ಅಧಿಕಾರಿಯಾಗಿ ನೇಮಕಗೊಂಡ ದಕ್ಷಿಣ ಭಾರತದ ಏಕೈಕ ಮಹಿಳೆ
ಇದೇ ಮೊದಲ ಬಾರಿಗೆ ಭಾರತೀಯ ಗಡಿಭದ್ರತಾ ಪಡೆ(ಬಿಎಸ್ಎಫ್)ಗೆ ಆಯ್ಕೆಯಾಗಿದ್ದ ದಕ್ಷಿಣ ಭಾರತ ಏಕೈಕ ಮಹಿಳೆ, ಕನ್ನಡಿಗ, ದ.ಕ.ಜಿಲ್ಲೆಯ ಪುತ್ತೂರಿನ ಸ್ಫೂರ್ತಿ ಭಟ್ ಈಗ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಒಂದು ವರ್ಷದ ತರಬೇತಿಯನ್ನು ಮುಕ್ತಾಯಗೊಳಿಸಿದ ಬಳಿಕ ಸ್ಫೂರ್ತಿ ಭಟ್ ಅವರನ್ನು ಪಂಜಾಬಿನ ಗುರುದಾಸ್ಪುರ್ ಜಿಲ್ಲೆಗೆ ಬಿಎಸ್ಎಫ್ನ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನೇಮಕಗೊಳಿಸಲಾಗಿದೆ. ಭಾರತೀಯ ಗಡಿ ಭದ್ರತಾ ಸೈನ್ಯದಲ್ಲಿ ಈಕೆ ಪಾಕ್ ಗಡಿಯ ಸರಹದ್ದಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ದಕ್ಷಿಣ ಭಾರತದಲ್ಲೇ ಬಿಎಸ್ಎಫ್ಗೆ ಸೇರ್ಪಡೆಯಾದ ಮೊದಲ ಮಹಿಳೆ ಎನಿಸಿದ್ದಾರೆ. ಬಿಎಸ್ಎಫ್ನಲ್ಲಿ 2013ರ ಬ್ಯಾಚ್ನಲ್ಲಿ ರಾಜಸ್ಥಾನದ ಮಹಿಳೆಯೊಬ್ಬರು ಆಯ್ಕೆಯಾಗಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಪಂಜಾಬ್ ಪ್ರಾಂತ್ಯದಲ್ಲಿ ನೇಮಕಗೊಂಡಿದ್ದರು. ಸ್ಫೂರ್ತಿ ಭಟ್ ಬಿಎಸ್ಎಫ್ನಲ್ಲಿ ನೇಮಕಗೊಂಡ ಎರಡನೇ ಮಹಿಳೆಯಾಗಿದ್ದು, ಈಕೆ 2015 ನೇ ಬ್ಯಾಚ್ ಆಗಿದ್ದಾರೆ.
ಡೆಹರಾಡೂನ್, ಜಮ್ಮು ಹಾಗೂ ಮಧ್ಯಪ್ರದೇಶದಲ್ಲಿ ಒಂದು ವರ್ಷದ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ್ದರು. ಏಪ್ರಿಲ್ ಪ್ರಥಮ ವಾರದಲ್ಲಿ ಸ್ಫೂರ್ತಿ ಭಟ್ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಸ್ಫೂರ್ತಿ ಭಟ್ ಅವರು ಮೂಲತಃ ಪುತ್ತೂರಿನ ಉಪ್ಪಿನಂಗಡಿ ಬಳಿಯ ನಿವಾಸಿ. ತಂದೆ ಕೆ.ಬಾಲಸುಬ್ರಹ್ಮಣ್ಯ ಭಟ್ ಅವರು ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ. ತರಬೇತಿ ಅವಧಿಯಲ್ಲಿ ಸ್ಫೂರ್ತಿ ಭಟ್ ವಿವಾಹವಾಗಿದ್ದು, ಈಕೆಯ ಪತಿ ಶ್ಯಾಮಕೃಷ್ಣ ಪಿ.ಎಸ್. ಇವರು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದಾರೆ. ಪ್ರಸ್ತುತ ಹರ್ಯಾಣದ ಗುರುಗಾವ್ನ ಸಿಆರ್ಪಿಎಫ್ ಅಕಾಡೆಮಿಯಲ್ಲಿ ತರಬೇತಿಯಲ್ಲಿದ್ದಾರೆ.
Be the first to comment on "ಬಿಎಸ್ ಎಫ್ ಸೇರುವವರಿಗೆ ರೋಲ್ ಮಾಡೆಲ್ ಪುತ್ತೂರಿನ ಸ್ಫೂರ್ತಿ"