ ಮೂಲಕ ಸಭೆಗೆ ತಿಳಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ಧಾರ್ಮಿಕ ದತ್ತಿ ಜಿಲ್ಲಾ ಸಮಿತಿ ಸದಸ್ಯ ದೇವಪ್ಪಕುಲಾಲ್ ಪಂಜಿಕಲ್ಲು, ವಿವಿಧ ಸಮಿತಿ ಪದಾಧಿಕಾರಿಗಳಾದ ಲೋಕನಾಥ ಶೆಟ್ಟಿ, ಉಮೇಶ್ ಕುಮಾರ್ ವೈ, ನಾರಾಯಣ ಹೆಗ್ಡೆ, ವಸಂತ ರಾವ್ ಬಿ.ಸಿ.ರೋಡು, ಬೇಬಿ ಕುಂದರ್ ,ಸತೀಶ್ ಭಂಡಾರಿ, ದಿವಾಕರ ಪಂಬದಬೆಟ್ಟು, ರವೀಂದ್ರ ಕಂಬಳಿ, ನೇಮಿರಾಜ ಶೆಟ್ಟಿ ಕೊಡಂಗೆ, ಬಿ.ಮೋಹನ್, ಭುವನೇಶ್ ಪಚ್ಚಿನಡ್ಕ, ರಾಜೇಶ್ ಎಲ್.ನಾಯಕ್ ಮೊದಲಾದವರಿದ್ದರು.ನ್ಯಾಯವಾದಿ ಆಶಾ ರೈ ಮತ್ತಿತರರು ಸಲಹೆಗಳನ್ನಿತ್ತರು. ದೇವಳದ ಅರ್ಚಕರು ಪ್ರಾರ್ಥಿಸಿದರು. ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.ಸತೀಶ್ ಶೆಟ್ಟಿ ಪಲ್ಲಮಜಲು ವಂದಿಸಿದರು.
Be the first to comment on "ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ"