ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ತೆಂಕುತಿಟ್ಟು ಯಕ್ಷಗಾನದ ಮೇರು ಕಲಾವಿದ ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ – ಬಣ್ಣದ ಬದುಕು: ನಿರೂಪಣೆ: ಪ.ಗೋಪಾಲಕೃಷ್ಣ, ಕರ್ನಾಟಕ ಸಂಘ, ಪುತ್ತೂರು, 575202 (ದ.ಕ.) ಕ್ಯಾರಿಕೇಚರ್ ಬಿಡಿಸಿದವರು: ಹರಿಣಿ…. ಪದ್ಯಾಣ ಗೋಪಾಲಕೃಷ್ಣ ಅವರು ಬರೆದ ಕುರಿಯ ವಿಠಲ ಶಾಸ್ತ್ರೀ ಆತ್ಮಕಥನ ಬಣ್ಣದ ಬದುಕು ಎಂಬ ಕೃತಿಯ ಮರುಓದು. ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಣೆಗಾಗಿ ಅವರ ಪುತ್ರ ಪದ್ಯಾಣ ರಾಮಚಂದ್ರ ನೀಡಿದ್ದಾರೆ. ಇದು ಮೂರನೇ ಕಂತು. ನಾಲ್ಕನೇ ಕಂತು ಮುಂದೆ ಪ್ರಕಟವಾಗಲಿದೆ. ಇಲ್ಲಿ ಪ್ರಕಟವಾದ ಬರೆಹ, ಚಿತ್ರಗಳೆಲ್ಲವೂ ಕೃತಿಕಾರರ ಕೊಡುಗೆ. = ಪ.ರಾಮಚಂದ್ರ ಅವರಿಗೆ ಕೃತಜ್ಞತೆ
ಕುರಿಯ ವಿಠಲ ಶಾಸ್ತ್ರಿ: ಜನನ: 8-9-1912, ನಿಧನ: 18-11-1972
ಎರಡು ಕಂತುಗಳ ಲಿಂಕ್ ಇಲ್ಲಿದೆ.
ಮೊದಲ ಕಂತು
ಎರಡನೇ ಕಂತು
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ – ಬಣ್ಣದ ಬದುಕು ಕೃತಿ ಮರುಓದು – ಎರಡನೇ ಕಂತು
ಗುರುವಿಗಾಗಿ ನಾಟ್ಯಶಾಲೆ
ರಂಗ ಪ್ರವೇಶದ ಪ್ರಥಮ ವರ್ಷದ ಸಂಪೂರ್ಣ ಕಥೆಯನ್ನು ದಿನ ದಿನಗಳ ಅನುಭವದ ವಿವರಗಳೊಂದಿಗೆ ಹೇಳುತ್ತಾ ಹೋಗಬೇಕೆನ್ನುವುದು ನನ್ನ ಉದ್ದೇಶವಲ್ಲ. ಆದರೆ ಮೊದಲಿನ ಎರಡು ದಿನಗಳ ಅನುಭವವನ್ನು ಅನಿವಾರ್ಯವಾಗಿ ಹೇಳಬೇಕಾಗುತ್ತದೆ. ಎರಡನೇ ಆಟ ಕಟೀಲಿನ ಬಳಿಯ ಶಿಬರೂರಿನಲ್ಲಿ ಆಗಿತ್ತು.
ಅಂದಿನದು ‘ಪಟ್ಟಾಭಿಷೇಕ’ (ಪಾದುಕಾ ಪಟ್ಟಾಭಿಷೇಕದ ಕಥೆ.) ಅನುಭವದಲ್ಲಿ ನನಗೆ ಅಣ್ಣನಾದ ಅಳಿಕೆ ರಾಮಯ ರೈಗಳು ತಾನು ಭರತನ ಪಾತ್ರವಹಿಸಿ, ನನಗೆ ರಾಮನ ಪಾತ್ರವನ್ನೇ ತೆಗೆಸಿಕೊಟ್ಟಿದ್ದರು.
ರಾಮಯ ರೈಗಳು ನಾಟ್ಯಪ್ರವೀಣ. ಮಾತುಗಾರಿಕೆಯಲ್ಲೂ ಮುಂದು. ವ್ಯಾಸಂಗ ಮಾಡುತ್ತಲೇ ಇರುವುದು ಅವರ ಅಭ್ಯಾಸ.
ನಾಟ್ಯ ಬಲ್ಲ ಅವರೆಡೆಯಲ್ಲಿ ನಾನೆಲ್ಲಿ? ಎಂಬುದೇ ನನ್ನ ಕೊರಗು. ಆದರೆ, ಅವರೇ ನನಗೆದುರಾಗಿ ರಂಗದಲ್ಲಿ ಬಂದಾಗ ಆ ಕೊರಗು ಅದಾವ ಮಾಯದಿಂದಲೋ ಕಾಣದಾಯಿತು. ಚಿತ್ರಕೂಟದ ರಾಮ ಭರತರ ಸಮಾಗಮ ಅತ್ಯುದ್ಭುತವೆನಿಸತು. ನನಗೆ ಬಂದ ಆ ಸನ್ನಿವೇಶದ ಸಹಜ ಸ್ಫೂರ್ತಿ ಅದಕ್ಕೆ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಪರಿಮಾಣದಲ್ಲಿ ರಾಮಯ ರೈಗಳ ಪಾತ್ರ ಸ್ಫೂರ್ತಿಯೂ ಕಾರಣ.
ಮರುದಿನ ಶ್ರೀ ಶೆಟ್ಟರು ವೇತನದ ವಿಷಯ ಪ್ರಸ್ತಾಪ ಮಾಡಿದರು.
ಅವರಿಗೆ ಕೊಡಬಹುದಾದ ಸೂಕ್ತ ಉತ್ತರ ನನ್ನಲ್ಲಿ ಇರಲಿಲ್ಲ.
ಕಲೆಯಲ್ಲಿ ನಾನು ಆಗ ತಾನೇ ಅಂಬೆಕಾಲಿಟ್ಟಿದ್ದ ಕೂಸು. ಕಲೆಯ ಮೇಲಿನ ಪ್ರೀತಿಯೇ ನನ್ನನ್ನು ಮೇಳದವನಾಗಲು ಪ್ರೇರೇಪಿಸಿತಲ್ಲದೆ, ಹೊಟ್ಟೆಪಾಡಿನ ಹೋರಾಟವಲ್ಲ. ಅಲ್ಲದೆ, ವೇತನ ಪಡೆಯಬೇಕೆಂದರೆ ಅದಕ್ಕೆ ತಕ್ಕ ಅರ್ಹತೆಯೂ ಬೇಡವೆ?
“ಸಂಪಾದನೆಯ ದೃಷ್ಟಿ ನನಗಿಲ್ಲ. ಕಲಿಯಬೇಕೆಂಬ ಆಸೆ ಮಾತ್ರ ತುಂಬಾ ಇದೆ. ಅದಕ್ಕೆ ನೀವು ಸಹಕರಿಸಿದರೆ, ಅದುವೇ ನನ್ನ ಸಂಬಳವಾಗುತ್ತದೆ. ನಿಮಗೆಕೊಡಬೇಕೆನಿಸಿದಷ್ಟು-ಕೊಡಲು ಅನುಕೂಲವಾದಷ್ಟು ಕೊಡಿ. ನನ್ನ ಖರ್ಚಿಗೆ ಕಡಿಮೆಯಾಗುವುದಾದರೆ ಮನೆಯಿಂದ ಬೇಕಾದರೂ ತರಿಸಿಕೊಳ್ಳಬಹುದು” ಎಂದೆ.
ನನ್ನ ಮಾತು ಕೇಳಿ ಅವರಿಗೇನನ್ನಿಸಿತ್ತು ಎಂದು ಇದುವರೆಗೂ ನನಗೆ ತಿಳಿಯಲು ಆಗಲಿಲ್ಲ.
ಅಂದಿನಿಂದ ಅವರು ನನ್ನ ವೆಚ್ಚಕ್ಕೆ (ಅದು ಕಡಿಮೆಯೇನೂ ಆಗಿರಲಿಲ್ಲ) ಯಾವ ಕೊರತೆಯೂ ಬಾರದಂತೆ ನೋಡಿಕೊಂಡರು.
ಅವರ ವಿಶ್ವಾಸವನ್ನು ಉಳಿಸಿಕೊಂಡೇ ಆ ವರ್ಷದ “ಪತ್ತನಾಜೆ”ಗೆ (ವೃಷಭ ಮಾಸ ಹತ್ತರಂದು) ಗೆಜ್ಜೆ ಬಿಚ್ಚುವ ದಿನದ ಸೇವೆಯಾಟವಾಡಿ ಮನೆಗೆ ಬಂದೆ….
‘ನಾನೂ ವೇಷಧಾರಿಯಾಗಬೇಕು.’
‘ನಾಟ್ಯವಿಲ್ಲದ ವೇಷ-ವೇಷವೇ ಅಲ್ಲ!’
‘ನನ್ನಲ್ಲಿ ನಾಟ್ಯವಿಲ್ಲ- ನಾನು ವೇಷಧಾರಿ ಆಗುವುದು ಹೇಗೆ?’
ಯಕ್ಷಗಾನಕ್ಕಾಗಿ ‘ಕಲಾಮಂಡಲಿ’ಗಳು ಆಗ ಇರಲಿಲ್ಲ (ಈಗಲೂ ಇಲ್ಲ). ತಿಳಿದವರಲ್ಲಿ ಹೋಗಿ ಇದ್ದು ಕಲಿಯಲು ಪರಿಸ್ಥಿತಿ ಅನುಕೂಲವಾಗಿರಲಿಲ್ಲ.
ಸಮಸ್ಯೆಯನ್ನು ಗೆಳೆಯ ಕೆ. ಪಿ. ಗೋಪಾಲಕೃಷ್ಣರಲ್ಲಿ ಚರ್ಚಿಸಿದೆ.
“ತಿಳಿದಿರುವವರಲ್ಲಿಗೆ ಹೋಗುವುದೇಕೆ? ತಿಳಿದವರನ್ನು ಇಲ್ಲಿಗೆ ಕರೆಸಿದರಾಗದೆ?” ಎಂದರವರು.
