ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಂಟ್ವಾಳ ರೋಟರಿ ಕ್ಲಬ್ ಪ್ರಸಕ್ತ ಸಾಲಿನಲ್ಲಿ ಹಲವಾರು ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಕ್ಲಬ್ ನ ನಿಯೋಜಿತ ಅಧ್ಯಕ್ಷ ಮಂಜುನಾಥ ಆಚಾರ್ಯ ಮತ್ತು ಅಧ್ಯಕ್ಷ ಸಂಜೀವ ಪೂಜಾರಿ ತಿಳಿಸಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸುವರ್ಣ ವರ್ಷಾಚರಣೆಗೆ ಕ್ಲಬ್ ನ ಸ್ಥಾಪಕ ಸದಸ್ಯ ದಯಾನಂದ ಕುಡ್ವ ಅವರು ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಕ್ಲಬ್ ನ “ಟೀಚ್” ಯೋಜನೆಯಡಿ ತಾಲೂಕಿನಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಸುಧಾರಣೆಗೆ ಕಾರ್ಯಕ್ರಮ ರೂಪಿಸುವುದು, ಇಂಟರಾಕ್ಟ ಕ್ಲಬ್ ನ ಮೂಲಕ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು,ಅಂಗನವಾಡಿ ಕೇಂದ್ರಗಳ ಸುಧಾರಣೆಗೆ ಯೋಜನೆ ರೂಪಿಸುವುದು, ರೋಟರಾಕ್ಟ ಕ್ಲಬ್ ಜೊತೆಗೂಡಿ ಯುವ ಸಮುದಾಯವನ್ನು ಸಂಘಟಿಸುವಂತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದ ಅವರು ಸಂಪನ್ಮೂಲ ವ್ಯಕ್ತಿಗಳಿಂದ ಉಪಯುಕ್ತವಾದ ಮಾಹಿತಿ ಹಾಗು ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
ಕಳೆದ ೪೯ ವರ್ಷಗಳಲ್ಲಿ ಪೂರ್ವಾಧ್ಯಕ್ಷರ,ಸದಸ್ಯರ ಅವಿರತ ಶ್ರಮದಿಂದಾಗಿ ಬಂಟ್ವಾಳ ರೋಟರಿ ಕ್ಲಬ್ ಹತ್ತು ಹಲವು ಸಾಧನೆಗಳನ್ನುಗೈದು ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಕ್ಲಬ್ ನ ಹಾಲಿ ಅಧ್ಯಕ್ಷ ಸಂಜೀವ ಪೂಜಾರಿ ಈ ಸಂದರ್ಭದಲ್ಲಿ ತಿಳಿಸಿದರು. ೧೯೬೯ ರ ಎಪ್ರಿಲ್ ೩ ರಂದು ೩೦ ಮಂದಿ ಸದಸ್ಯರು ಸೇರಿಕೊಂಡು ಬಂಟ್ವಾಳ ರೋಟರಿ ಕ್ಲಬ್ ನ್ನು ಸ್ಥಾಪಿಸಲಾಗಿತ್ತು. ಬಳಿಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಬೆಳವಣಿಗೆಗೆ ಬಂಟ್ವಾಳ ರೋಟರಿ ಕ್ಲಬ್ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು. ಕಾರ್ಯದರ್ಶಿ ನಾರಾಯಣ ಹೆಗ್ಡೆ,ನಿಯೋಜಿತ ಕಾರ್ಯದರ್ಶಿ ಶಿವಾನಿ ಬಾಳಿಗ, ಸುವರ್ಣವರ್ಷಾಚರಣೆ ಸಮಿತಿಯ ಸಂಚಾಲಕ ಡಾ.ರಮೇಶಾನಂದ ಸೋಮಯಾಜಿ,ಝೊನಲ್ ಲೆಪ್ಟಿನೆಂಟ್ ಕರುಣಾಕರ ರೈ, ನಿಕಟಪೂರ್ವಾಧ್ಯಕ್ಷ ರಿತೇಶ್ ಬಾಳಿಗಾ ಅವರು ಸುದ್ದಿಗೋಷ್ಠಿಯಲ್ಲಿದ್ದರು.
Be the first to comment on "ಬಂಟ್ವಾಳ ರೋಟರಿ ಕ್ಲಬ್ ನಿಂದ ಹಲವು ಜನೋಪಯೋಗಿ ಕಾರ್ಯ"