ವಟಪುರ ಕ್ಷೇತ್ರ ಬಂಟ್ವಾಳ ಶ್ರೀ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ನಡೆದ ದೇವರ ವಿಶ್ವರೂಪ ದರ್ಶನ ಸೇವೆ ಭಗವದ್ಬಕ್ತರ ಕಣ್ಮನ ಸೆಳೆಯಿತು.
ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಕಲರವ, ಜೀವ ನದಿ ನೇತ್ರಾವತಿ ಜುಳು ಜುಳು ನಿನಾದದೊಂದಿಗೆ ಭಕ್ತರ ಸಾಲು ಹಣತೆಗಳಿಂದ ಬೆಳಗಿಸಲ್ಪಟ್ಟ ವಿಶ್ವರೂಪ ದರ್ಶನ ಬೆಳಕಿನ ಲೋಕವನ್ನೇ ಸೃಷ್ಟಿಸಿತು.
ಮುಂಜಾನೆಯ ಬ್ರಾಹ್ಮೀ ಮುಹೂರ್ತದಲ್ಲಿ ಭಜಕರು ದೇವಳದ ಸುತ್ತ ಅಳವಡಿಸಿದ ಹಣತೆಯನ್ನು ಬೆಳಗಿಸಿದರು. ದೇವಳದ ಒಳಾಂಗಣವನ್ನು ಹಾಗೂ ಮಲ್ಲಿಗೆ ಪ್ರಿಯ ಶ್ರೀ ವೆಂಕಟರಮಣ ದೇವರನ್ನು ಸಿಂಗರಿಸಿದ್ದರೆ ವೀಕ್ಷಿಸಲು ಊರಪರವೂರಿನ ಭಕ್ತರು ಮತ್ತು ಮಕ್ಕಳು ಆಗಮಿಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ದೇವಳದ ಹೊರಾಂಗಣದಲ್ಲಿ ಶಂಖ, ಚಕ್ರ, ಗದಾ, ಪದ್ಮ, ಕೊಡಲಿ, ತಾವರೆ, ತ್ರಿಶೂಲ ಮೊದಲಾದ ಚಿತ್ರ ಚಿತ್ತಾರಗಳು ಹಣತೆಗಳಿಂದ ರೂಪ ಪಡೆದವು. ಶಬರಿಮಲೆಯ ಚಿತ್ರ ಗಮನ ಸೆಳೆಯಿತು. ದೇವಳದ ಆಡಳಿತ ಮೊಕ್ತೇಸರರು, ಮೊಕ್ತೇಸರರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
Be the first to comment on "ಭಗವದ್ಭಕ್ತರ ಕಣ್ಮನ ಸೆಳೆದ ವಿಶ್ವರೂಪ ದರ್ಶನ"