“ನನ್ನೊಬ್ಬನಿಂದಲೇ ಅದು ಸಾಧ್ಯವಾಗುವ ಕೆಲಸವೆ?”
“ಬೇಡ. ಯಕ್ಷಗಾನ ಶಿಕ್ಷಣಕ್ಕಾಗಿ ಒಂದು ಶಾಲೆಯನ್ನು ತೆರೆಯೋಣ” ಎಂದರು. ಅಂದೇ ಪರಿಚಿತರ ಮಳಿಗೆಯೊಂದು ಖಾಲಿ ಇದ್ದುದನ್ನು ತಿಳಿದು ಅಲ್ಲಿ ನಮ್ಮ ಶಾಲೆಯನ್ನು (ಕನ್ಯಾನದಲ್ಲಿ) ತೆರೆಯಲು ನಿರ್ಧರಿಸಿದೆವು. ಹಾಡುಗಾರಿಕೆ, ಮೃದಂಗ-ಚೆಂಡೆಗಳ ವಾದನ, ಇವುಗಳನ್ನು ಕಲಿಯ ಬಯಸುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಕಲಿಸಿ ಕೊಡಲೂ ಮುಂದಾಗುವವರಿದ್ದರು. ಆದರೆ, ನಾಟ್ಯ ಕಲಿಯಲಂತೂ ನಾವಿದ್ದೆವು. ಕಲಿಸುವವರು ಬೇಕಲ್ಲ?
ಯಕ್ಷಗಾನ ಕಲಾವಿದರೂ, ವರ್ಷದ ಆರು ತಿಂಗಳು ಜೀವನೋಪಾಯಕ್ಕೆ ಬೇರೆ ದಾರಿ ಹುಡುಕಬೇಕಾಗುತ್ತಿತ್ತು. ಹೆಚ್ಚಿನವರು ಬೇಸಾಯ ಮಾಡುವವರು.
ಮಳೆಗಾಲದ ಅವಧಿಯಲ್ಲಿ ಪ್ರಾರಂಭವಾದ ನಮ್ಮ ಶಾಲೆಗೆ ಬರಲು ಸಾಧ್ಯವಿರುವವರಾದರೂ ಯಾರು?
ಕೇಳಿದವರು ಕೆಲವರು ಸ್ಪಷ್ಟವಾಗಿ “ಬರಲಾರೆ”ವೆಂದರು. ಇನ್ನು ಕೆಲವರು- ಬರಲಾರೆವಂದು ನೇರವಾಗಿ ಹೇಳುವ ಬದಲು –ನಮ್ಮೆಲ್ಲರ ತಲೆಗೂ ಮೀರಿದ ಸಂಭಾವನೆ ಬೇಕೆಂದರು.
ಶಾಲೆಯ ಉದ್ಘಾಟನೆಯ ಬೆನ್ನಲ್ಲೇ ಮುಕ್ತಾಯವನ್ನೂ ಮಾಡಬೇಕಾಗುವುದೆ? ಎಂದು ನಾವು ಕಂಗೆಟ್ಟಾಗ, ಸಮೀಪದ ಕುಂಬಳೆಯಲ್ಲಿರುವ ಕಾವುಗೋಳಿ ಕಣ್ಣನವರ ಸುದ್ದಿಯನ್ನು ನಮಗೆ ಯಾರೋ ತಿಳಿಸಿದರು.
ಕುರುಡು ಧೈರ್ಯ
ಶ್ರೀ ಕಣ್ಣನವರ ವೇಷಗಳ ವೈಭವವನ್ನು ನಾನು ಕೇಳಇ ತಿಳಿದಿದ್ದೆ. ಮಸುಕು ನೆನಪಿನಿಂದಲಾದರೂ ಕಂಡಿದ್ದೆ. ಅವರ ನಾಟ್ಯಕ್ಕೆ ಮಿಕ್ಕುದು ಇನ್ನಿಲ್ಲವೆಂದು ಹಲವರು ಆಡಿಕೊಂಡಿದ್ದುದೂ ನೆನಪಿತ್ತು. ಯಕ್ಷಗಾನದ ವಿಶಿಷ್ಟ ವಿನ್ಯಾಸಗಳೆನಿಸಿದ ರಂಗಪ್ರವೇಶದ ಕೆಲವು ನೃತ್ಯಗಳ ಪರಂಪರೆಯನ್ನೇ ಅವರು ತನ್ನೊಳಗೆ ಸೆರೆ ಹಿಡಿದುಕೊಂಡವರು ಎಂದಿದ್ದರು ಅನುಭವಿಗಳು.
ಯಾವುದೋ ಕುರುಡು ಧೈರ್ಯ ತಳೆದು, ಅವರಲ್ಲಿಗೆ ನಾವಿಬ್ಬರೂ ಹೋದೆವು. ನಮ್ಮ ಆಸೆಯನ್ನು ತೋಡಿಕೊಂಡೆವು.
“ಈ ಕಾಲದಲ್ಲಿ ಇಂತಹ ಆಸೆಯೆ? ನಮ್ಮ ಕಾಲದ ನಂತರ ಯಕ್ಷಗಾನದ ಶಾಸ್ತ್ರೀಯಂತೆ ಅಳಿಯುವುದಲ್ಲಾ ಎಂಬ ಬೇಸರ ನನಗಿತ್ತು. ನಾಟ್ಯ ಕಲಿಯಬೇಕು ಎನ್ನುವವರೇ ಈಗ ಅತಿ ವಿರಳ. ಉತ್ಸಾಹದಿಂದ ಮುಂದೆ ಬಂದಿದ್ದೀರಿ. ಕಲಿಸಲು ಬರುವುದಿಲ್ಲ ಎಂದರೆ ದೇವರು ಮೆಚ್ಚಿಯಾನೆ?” ಎಂದು ನುಡಿದು, ನಾವು ಕಣ್ಣೊರಸಿಕೊಳ್ಳುವಂತೆ ಮಾಡಿದರು.
ನಾಟ್ಯಯಾತ್ರೆ
“ವಿದ್ಯೆ”ಯ ಮಟ್ಟ ಅವರಲ್ಲಿ ಕಡಿಮೆ ಆಗಿರಬಹುದು. ಆದರೆ ಅವರದು ಸಂಸ್ಕೃತಿ ಇರುವ ಜೀವ.
ಶ್ರೀ ಕಣ್ಣನವರು ನಮ್ಮೆಡೆಗೆ ಬಂದರು. ತಮ್ಮಲ್ಲಿ ಇದ್ದುದೆಲ್ಲವನ್ನೂ ನಮಗೆ (ಮುಖ್ಯವಾಗಿ ನನಗೆ) ಧಾರೆಯೆರೆಯುವ ಹಂಬಲದಿಂದ ಕನ್ಯಾನದಲ್ಲಿ ನಿಂತರು.
ಆ ಮಳೆಗಾಲ, ವರುಣನ ನಾಟ್ಯ ಇಂದ್ರನ ನಿರ್ದೇಶನದಲ್ಲಿ ನಡೆಯುತ್ತಿತ್ತು. ನನ್ನ ನಾಟ್ಯಯಾತ್ರೆ ಸಾಗುತ್ತಿತ್ತು.
ಬೆಳಗ್ಗೆ ಎದ್ದು ಜಡಿ ಮಳೆಯಲ್ಲಿ 3 ಮೈಲುಗಳ ನಡಿಗೆ. ರಸ್ತೆಯ ಸಮೀಪಕ್ಕೆ ಬಂದ ತರುವಾಯ ಕನ್ಯಾನದವರೆಗಿನ ಕೆಲವು ಮೈಲುಗಳ ಸೈಕಲ್ ಸವಾರಿ.
ಗುರುಗಳು ಹೇಳಿಕೊಟ್ಟುದನ್ನು ಗಟ್ಟಿ ಮಾಡಿಕೊಂಡು, ಅವರು ಬಯಸಿದಷ್ಟು ಬಾರಿ ಕುಣಿದು, ಮುಂದಿನ ಹೆಜ್ಜೆಗಳನ್ನು ಗುರುತಿಸಿಕೊಂಡು ಕತ್ತಲಾಗುವ ಹೊತ್ತಿಗೆ ಮನೆಗೆ ಪಯಣ.
ಮನೆಯಲ್ಲೂ ರಾತ್ರಿ ಬಾಯಿ ತಾಳಗಳ ಹಿಮ್ಮೇಳಕ್ಕೆ ‘ಏಕಲವ್ಯನ ಅಭ್ಯಾಸ’.
ತಾಳಗಳೆಲ್ಲ- ಚಿಕ್ಕಂದಿನಿಂದಲೂ ಕೇಳಿ ಕೇಳಿ ‘ಕರ್ಣಗತ’ವಾಗಿದ್ದುವು ಲಯಜ್ಞಾನದ ತಿಳಿವು ಮೊದಲೇ ಮೂಡಿತ್ತು. ಹೇಳಿಕೊಟ್ಟಿದ್ದ ಹೆಜ್ಜೆಗಳನ್ನು ನೆನಪಿಲ್ಲಿಟ್ಟುಕೊಂಡರೆ, ಕಾಲಿನ ಸ್ನಾಯುಗಳನ್ನು ಬೇಕಾದಂತೆ ಮಣಿಸುವ ಕೆಲಸ ಅಷ್ಟೊಂದು ಪ್ರಯಾಸದ್ದಾಗಿ ಕಾಣಿಸಲಿಲ್ಲ.
ಪರಂಪರೆಯಲ್ಲಿ ಅವರ ಕೈಗೆ ಬಂದಿದ್ದ ಎಲ್ಲ ನೃತ್ಯಗತಿಗಳನ್ನೂ ಕಣ್ಣನವರು ನನಗೆ ಹೇಳಿಕೊಟ್ಟರು. ಕಲಿಯಲೂ ಉತ್ಸಾಹ, ಕಲಿತುದನ್ನು ಉಳಿಸಿಕೊಳ್ಳಲೂ ಲವಲವಿಕೆಯನ್ನು ತೋರಿದ ಕಾರಣ ಮೂರೇ ತಿಂಗಳ ಅವಧಿಯಲ್ಲಿ “ಇನ್ನು ಸಾಕು” ಎಂದರು.
ಅವರನ್ನು ಬೀಳ್ಕೊಡುವ ದಿನವೇ- ಈ ಕಲೆಗೆ ಕೊನೆಯವರೆಗೂ ನನ್ನಿಂದ-ನಾನು ತಿಳಿದು ಅಪಚಾರವಾಗಬಾರದು ಎಂದು ನಿರ್ಧರಿಸಿದೆ.
ಆಟದ ಪೀಕಲಾಟ
ಅಲ್ಲಿ ಇಲ್ಲಿ ಕೆಲವು ದಿನ ವಿರಾಮದ ಭೇಟಿಗಳಲ್ಲಿ ಕಳೆದು ‘ಯಕ್ಷಗಾನ ರಂಗದಲ್ಲಿ ವೇಷಧಾರಿಯಾಗಿ ಕೆಲಸ ಮಾಡಬಲ್ಲೆ’ನೆಂಬ ಧೈರ್ಯದಿಂದ ಮನೆಗೆ ಮರಳಿದಾಗಲೇ- ಆಟದ ಒಂದು ಪೀಕಲಾಟ ಕಾದಿತ್ತು. ವೇಷ ಹಾಕುವ ಮೊದಲು ಹೇಳದೆ ಹೊರಟು ಬಂದಿದ್ದವನು ನಾನು. ‘ನನ್ನ ಮಗನೂ ಆಟದಲ್ಲಿ ವೇಷ ಹಾಕುತ್ತಾನಂತೆ’ ಎಂಬ ಸುದ್ದಿ ಕೇಳಿ ತಿಳಿದ ನನ್ನ ತಂದೆಯವರು ನನ್ನನ್ನು ಮನೆಗೆ ಕರೆಸಿ ಛೀಮಾರಿ ಹಾಕಿದ್ದರು. ಅವರನ್ನು ಹೇಗಾದರೂ ಮನವೊಲಿಸಿ, ನಮ್ಮ ಮನೆತನಕ್ಕೆ ಹೆಸರು ಕೆಡದಂತೆ ನೋಡಿಕೊಳ್ಳುವ ಭರವಸೆಯನ್ನಿತ್ತು. ತಿರುಗಿ ಆಟದ ಸ್ಥಳಕ್ಕೆ ಓಡಿದ್ದೆ. ಅದರೊಂದಿಗೇ ಶ್ರೀ ಕೊರಗಪ್ಪ ಶೆಟ್ಟಿ ಅವರ ಮೇಳದಲ್ಲಿ ನಾನಿರುವುದಾದ ಕಾರಣ, ಅವರ ವ್ಯಕ್ತಿತ್ವದ ಪರಿಚಯ ತಂದೆಯವರಿಗೂ ಇದ್ದುದರಿಂದ, ಮೊದಲ ಒಪ್ಪಿಗೆಯ ನಂತರದ ದಾರಿ ಸುಗಮವಾಗಿತ್ತು.
ಒಮ್ಮೆ ಆಶೀರ್ವಾದವಿತ್ತ ನಂತರ, ಕಲಾಪೇಕ್ಷೆ ನನ್ನಲ್ಲಿ ಸಂಪೂರ್ಣವಾಗಿ ವಿಕಾಸಗೊಳ್ಳಬೇಕೆಂದು ತಂದೆಯವರೂ ಬಯಸಿದ್ದರು. ಮಗನ ಹೆಸರು ಕೆಲವರ ಬಾಯಲ್ಲಿ ಕೇಳಿ ಬರತೊಡಗಿದೆ ಎಂದಾಗ ಸಂತೋಷಗೊಂಡಿದ್ದರು.
“ ….ಮೇಳದ….ಯರು ನಿನ್ನೆ ಬಂದಿದ್ದರು ಮಗು.”
ಆ ಮಹನೀಯರೂ ತಂದೆಯವರೂ ಸ್ನೇಹಿತರು ಎಂಬುದನ್ನು ನಾನು ತಿಳಿದಿದ್ದೆ.
“ಏಕಂತೆ?” ಎಂದೆ.
“ನೀನು ಈ ವರ್ಷ ಅವರ ಮೇಳಕ್ಕೆ ಹೋಗಬೇಕಂತೆ. ಕಳುಹಿಸಿಕೊಡು ಎಂದು ನನ್ನಲ್ಲಿ ಹೇಳಿದ್ದಾರೆ.”
“ನೀವೇನು ಹೇಳಿದಿರಿ?”
“ಖಚಿತವಾಗಿ ಅಲ್ಲವಾದರೂ ಆಗಲಿ ಎಂಬ ಅರ್ಥ ಬರುವ ಉತ್ತರವನ್ನೇ ಕೊಟ್ಟೆ.”
“ಛೇ!”
ಹೊಸ ಯೋಚನೆ
ಪತ್ತನಾಜೆಯಂದು ಹೊರಡುವಾಗಲೇ, ಮುಂದಿನ ವರ್ಷವೂ ಮೇಳಕ್ಕೆ ಬರುವುದಾಗಿ ಕೊರಗಪ್ಪ ಶೆಟ್ಟಿಯವರಿಗೆ ಮಾತು ಕೊಟ್ಟಿದ್ದೆ.
ಆತ್ಮ ಸ್ನೇಹಿತನಂತೆ ನೋಡಿಕೊಂಡ ಅವರನ್ನು ಅಷ್ಟು ಸುಲಭವಾಗಿ ಬಿಡಲಾಗುವುದೆ?
ಇರುವ ವಿಷಯವನ್ನು ಅವರಲ್ಲಿ ವಿವೇಚಿಸಿದೆ. ಹಾಗಾದರೆ ಇನ್ನೇನು ದಾರಿ? ಎಂದು ಇಬ್ಬರೂ ಯೋಚಿಸಿದೆವು.
ಬಹಳ ಹೊತ್ತಿನ ಯೋಚನೆಯ ತರುವಾಯ, ಇಬ್ಬರಿಂದಲೂ ಬಗೆಹರಿಯದ ಈ ಸಮಸ್ಯೆಯನ್ನು ಮೂರನೆಯವರ ಬಳಿಗೇ ಕೊಂಡೊಯ್ಯುವುದು ಕ್ಷೇಮ ಎನಿಸಿತು.
ಹಾಗೆ, ಮರುದಿನ ಎರಡೂ ಮೇಳಗಳ ಯಜಮಾನರೂ ಮಾತು ಕೇಳಬಹುದಾದ ಶ್ರೀ ಎನ್. ಎಸ್. ಕಿಲ್ಲೆಯವರಿದ್ದ ಮಂಗಳೂರಿಗೆ ಓಡಿದೆ. ಅವರಲ್ಲಿ ನನ್ನ ಸಂದಿಗ್ಧ ಸ್ಥಿತಿಯನ್ನು ನಿವೇದಿಸಿ, ನೀವೇ ಯಾವುದಾದರೂ ದಾರಿ ತೋರಿಸಿ ಎಂದೆ.
ಅವರು ಇಬ್ಬರನ್ನೂ ಕರೆಸಿ, ಅವರೊಡನೆ ಮಾತನಾಡಿ, ಇಬ್ಬರಿಗೂ ನೋವಾಗದ ಒಂದು ಪರಿಹಾರ ತೋರಿಸಿಕೊಟ್ಟರು. ಅವರ ಪರಿಹಾರದ ಫಲರೂಪವಾಗಿ ನಾನು ಆ ವರ್ಷವೂ ಕಟೀಲು ಮೇಳಕ್ಕೆ ಹೋಗುವಂತಾಗಿ, ನನ್ನ ಮಾತು ಉಳಿದುಕೊಂಡಿತು. ಷಷ್ಠಿಯ ಸಮಯಕ್ಕೆ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಆಟವಾಡಿದ ತರುವಾಯ ನನ್ನ ಕೆಲವು ಆಸೆ-ಆಕಾಂಕ್ಷೆಗಳನ್ನು ಶ್ರೀ ಶೆಟ್ಟಿಯವರಲ್ಲಿ ಹೇಳಿಕೊಂಡೆ.
ಅರ್ಥ ನಿರೂಪಣೆಯಲ್ಲಿ ಬರುವ ಕೆಲವೊಂದು ದೋಷಗಳನ್ನು ಹೇಗಾದರೂ ತಿದ್ದಬೇಕೆಂಬುದು, ಆಸೆಗಳಲ್ಲಿ ಒಂದು. ಯಕ್ಷಗಾನದಲ್ಲಿ ಪಾತ್ರವಹಿಸವವರು ಹೆಚ್ಚಿನವರ ಮನೆಮಾತು ಕನ್ನಡವಾಗಿರುವುದಿಲ್ಲ(ನಾನು ಪ್ರಸ್ತಾಪಿಸುತ್ತಿರುವುದು ತೆಂಕುತಿಟ್ಟಿನ ಯಕ್ಷಗಾನವನ್ನು ಮಾತ್ರ. ಬಡಗುತಿಟ್ಟಿನ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ಅರ್ಹತೆನ್ನು ನಾನು ಇನ್ನೂ ಪಡೆದಿಲ್ಲ.) ಅದುವಲ್ಲದೆ, ವಿದ್ಯಾ ವ್ಯಾಸಂಗವನ್ನೂ ಆಗಿನ ವೇಷಧಾರಿಗಳಲ್ಲಿ ಹೆಚ್ಚಿನವರು ಮಾಡಿರಲಿಲ್ಲ. ಹೇಳಿ ಕೊಟ್ಟಿದ್ದುದನ್ನು ಕಲಿತಿರುವುದಕ್ಕಿಂತಲೂ, ಕೇಳಿ ಕಲಿತುದನ್ನು ಕೆಡಿಸುವ ಬುದ್ಧಿಯೂ ಹೆಚ್ಚು ಇತ್ತು. ಅದಕ್ಕಿಂತಲೂ ಹೆಚ್ಚಾಗಿ ತಮಗಿಚ್ಛೆ ಬಂದಂತೆ- ಬೇಡದಲ್ಲೂ- ಅಪ್ರಾಸಂಗಿಕ ಮಾತುಗಳನ್ನು ಸೇರಿಸಿಕೊಳ್ಳುವ ಅಭ್ಯಾಸ ಹೆಚ್ಚಿತ್ತು.
ಎಲ್ಲಕ್ಕಿಂತಲೂ ಹೆಚ್ಚು ತಲೆನೋವು ತರುತ್ತಿದ್ದ ವಿಷಯವೆಂದರೆ, ಮಿತಿ ಮೀರಿದ ಆಶ್ಲೀಲ ನುಡಿಗಳು.
ಮಾತುಗಾರಿಕೆಯ ಮಟ್ಟವನ್ನು ಉನ್ನತಗೊಳಿಸಬೇಕು; ಹೇಗಾದರೂ ಮಾಡಿ ‘ನಮ್ಮವರ ಮಾತು ಶುದ್ಧ’ ಎನಿಸಬೇಕು ಎಂದು ಶೆಟ್ಟರಲ್ಲಿ ಹೇಳಿದೆ.
“ಅದಕ್ಕೆ ಏನಾಗಬೇಕು, ಮಾಡಿ” ಎಂದೇ ಅವರು ಅಪ್ಪಣೆ ಇತ್ತರು.
ಮಾತಿನ ಪರಿಶುದ್ದತೆಯನ್ನು ಕಾಪಾಡಬೇಕಾದುದು ಅಗತ್ಯ ಎಂದು, ಮೊದಲಾಗಿ ನನ್ನ ಜೊತೆಯವರಲ್ಲಿ ಕೇಳಿಕೊಂಡೆ. ಅವರ ಒಪ್ಪಿಗೆ ದೊರೆತ ತರುವಾಯ ಕಿರಿಯರಲ್ಲೂ ಹೇಳಿದೆ. ಅವರು ಕೂಡಾ, ಸೂಚನೆಗೆ ಅನುಮೋದನೆಯನ್ನೇ ಇತ್ತರು.
ಅಂತೆಯೇ, ಆ ವರ್ಷದ ತಿರುಗಾಟದಲ್ಲಿ ಬ್ರಾಹ್ಮಣರ ಹಾಸ್ಯ, ಅರ್ಧನಾರೀಶ್ವರ (ಸಭಾ ಲಕ್ಷಣದಲ್ಲಿ) ಇವುಗಳಲ್ಲೂ, ದೂತರಾಗಿ ಬರುವವರ ಮಾತುಗಳಲ್ಲೂ ಅಶ್ಲೀಲ ಸ್ವಲ್ಪ ಸ್ವಲ್ಪವಾಗಿ ಕಾಣದಾಗುತ್ತಾ ಬಂತು.
ಮರ್ಯಾದೆಯ ಮನೆವಂದಿಗರು ಹೆಂಗಸರನ್ನು ಕರೆದುಕೊಂಡು ಆಟಕ್ಕೆ ಬಂದರೆ, ಮುಖ ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ತಪ್ಪಿಹೋಯಿತು.
ವೇಷ ವಿಪರ್ಯಾಸ
ಯಜಮಾನರಿಂದ ಸಾಕಷ್ಟು ಸ್ವಾತಂತ್ರ್ಯ ಪಡೆದ ನಾನು, ಮನಸ್ಸಿನಲ್ಲಿದ್ದ ಇನ್ನೊಂದು ‘ಸುಧಾರಣೆ’ಯ ಕಡೆಗೂ ಗಮನ ಕೊಟ್ಟೆ. ಪಾತ್ರಗಳು ಯಾವಾಗಲೂ ಪದ್ಧತಿಯ ವೇಷ ಭೂಷಣಗಳಿಂದಲೇ ಅಲಂಕೃತರಾಗಿ ರಂಗಸ್ಥಳಕ್ಕೆ ಬರುತ್ತಾ ಇದ್ದುದು, ಮೊದಲಿನಿಂದಲೂ ಬಂದ ರೂಢಿ ಎನಿಸಿತ್ತು. ಕೆಲವೊಂದು ಸನ್ನಿವೇಶಗಳಲ್ಲಿ, ಭಾಗವತರ ಬಾಯಿಂದ ಪದ್ಯಗಳಲ್ಲಿ ಕೇಳಿ ಬರುವ ವರ್ಣನೆಗಳಿಗೂ ದೃಶ್ಯದಲ್ಲಿ ಕಾಣಬರುವ ವೇಷಕ್ಕೂ ಏನೇನೂ ಸಾಮ್ಯವಿಲ್ಲದಾಗಿ ವಿಪರ್ಯಾಸವಾಗುತ್ತಿತ್ತು.
ಜಟಾವಲ್ಕಲಧಾರಿಗಳಾಗಿ ರಾಮಲಕ್ಷ್ಮಣರು ಕಾಡಿಗೆ ಹೊರಟರು ಎಂದು ಕವಿ ನುಡಿದಾಗ, ರಾಮ-ಲಕ್ಷ್ಮಣ ಇವರಿಬ್ಬರೂ ರಾಜಯೋಗ್ಯವಾದ ಉಡುಗೆ-ತೊಡುಗೆಗಳಿಂದಲೇ ಮೆರೆಯುತ್ತಿದ್ದರು. ಇಬ್ಬರ ತಲೆಯಲ್ಲೂ ಕಿರೀಟಗಳು ಇರುತ್ತಿದ್ದವು.
ಅಂತಹ ಪ್ರಸಂಗಗಳಲ್ಲಿ ರಾಮಲಕ್ಷ್ಮಣರು ವನವಾಸ ಮಾಡುವವರಂತೆಯೇ ಇರಬೇಕು ಎಂದೆ.
ಯಜಮಾನರು ‘ಅಸ್ತು’ ಎಂದರು. ಉಳಿದವರು ತಲೆ ಬಾಗಿದರು.
ಅಂಜನೇಯನ ವೇಷ, ಅವನಿಗಾಗಿಯೇ ಇರುವ ಒಂದು ವಿಶಿಷ್ಟ ಕಿರೀಟದಿಂದ ಮಾತ್ರವೇ ಗುರುತಿಸುವಂತೆ ಇರುತ್ತಿತ್ತು. ಉಳಿದ ವೇಷ-ಭೂಷಣಗಳೆಲ್ಲ, ರಾಕ್ಷಸ ಪಾತ್ರಗಳವು. ಆ ಕಿರೀಟದಿಂದಲೂ, ಆ ಕಪಿಚೇಷ್ಟೆಗಳಿಂದಲೂ (ಕೆಲವೊಮ್ಮೆ ಮಾತಿನಿಂದಲೂ) ಅವನು ಹನುಮಂತ ಎಂದು ತಿಳಿಯುವ ಪರಿಸ್ಥಿತಿ ಇತ್ತು.
ಅದನ್ನೂ ಬದಲಾಯಿಸಬೇಕು. ಹನುಮಂತ ವಾನರ ವೀರನೆಂದಾದರೆ, ಅವನ ವೇಷವೂ ಅಂತೆಯೇ ಇರಬೇಕು ಎಂದು ಬಯಸಿದೆ.
“ನೀನೇ ಮಾಡಿ ತೋರಿಸು” ಎಂದರು ಶ್ರೀ ಶೆಟ್ಟರು.
ಹೊಸ ಮಾರುತಿ
ಮಾರುತಿಯ ಮೈಯನ್ನೇ ಹೋಲುವ ಕೃತಕ ರೋಮಗಳಿಂದ ಅಂಗಿಯೊಂದನ್ನು ತಯಾರಿಸಿದೆ. ಅಂಗಿಯ ಬಣ್ಣವನ್ನೇ ಹೋಲುವಂತೆ ಮುಖದ ಬಣ್ಣವನ್ನೂ ಬದಲಾಯಿಸಬೇಕು ಎಂದುಕೊಂಡೆ. ಚಿತ್ರಣವಂತೂ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು.
ಇರಾ ಎಂಬ ಊರಿನಲ್ಲಿ ನಿಶ್ಚಯಿಸಿದ ಆಟಕ್ಕೆ (ಹನುಮಂತನ ಪ್ರಥಮ ಪ್ರಯೋಗಕ್ಕಾಗಿಯೇ ಎಂದರೂ ಹೆಚ್ಚಲ್ಲ) “ಚೂಡಾಮಣಿ” ಪ್ರಸಂಗವನ್ನು ಆಯ್ದುಕೊಂಡೆವು.
ಹನುಮಂತನ ಪಾತ್ರಕ್ಕಾಗಿಯೇ ಸಿದ್ಧಪಡಿಸಿಕೊಂಡಿದ್ದ ನಾಟ್ಯದ ಹೆಜ್ಜೆಗಳೊಂದಿಗೆ ರಂಗಸ್ಥಳವನ್ನು ಪ್ರವೇಶಿಸಿದಾಗ ಜನ ಸಮೂಹದ ಕೈ ಚಪ್ಪಾಳೆಯೇ ನನ್ನನ್ನು ಸ್ವಾಗತಿಸಿತು.
ಅಷ್ಟೊಂದು ಹುರುಪು ಬಾರದೆ, ಜನರು ಪ್ರಥಮ ಪ್ರವೇಶದಲ್ಲಿಯೇ ಯಾರನ್ನೂ ಮೆಚ್ಚಲಾರರು. ಪ್ರಯೋಗ ಫಲಕಾರಿಯಾಗಬಹುದು ಎಂಬ ಧೈರ್ಯ ಬಂದಿತು.
ಅಂದು ಅಶೋಕವನದ ಸೀತೆಯಿಂದ ಹನುಮ ಚೂಡಾಮಣಿಯನ್ನು ಪಡೆದು ರಾಮನ ಬಳಿಗೊಯ್ದಾಗ, ಯಕ್ಷಗಾನ ಕಲಾಮಾತೆಯಿಂದ ಸುಧಾರಣೆಯ ಆಶೀರ್ವಾದದ ಮಣಿಯನ್ನು ಪಡೆದು ರಸಿಕ ರಾಮರೆಡೆಗೆ ಒಯ್ಯುತ್ತಲಿದ್ದೇನೆ ಎಂದೇ ನನ್ನ ಭಾವನೆಯಾಗಿತ್ತು.
ಹಿಂದೆ, ರಂಗಸ್ಥಳಕ್ಕೆ ಬೀಳುತ್ತಲಿದ್ದ ದೀವಟಿಗೆಯ ಬೆಳಕಿನಲ್ಲಿ ಸುಸ್ಪಷ್ಟವಾಗಿ ಕಾಣುವ ರೀತಿಯ ಬಣ್ಣಗಾರಿಕೆ ಇದ್ದಿತು. ಅನಂತರ ಪೆಟ್ರೊಮ್ಯಾಕ್ಸ್ ದಿನಗಲು ಕಾಲಿಟ್ಟಾಗ, ಆ ಬಿಳಿಯ ಬೆಳಕಿಗೂ, ಬಳಿವ ಬಣ್ಣಕ್ಕೂ ಹೊಂದಿಕೆಯಾಗುವುದೆ? ಎಂದು ಯಾರೂ ಪರಿಶೀಲಿಸಿ ನೋಡುವ ತಾಳ್ಮೆ ತೆಗೆದುಕೊಂಡಿರಲಿಲ್ಲ.
ಮುಖವರ್ಣಿಕೆ- ವೇಷಭೂಷಣಗಳು- ಹತ್ತಿರಕ್ಕೂ, ದೂರಕ್ಕೂ ಒಂದೇ ಬಗೆಯಾಗಿ ಕಾಣುವಂತಹ ವೇಷ ವೈವಿಧ್ಯಗಳ ಕುರಿತು ಯೋಚಿಸಿದ್ದೆ. ಅವುಗಳನ್ನೆಲ್ಲ ಒಂದೊಂದಾಗಿ ಮಾಡಿ ನೋಡುವ ಅವಕಾಶ ಒದಗುತ್ತಾ ಬಂದಿತು.
ಇಂದಿಗೆ, ಹನುಮಂತನ ವೇಷಕ್ಕೆ ಬಣ್ಣಗಾರಿಕೆ ಹೇಗೆ? ವೇಷಭೂಷಣಗಳು ಯಾವುವು? ಎಂದು ಯಾರಾದರೂ ಪ್ರಶ್ನಿಸಿದರೆ ‘ಚೂಡಾಮಣಿ’ಯಲ್ಲಿ ಕಂಡುಬರುವ ಹನುಮಂತನ ವರ್ಣನೆಯನ್ನೇ ಮಾಡುವವರು ಹೆಚ್ಚು.
ಹಿಂದೆ ಇದ್ದ ಹನುಮಂತನ ವೇಷ ಹಿಂದಿನ ಆಟಗಳನ್ನು ನೋಡಿದ್ದೇವೆ-ಎನ್ನುವವರಿಗೂ, ಬಹಳ ಹಿಂದಿನಿಂದಲೇ ಪಾತ್ರವಹಿಸುತ್ತಲಿದ್ದವರಿಗೂ ನೆನಪಿರಬಹುದು. ಅವರಲ್ಲೂ ಕೆಲವರು “ಅದು ಹೇಗಿತ್ತು ಎಂದು ನನಗೆ ಸರಿಯಾಗಿ ನೆನಪಿಲ್ಲ” ಎಂದರೂ ಆಶ್ಚರ್ಯಪಡಬೇಕಾಗಿಲ್ಲ.
ನಾನು ಮಾಡಿದುದು ತಪ್ಪಾಯಿತೆ? ಪರಂಪರೆಯನ್ನು ಹಾಗೆ ಬದಲಾಯಿಸಬಹುದಿತ್ತೆ? ಎಂದು ನನ್ನನ್ನು ನಾನೇ ಕೇಳಿಕೊಳ್ಳುವ ಕಾಲ ಆಗ ಬಂದಿರಲಿಲ್ಲ.
ಅಸೂಯೆ ತಂದ ಆಡಳಿತ
ಮಾಡುತ್ತಲಿದ್ದ ಸುಧಾರಣಾ ಪ್ರಯೋಗಗಳನ್ನು ಮೇಳದ ಯಜಮಾನರಾದ ಶ್ರೀ ಕೊರಗಪ್ಪ ಶೆಟ್ಟಿಯವರು ಸ್ವಾಗತಿಸುತ್ತಿದ್ದರು. ಅಂತೆಯೇ, ಪ್ರೇಕ್ಷಕ ವರ್ಗದವರಿಂದಲೂ ಮೆಚ್ಚುಗೆ ಗಳಿಸುತ್ತಿದ್ದೆವು.
ಇತರ ಕೆಲವು ತಾಪತ್ರಯಗಳನ್ನು ಸಹಿಸಿಕೊಂಡಾದರೂ, ಕಲಾ ವ್ಯವಸಾಯವನ್ನು ಹುಲುಸಾಗಿ ಮಾಡುತ್ತೇನೆ, ಆಸೆಯ ಕೆಲವು ಬಳ್ಳಿಗಳಿಗಾದರೂ ನೀರೆರೆಯುತ್ತೇನೆ ಎನ್ನುತ್ತಲೇ ವರ್ಷದ ಮುಕ್ಕಾಲು ಭಾಗವನ್ನು ನೂಕಿದೆ.
ಮಾತ್ಸರ್ಯದ ಮೊಳಕೆ
ನಾನು ತಿಳಿದಿದ್ದಂತೆಯೇ, ಕೆಲವೊಂದು ಮಂದಿ ಇತರ ಕಲಾವಿದರ ಮಾತ್ಸರ್ಯ ಬೀಜದ ಮೊಳಕೆಯಾಗಿತ್ತು. ಆದರೆ, ನಾನು ಹೋಗುತ್ತಲಿರುವುದು ಸರಿಯಾದ ದಾರಿ ಎಂಬ ಆತ್ಮವಿಶ್ವಾಸ ನನಗಿತ್ತು. ಹೇಗಾದರೂ ನನ್ನ ಮೇಲೆ ಮತ್ಸರವಿದ್ದರೆ ಅದು ನನ್ನ ಮೇಲಷ್ಟೆ ಪ್ರಯೋಗವಾಗಬೇಕು-ಬೇರಾರನ್ನೂ ಮುಟ್ಟಲಾರದು ಎಂದುಕೊಂಡಿದ್ದೆ.
ಆದರೆ, ಪತ್ತನಾಜೆಗೆ ಇನ್ನು 15 ದಿನಗಳು ಮಾತ್ರವೆ ಇವೆ ಎನ್ನುವಾಗ-
ಆ ಮಾತ್ಸರ್ಯದ ಬಿಸಿ ಎಲ್ಲರನ್ನೂ ಮುಟ್ಟಿ ಒಮ್ಮೆಗೆ ಬೇಯಿಸಿತು.
ಆ ವರ್ಷ ಶೆಟ್ಟರು ಮೇಳದ ವ್ಯವಹಾರವನ್ನು ಇನ್ನೊಬ್ಬರು ಪಾಲುದಾರರೊಡನೆ ಸೇರಿಕೊಂಡು ಮಾಡಿದ್ದರು. ಪಾಲುದಾರರಾದರೂ ಮೇಳದ ಆಡಳಿತದಲ್ಲಿ ನೇರವಾಗಿ ಅದುವರೆಗೆ ಹಸ್ತಕ್ಷೇಪ ಮಾಡುತ್ತಿರಲಿಲ್ಲ.
ಆದರೆ, ತಮಗಿದ್ದ ಪ್ರಾಮುಖ್ಯ ಅದೆಲ್ಲಿ ಕಳೆದುಹೋಗುವುದೋ ಎಂಬ ಭಯವಿದ್ದ ಕೆಲವರು ನಟರು, ‘ಬುದ್ಧಿ ಕಲಿಸುವ’ ಒಂದು ಉಪಾಯವನ್ನು ಆ ಪಾಲುದಾರರಿಂದ ಮಾಡಿಸಿದರು.
ಕಿವಿ ಚುಚ್ಚಿದವರ ಮಾತನ್ನು ಕೇಳಿಕೊಂಡು, ಪಾಲುದಾರರೂ ಉಪಾಯಕ್ಕೆ ಸೈ ಗುಟ್ಟಿದರು.
ಪೇಜಾವರದ ಬಳಿಯ ಒಂದು ಊರಿನಲ್ಲಿ ಆಟವಾಗಬೇಕಾಗಿದ್ದ ದಿನ ಭಾಗವತರು ಮತ್ತು ಮುಖ್ಯ ವೇಷಧಾರಿಗಳು ಮೇಳವನ್ನು ಬಿಟ್ಟು ಹೊರಟರು!
ಆಟ ನೋಡಲು ಜನರು ಸಿಗುತ್ತಾರೆ- ಆಡುವವರೇ ಸಿಗಲಾರರು ಎಂಬ ಹಾಗಾಯಿತು ಪರಿಸ್ಥಿತಿ.
ಬೇರೆಯವರನ್ನಾದರೂ ತಂದು ಆಟವಾಡೋಣ ಎಂದರೆ, ಪತ್ತನಾಜೆಗೆ ಸಮೀಪದ ದಿನಗಳಲ್ಲಿ ಆಳೆತ್ತರಕ್ಕೆ ಹಣ ಸುರಿಯುವೆನೆಂದರೂ ಸಿಗುವ ವೇಷಧಾರಿಗಲು ಇರಲಿಲ್ಲ.
ಪತ್ತನಾಜೆಯ ಸೇವೆ ಆಟಕ್ಕೆ ಮೊದಲು ಮೇಳವನ್ನು ವಿಸರ್ಜಿಸುವುದೆಂದರೆ- ಅದಕ್ಕಿಂತ ದೊಡ್ಡ ತೇಜೋವಧೆ ಬೇರಿಲ್ಲ.
ಶೆಟ್ಟರು ತಲೆಯ ಮೇಲೆ ಕೈ ಹೊತ್ತರು. ನಾನು ದಿಙ್ಮೂಢನಾದೆ.
ಏನು ಮಾಡಲೂ ನನಗೆ ತೋಚಲಿಲ್ಲ. ಆದರೂ, ಸಮಾಧಾನ ತಳೆದುಕೊಂಡು, ಮೊದಲೇ ನಿಶ್ಚಯವಾಗಿದ್ದ ಆಟಕ್ಕಾಗಿ ಪೇಜಾವರ ಮುಟ್ಟಿದೆವು. ಅಲ್ಲಿ ಆ ರಾತ್ರಿ, ಯಾರೋ ಒಬ್ಬರು ಭಾಗವತರನ್ನು ಎರವಲು ಪಡೆದು, ಒಬ್ಬೊಬ್ಬರು 3-4 ವೇಷಗಳಂತೆ ಹಾಕಿ ಹೇಗಾದರೂ ಆಟ ಕಳೆಯಿತು ಎನಿಸಿದೆವು.
ಬೇರೆ ಜನರನ್ನು ತಾರದೆ ಗತ್ಯಂತರವಿಲ್ಲ. ಎಲ್ಲಿಂದ? ಶೆಟ್ಟರು ಏನನ್ನೂ ಹೇಳುವ ಸ್ಥಿತಿಗೆ ಬಂದಿರಲಿಲ್ಲ. ನಾನು?
ಜನಸಂಗ್ರಹ
ಎಲ್ಲಿಂದಲಾದರೂ ಜನರನ್ನು ತರಲೇಬೇಕು ಎಂದುಕೊಂಡೇ ಮುಖದಿಂದ ಬಣ್ಣ ಅಳಿಸಿದೆ.
ಅರ್ಧ ತಿಳಿದವರಾದರೂ ಸರಿ, ಹೊಸಬರಾದರೂ ಸರಿ, ಇಂದು ರಾತ್ರೆಯ ಆಟಕ್ಕೆ ಜನರು ಬೇಕೇ ಬೇಕು. ಮನಸ್ಸಿನ ಕಣ್ಣನ್ನು ಎಲ್ಲ ಕಡೆಗಳಿಗೂ ಹರಿಸಿದೆ.
ಛೆ! ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆಯುವಿಯಾ ಎಂದಿತು ನೆನಪು.
ನಮ್ಮ ಮನೆಯ ಬಳಿಯಲ್ಲೇ –ನಮ್ಮ ಕುಟುಂಬದವರೇ ಇರುವಾಗ! “ಮನೆಗೆ ಹೋಗಿ ಬರುತ್ತೇನೆ” ಎಂದು ಶೆಟ್ಟರೊಡನೆ ಹೇಳಿ, ಅಲ್ಲಿಂದ ಮಂಗಳೂರಿಗೆ ಸೈಕಲ್ ತುಳಿದೆ.
ಮಂಗಳೂರಿನಿಂದ ಕುಂಬಳೆಯವರೆಗೆ ರೈಲು ಪ್ರಯಾಣ. ಕುಂಬಳೆಯಲ್ಲಿ- ಮೇಳಕ್ಕೆ ಹೋಗುವುದನ್ನು ಬಿಟ್ಟಿದ್ದ- ಇಬ್ಬರು ವೇಷಧಾರಿಗಳು ಸಿಕ್ಕಿದರು. ಅವರನ್ನು ಅಲ್ಲಿಂದ ಪೇಜಾವರಕ್ಕೆ ಕಳುಹಿಸಿಕೊಟ್ಟು ಕುಂಬಳೆಯಿಂದ ತಿರುಗಿ ಸೈಕಲ್ ಸವಾರನಾದೆ. ಮನೆಗೆ ಬಂದು, ನಮ್ಮ ದೊಡ್ಡಪ್ಪಂದಿರ ಮಕ್ಕಳನ್ನು ಕೂಡಿಹಾಕಿ, ಅನಂತರವೂ ಸೈಕಲ್ ತುಳಿದು ಬೇರೆಬೇರೆ ಕಡೆಗಳಿಗೆ ಹೋಗಿ ಇನ್ನೂ ಕೆಲವರನ್ನು ಒಟ್ಟು ಮಾಡಿದೆ.
(ಅದೊಂದು ದಿನ – ಕಡಿಮೆ ಎಂದರೆ-45 ಮೈಲುಗಳಷ್ಟು ಮಾರ್ಗವನ್ನು ಸೈಕಲ್ ಏರಿಯೇ ಸುತ್ತಿದ್ದೆ.)
ಅಂತೂ ರಾತ್ರೆಯ ಹೊತ್ತಿಗೆ ಎಲ್ಲರೂ ಪೇಜಾವರ ತಲುಪಿದರು. ಹೋದ ಸ್ವಲ್ಪ ಹೊತ್ತಿನಲ್ಲೇ ವೇಷಕ್ಕೂ ಕುಳಿತಿರಬೇಕಾಯಿತು.
ಆದರೆ, ಶೆಟ್ಟರ ಸ್ನೇಹದ ಸಾಲದ ಸ್ವಲ್ಪಾಂಶವನ್ನಾದರೂ ತೀರಿಸಿದ ತೃಪ್ತಿ ಮತ್ತು ಬಣ್ಣದ ಬದುಕಿಗಾಗಿ ಇದ್ದ ಉತ್ಸಾಹ, ಅಂದಿನ ವೇಷದಲ್ಲಿ ನನ್ನ ಅಯಾಸವನ್ನೇನೂ ತೋರಗೊಡಲಿಲ್ಲ.
ಪತ್ತನಾಜೆಯವರೆಗೂ ನಮ್ಮ ತಿರುಗಾಟ ಯಶಸ್ವಿಯಾಗಿಯೇ ಆಯಿತು.
‘ಸೇವೆ’ಯಲ್ಲಿ ಗೆಜ್ಜೆ ಬಿಚ್ಚಿ ಮನೆಗೆ ಬಂದೆ. ಅಂತಯೇ ಒಂದು ಸಿದ್ಧಾಂತದ ತಡಿಗೂ ಬಂದೆ.
ಯಕ್ಷಗಾನ ಪ್ರಪಂಚವೆಂದರೆ ಒಂದು ಮಹಾಸಾಗರ. ದೂರದಿಂದ ನೋಡುವವನಿಗೆ ಅದು ಬಹು ಆಕರ್ಷಣೀಯ. ಬದಿಯಲ್ಲಿ ನಿಂತವನಿಗೆ, ಅಲ್ಲಿ ಕಾಣುವ ಕಲಾ ವೈಭವದ ತೆರೆಗಳ ಸೊಬಗು ಅವರ್ಣನೀಯ. ಆರಂಭದ ದಿನಗಳಲ್ಲಿ ಅದರಲ್ಲಿ ಈಸುವವನ ಆನಂದ ಅರ್ಷೇಯ. ಆದರೆ, ಒಂದೆರಡು ಬಾರಿ ಮುಳುಗಿ ಎದ್ದಾಗ, ತೆರೆಗಳ ಹೊಡೆತ ಬಲಗುಂದಿಸುತ್ತದೆ. ನೀರೊಳಗೆ ಇರುವ ಕ್ರೂರ ಜೀವಿಗಳ ಪರಿಚಯವಾಗುತ್ತದೆ. ಅವುಗಳ ವಂಚನೆ- ಮತ್ಸರಗಳ ಹಿಡಿತ ಧೃತಿಗೆಡಿಸುತ್ತದೆ. ಒಳ ಜಗಳ- ಮಾತ್ಸರ್ಯಗಳ ಜಂಜಾಟ, ಮೇಳದ ತಿರುಗಾಟಕ್ಕೆ ಹೋಗಬೇಕು ಎನ್ನುವ ನನ್ನ ಆಸೆಯನ್ನು ದಿಕ್ಕಾಪಾಲು ಮಾಡಿತ್ತು.
ಈ ದೀಪಾವಳಿಗೆ, ನಾನಾಗಿ ಎಲ್ಲೂ ಹೋಗುವುದಿಲ್ಲ. ನನ್ನ ವೇಷಗಳಿಗೆ ಬೆಲೆ ಇದೆ ಎಂದಾದರೆ, ಯಾರಾದರೂ ಕರೆಸಿಕೊಳ್ಳುತ್ತಾರೆ. ಒಂದೇ ಮೇಳಕ್ಕೆ ಅಂಟಿಕೊಂಡು ಒದ್ದಾಡುವ ಬದಲು, ಬರಹೇಳಿದ ಕಡೆಗಳಿಗೆ ಹೋಗುವುದೇ ವಾಸಿ. ಬೇಕಾದಾಗ ವಿರಾಮವೂ ಸಿಗುತ್ತದೆ ಎಂದು ಧೈರ್ಯವಾಗಿ ಮನೆಯಲ್ಲೇ ಕುಳಿತೆ.
ಕುಳಿತಿದ್ದುದು ದೀಪಾವಳಿಯವರೆಗೆ ಮಾತ್ರ. ಮನೆಯಲ್ಲಿದ್ದಾಗ ಓದುವ ಒಂದು ಅಭ್ಯಾಸವಿತ್ತು. ವಿರಾಮದಲ್ಲಿ ಕೆಲವೊಂದು ಪುಸ್ತಕಗಳನ್ನು ಓದಿದ್ದೆ. ಒಂದು ಪುಸ್ತಕ ಮಾತ್ರ ದೀಪಾವಳಿಯ ಮೊದಲು ಅರ್ಧ ಓದಿದ್ದು, ಅನಂತರ ಓದಲು ಸಾಧ್ಯವಾಗದೆ ಹೋಯಿತು.
ಮೇಳಕ್ಕೆ ಹೋಗುವುದಿಲ್ಲವಂತೆ ಎಂಬ ಸುದ್ದಿ ಹಬ್ಬಿತ್ತು. ಆದುದರಿಂದ ಕರೆಗಳು ಬರಲಾರಂಭಿಸಿದವು.
ಬಾಲಲೀಲೆಯ ಕೃಷ್ಣ, ಪಾರಿಜಾತದ ಕೃಷ್ಣ, ಚೂಡಾಮಣಿಯ ಹನುಮಂತ ಇತ್ಯಾದಿ ವೇಷಗಳ ಹೆಸರಿಗೆ, ಕೆಲವು ಕಡೆಗಳಿಂದ ಹೇಳಿಕೆಗಳು ಒಂದರ ಹಿಂದೊಂದು ಬರತೊಡಗಿದವು. ಯಾವ ಮೇಳದ ಕಟ್ಟುನಿಟ್ಟಿಗೂ ಸಿಗದೆ ವೇಷ ಹಾಕಬಹುದಿತ್ತಾದರೂ, ಕೆಲವೊಮ್ಮೆ ಆಪ್ತರೆನಿಸಿದವರು ಇಬ್ಬರು ಒಂದೇ ದಿನ ಕರೆದು ಇಕ್ಕಟ್ಟಿನಲ್ಲಿ ಸಿಲುಕಿಸಿದುದೂ ಇತ್ತು.
ಏಳೆಂಟು ಮೈಲುಗಳ ಅಂತರದಲ್ಲಾದರೆ ಒಂದೇ ದಿನ (ರಾತ್ರಿ) ಎರಡೆರಡು ಮೇಳಗಳ ಆಟಗಳಲ್ಲಿ ವೇಷ ಹಾಕಿದ ಘಟನೆಗಳೂ ನಡೆದುವು.
ಕೆಲವೆಡೆಗಳಲ್ಲಿ “ವಿಠಲ ಶಾಸ್ತ್ರಿಯವರ ವೇಷ ಮಾಡಿಸುತ್ತೀರಾ? ಹಾಗಿದ್ದರೆ ಮಾತ್ರ ವೀಳ್ಯ” ಎನ್ನುವ ಪರಿಸ್ಥಿತಿಯೂ ಬಂದಿತ್ತೆಂದು ಕೇಳಿದ್ದೆ.
ಇದರಿಂದಾಗಿ, ಬೇಸಿಗೆಯಿಡೀ ಸ್ವಲ್ಪವೂ ಬಿಡುವಿಲ್ಲದೆ ತಿರುಗಾಡಬೇಕಾಯಿತು.
ಅರ್ಥಿಕ ದೃಷ್ಟಿಯಲ್ಲೂ ಅನುಕೂಲವಾಯಿತು.ಐದಾರು ಮೇಳಗಳು- ತೆಂಕುತಿಟ್ಟಿನ-ಕಲಾವಿದರು ಹೆಚ್ಚಿನವರ ಪರಿಚಯವಾಯಿತು. ಅವರಲ್ಲಿ ಹಲವರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಅವಕಾಶವಾಯಿತು. ನನ್ನ ವೇಷಗಳಲ್ಲಿದ್ದ ನ್ಯೂನತೆಗಳನ್ನು ತಿದ್ದಿಕೊಳ್ಳಲು ಸಾಧ್ಯವಾಯಿತು.
ವರ್ಷಾಕಾಲದಲ್ಲೂ ನನ್ನ ಪರಿಭ್ರಮಣ ನಿಲ್ಲಲಿಲ್ಲ.
ಹಲವೆಡೆಗಳಿಂದ ತಾಳಮದ್ದಳೆಗಳಲ್ಲಿ ಭಾಗವಹಿಸಬೇಕೆಂದು ಒತ್ತಾಯದ ಆಮಂತ್ರಣಗಳು ಬರುತ್ತಿದ್ದವು. ಪ್ರಸಿದ್ಧರ ಯಾವುದೇ ಕೂಟಗಳನ್ನಾದರೂ ಬಿಡುವ ಮನಸ್ಸು ನನಗೂ ಇರಲಿಲ್ಲ.
ಶ್ರೀಮಾನ್ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಶ್ರೀಮಾನ್ ಎನ್. ಎಸ್, ಕಿಲ್ಲೆಯವರು, ಶ್ರೀಮಾನ್ ಕೆ. ಪಿ. ವೆಂಕಪ್ಪ ಶೆಟ್ಟರೇ ಮೊದಲಾದ ಕಲಾವಿದರ ಕೂಡುವಿಕೆ ಎಂದಾದರೆ, ಇತರ ಯಾವ ಕಾರ್ಯಕ್ರಮವನ್ನಾದರೂ ಬದಿಗಿರಿಸಿ ಹೋಗುತ್ತಿದ್ದೆ.
ಹಣೆ- ಭಾರ
ಅವರಾದರೂ, ನನ್ನ ಒಟ್ಟಿಗೆ ತೋರಿದ್ದ ಆದರ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಅವರೆಡೆಯಲ್ಲಿ ನಾನು ಅಪ್ರಬುದ್ಧ. ಆದರೂ ಅವರು ನನ್ನನ್ನು ಸಮಾನಸ್ಕಂಧನಂತೆ ನಡೆಸಿಕೊಳ್ಳುತ್ತಿದ್ದರು. ವಿದ್ವತ್ ಪೂರ್ಣ ವಿಮರ್ಶೆಯಿಂದ ನನ್ನ ಪಾತ್ರ ನಿರೂಪಣೆಗೆ ಸಾಣೆ ಹಿಡಿಯುತ್ತಿದ್ದರು. ಪುರಾಣ ಪಾತ್ರಗಳಲ್ಲಿರುವ ವೈಶಿಷ್ಟ್ಯಗಳನ್ನು ತೋರುತ್ತಿದ್ದರು. ಪುರಾಣಗಳಲ್ಲಿ ಇರುವ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಪ್ರಶ್ನೆ ಹಾಕಿ- ಬಿಡಿಸುವುದರಲ್ಲಿ ನೆರವಾಗುತ್ತಿದ್ದರು.
ಅಂತೂ, ಮಳೆಗಾಲದಲ್ಲಿ ತಾಳಮದ್ದಳೆ ಕೂಟ, ಬೇಸಿಗೆಯಲ್ಲಿ ಆಟಗಳಿಗೆ ಓಡಾಟ-1943-44 ಎರಡು ವರ್ಷಗಳನ್ನು ‘ಮನೆ ಸೇರುವುದು ಅಪೂರ್ವ’ ಎಂದು ಹೇಳಿಸಿಕೊಂಡೇ ಕಳೆದೆ.
ಅಪೂರ್ವವೆನಿಸಿ ಸಿಗುತ್ತಿದ್ದ ಬಿಡುವು. ಅದು ಮೈ-ಕೈಗಳಿಗೆ ಮಾತ್ರ. ಮನಸ್ಸಿಗಲ್ಲ.
ಯಕ್ಷಗಾನದ “ಹಣೆಬರಹ”ವೇ (ಕೆಲವು ವೇಷಧಾರಿಗಳು ಅದನ್ನೇ ಅನ್ವರ್ಥವಾಗಿ ‘ಹಣೆಭಾರ’ವೆನ್ನುವುದೂ ಇದೆ) ನನ್ನ ತಲೆ ತಿನ್ನುತ್ತಿತ್ತು.
ಒಂದು ದಿನವಿಡೀ ಹಾಸಿಗೆಯ ಮೇಲೆ ನಿದ್ದೆಗಾಗಿ ಮಲಗಿದ್ದರೂ- ನಿದ್ರಿಸದೆ ಯೋಚನೆಯಲ್ಲೇ ಕಳೆದಿದ್ದೆ.
ಎರಡನೇ ವರ್ಷದ ಮೇಳದ ತಿರುಗಾಟದಲ್ಲೇ ನನಗಾದುದು ಮೇಳಗಳ ವಿಶ್ವರೂಪ ದರ್ಶನ. ನಿರಕ್ಷರಿಗಳೇ ಹೆಚ್ಚಾದ ಕಡೆ, ಇನ್ನೊಬ್ಬರ ಏಳಿಗೆಯನ್ನು ಅವರು ಸಹಿಸಿಕೊಳ್ಳುವುದಾದರೂ ಹೇಗೆ? ಒಣ ಪ್ರತಿಷ್ಠೆ, ಹೆಮ್ಮೆ, ಮತ್ಸರಗಳೇ ಅವರ ಬಂಡವಾಳದ ಮೂಲಧನ- ಕ್ಷೇಮನಿಧಿ ಎಲ್ಲಾ. ವಿಮರ್ಶಾದೃಷ್ಟಿಯ ಬಡ್ಡಿ ಅವರಲ್ಲಿ ಹುಟ್ಟಲಾರದು. ಯೋಗ್ಯತೆಯನ್ನು ಮೆಚ್ಚುವ ಸಹೋದ್ಯೋಗಿಗಳು ಪ್ರೀತಿಯ ಮಳೆಗರೆದರೂ, ಸ್ನೇಹಿತರಾಗುವ ಯಜಮಾನರು ಅಕ್ಕರೆಯಿಂದ ಕಂಡರೂ- ಮತ್ಸರದ ಬೆಂಕಿ ಹುಟ್ಟಿಕೊಂಡರೆ, ಅವೆಲ್ಲ ಹನಿಯುಡುಗಿ ಹೋಗುತ್ತದೆ.
ಎತ್ತಿನ ಗಾಡಿಗಳಲ್ಲಿ ಮೈ ಕುಲುಕಿಸಿಕೊಂಡು ನಿದ್ದೆಗಣ್ಣಿನ ಪ್ರಯಾಣ ಸಾಗಿಸಿದರೂ, ಉರಿಗಣ್ಣಿನಲ್ಲೇ ಹತ್ತಿಪ್ಪತ್ತು ಮೈಲಿ ಕಾಲ್ನಡಿಗೆಯ ಪ್ರಯಾಣ ಮಾಡಿದರೂ, ಅನಂತರವಾದರೂ ವಿರಾಮ ಸಿಗುವುದೆ? ಅಲ್ಲೂ ಆಯಾಸಕ್ಕೆ ದಾರಿ. ಕಲಾವಿದರ ಪಾತ್ರಗಳಲ್ಲಿ ಕೊರತೆಗಳು ಕಂಡು ಬಂದರೆ, ಅವುಗಳನ್ನು ಯಾರೂ ಹೇಳದಿದ್ದರೆ, ಅವುಗಳನ್ನು ಹಾಗೆಯೇ ಉಳಿಯಗೊಡಲಾಗುವುದೆ? ಹಾಗೇನಾದರೂ ಹೇಳಿದರೆ ಕಲಾವಿದರು ಎನಿಸಿದವರಿಗೆ ಅಸಮಾಧಾನವೇ ಹೆಚ್ಚಾಗುವುದಲ್ಲದೆ, ಬೇರೇನೂ ಆಗುವುದಿಲ್ಲವಲ್ಲ? ಹಳೆಯ ಹುಲಿಗಳ ಪಾಡು ಹಾಗೆ.
ಕಲೆಯ ಹುಚ್ಚಿನಲ್ಲಿ, ಕರೆದಲ್ಲಿಗೆ ಹೋಗುವ ನನ್ನ ಪಾಡೇ ಹೀಗಾದರೆ, ನನ್ನಷ್ಟೂ ಸ್ವಾತಂತ್ರ್ಯ ಸಿಗದ ಇತರರ ಸ್ಥಿತಿ ಯಾವುದಾಗಬಹುದು? ಆಸಕ್ತಿ ಇದ್ದರೂ, ಕಲಿತು ತಮ್ಮನ್ನು ತಾವೇ ಉತ್ತಮಪಡಿಸಿಕೊಳ್ಳುವ ಮನಸ್ಸು ಇದ್ದರೂ, ಅಂತಹ ಹೊಸಬರು ಯಾವ ದಾರಿ ಹಿಡಿಯಬೇಕಾಗಬಹುದು?
ಜೀವನಕ್ಕೆ ಸುಗಮ ಮಾರ್ಗವಾಗುವುದಿಲ್ಲ. ಆರ್ಥಿಕ ದೃಷ್ಟಿಯಲ್ಲಿ ತೃಪ್ತಿ ಕೊಡುವುದಿಲ್ಲ. ಆರೋಗ್ಯಕ್ಕೆ ಧಕ್ಕೆ ತರುತ್ತದೆ. ಆದರೂ, ಆಕರ್ಷಣೆಯ ಬಲೆಯನ್ನು ಎಲ್ಲ ಕಡೆಗಳಲ್ಲೂ ಬೀಸಿ, ನೋಡಿದವರನ್ನು, ಆಡಿದವರನ್ನು ಸೆರೆಹಿಡಿಯುವ ಶಕ್ತಿಯಾದರೂ ಈ ಯಕ್ಷಗಾನದಲ್ಲಿ ಯಾವುದಿದೆ?
ನನ್ನೊಬ್ಬನ ಮಟ್ಟಿಗೆ, ನಾನು ಬಯಸಿದ ಸ್ವಾತಂತ್ರ್ಯ ಸಿಕ್ಕಿತು. ಬೇಕಾದ ತಿದ್ದುಪಾಟುಗಳನ್ನು ಮಾಡಲಾಯಿತು. ಇತರರ ಗತಿಯೇನು? ಅವರೆಲ್ಲರಿಗೂ ಸ್ವಾತಂತ್ರ್ಯ ಸಿಗಬಹುದೆ? ಅಥವಾ, ಸರಿಯಾದ ರೀತಿಯಲ್ಲೇ ತಿದ್ದಿ ಸಾಗುವ ಸಾಮರ್ಥ್ಯವಿರಬಹುದೆ?
ನನಗೆ ಆದರ ಸಿಗತ್ತಿರಬಹುದು; ಮನ್ನಣೆಯೂ ದೊರಕಬಹುದು. ಆದರೆ ಸಮಗ್ರ ಕಲೆಗೆ? ಇರುವ ಕಲಾವಿದರಿಗೆ?
ಯಕ್ಷಗಾನ ಅಷ್ಟೊಂದು ನಿಕೃಷ್ಟ ರಂಗವೆಂದಾದರೂ ಯಾಕಾಯಿತು? ಪರಿಸ್ಥಿತಿ ಬದಲಾಗಿಲ್ಲವೆ? ಒಬ್ಬಿಬ್ಬರಾದೂ ದಕ್ಷ ಆಡಳಿತಗಾರರು ವ್ಯವಸ್ಥಿತವಾಗಿ ಮೇಳಗಳನ್ನು ನಡೆಸಿಕೊಂಡು ಹೋಗುತ್ತಿಲ್ಲವೆ? ಕಲೆಯ ಅವಸ್ಥೆಗಳಲ್ಲಿ ಏರುಪೇರಾಗುವುದು ಸಹಜವಲ್ಲವೆ? ನಾಟ್ಯಾಚಾರ್ಯನೆ ಮಂಕಾಗಿ ಹೋಗಿದ್ದ ಸನ್ನಿವೇಶಗಳು ಎಷ್ಟೋ ಇಲ್ಲವೆ?
ಅಲ್ಲಿರುವ ಆಕರ್ಷಣೆಯನ್ನುಅನುಭವಿಸಿಯೇ ತೀರಬೇಕು ಹೊರತು, ಬಾಯಿಂದ ಹೇಳಿ ತಿಳಿಸಲು ಅಸಾಧ್ಯ.
ಹೌದು. ಯಕ್ಷಗಾನವೊಂದು ಮಹಾಸಾಗರ. ಕ್ರೂರಜೀವಿಗಳನ್ನು ಅದು ತನ್ನ ಗರ್ಭದಲ್ಲಿ ಅಡಗಿಸಿಕೊಂಡು ಇರುವ ಹಾಗೆಯೇ, ಸಾಧಕನಿಗೆ ಸಿಗಬಹುದಾದ ಅನರ್ಘ್ಯ ರತ್ನವನ್ನೂ ಇರಿಸಿಕೊಂಡಿದೆ. ಕಲಾಸೇವೆಯ ಪ್ರಬಲ ಆತ್ಮವಿಶ್ವಾಸದ ಕವಚವಿದ್ದರೆ, ಆ ರತ್ನವನ್ನು ಪಡೆಯುವುದೂ ಅಸದಳವಲ್ಲ. ಎದುರು ಬರುವ ಮುಳ್ಳು ಮೀನು- ಮರಿ ತಿಮಿಂಗಿಲಗಳಿಗೆ ಅಂಜಬೇಕಾಗಿಯೂ ಇಲ್ಲ.
ನಿರ್ಧಾರ
ಕೊನೆ ಮುಟ್ಟದ ಯೋಚನೆಯಲ್ಲೇ ಇರುವಾಗ ತನ್ನಿಂದ ತಾನೇ ಒಂದು ನಿರ್ಧಾರ ರೂಪುಗೊಂಡಿತ್ತು.
ಉತ್ಕೃಷ್ಟ ಕಲೆಯ ಪ್ರದರ್ಶನವನ್ನು ನಾನೇ ಸಾಧ್ಯವಾಗಿಸಬೇಕು. ನಾನೊಬ್ಬನೇ ಅಲ್ಲ, ತಂಡದ ಎಲ್ಲರೂ ಒಳ್ಳೆಯ ‘ಮೇಳದವರಾಗಿ ನಲಿಯಬೇಕು. ನನಗೆ ಬೇಕಾದಂತೆ ಅವರನ್ನು ತರಬೇತಿ ಮಾಡಲು ಸಾಧ್ಯವಾದರೆ, ನಾನು ಹೇಳಿದಂತೆ ಅವರನ್ನು ಕೇಳಿಸಬಲ್ಲೆನಾದರೆ ಅದೇಕೆ ಸಾಧ್ಯವಿಲ್ಲ?
ನಾನು ಹೇಳಿದಂತೆ ಅವರನ್ನು ಕೇಳಿಸ…..
ನಾನೇನು ಮೇಳದ ಯಜಮಾನನೆ?
ಹೌದು. ಮೇಳದ ಯಜಮಾನ ಯಾಕಾಗಬಾರದು? ಇರುವ ಮೇಳಗಳಲ್ಲಿ ಯಾವುದಾದರೂ ಒಂದರ ಯಜಮಾನ್ಯ ಸಿಗದು ಎಂದರೆ ಹೊಸದೊಂದು ಮೇಳವನ್ನು ಕಟ್ಟಿದರಾದರೂ ಆಗದೆ?
ಹುಚ್ಚು ಮನಸ್ಸು! ಮೇಳ ಕಟ್ಟುವುದೆಂದರೆ ಗೆಜ್ಜೆಯನ್ನು ಕಾಲಿಗೆ ಕಟ್ಟಿದಂತೇನು? ಅದು ಕೂಡಾ ಎಷ್ಟೋ ಬಾರಿ ಸುಲಭವಾಗಿರುವುದಿಲ್ಲ. ಸಾವಿರಾರು ರೂಪಾಯಿಗಳನ್ನು ಸುರಿದು ಮೇಳವನ್ನು ಹೊರಡಿಸುವ ಶಕ್ತಿ ನನಗಿದೆಯೆ?
ಯೋಚನೆಯ ಮತ್ತಿನಲ್ಲೇ ನಾಲ್ಕಾರು ದಿನಗಳು ಹೇಗೆ-ಹೇಗೋ ಕಳೆದುಹೋದವು.
ಅದೇ (ಎರಡನೆಯ) ‘ಸ್ವಾತಂತ್ರ್ಯ’ದ ಮಳೆಗಾಲ. ಶ್ರೀ ಕೊರಗಪ್ಪ ಶೆಟ್ಟರು ಒಂದು ದಿನ ಇದ್ದಕ್ಕಿದ್ದಂತೆ ನಮ್ಮಲ್ಲಿಗೆ ಬಂದಿಳಿದರು.
ನನ್ನ ಯೋಚನೆಯ ಕುದುರೆಗೆ ಕಡಿವಾಣ ಹಾಕಿದರು. ಜೀನು- ಲಗಾಮುಗಳನ್ನು ಸಿದ್ಧಗೊಳಿಸಿಕೊಟ್ಟರು…. (ಮುಂದಿನ ಕಂತು ಇದೆ)
Be the first to comment on "ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ ಬಣ್ಣದ ಬದುಕು ಮರುಓದು – ಮೂರನೇ ಕಂತು"