
ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಪ್ರಸ್ತುತಪಡಿಸಿದ ಗುರು ವಿದುಷಿ ರೋಹಿಣಿ ಉದಯ್ ಅವರ ಶಿಷ್ಯೆಯರು ಕಲ್ಲಡ್ಕ ಸಹೋದರಿಯರಾದ ವಿದುಷಿ ಶ್ರದ್ಧಾ ಮತ್ತು ಶ್ರಮ್ಯ ಅವರ ಭರತನಾಟ್ಯ ರಂಗಪ್ರವೇಶ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪಪ್ರಜ್ವಲನಗೊಳಿಸುವ ಮೂಲಕ ಚಾಲನೆ ನೀಡಿದ ಕರ್ನಾಟಕ ಕಲಾಶ್ರೀ ನಾಟ್ಯಾಚಾರ್ಯ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತರಾದ ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಮಾತನಾಡಿ, ತಪಸ್ಸಿನಂತೆ ಸಾಧನೆ ಮಾಡಿದರಷ್ಟೇ ನೃತ್ಯಕಲೆಯಲ್ಲಿ ಪ್ರಗತಿ ಕಾಣಲು ಸಾಧ್ಯ. ಎಷ್ಟೇ ಆಧುನಿಕತೆ ಬಂದರೂ ಕಲೆಯಲ್ಲಿ ಸಂಪ್ರದಾಯವನ್ನು ಉಳಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕ ಭಾರತಿ ಜಿ. ಭಟ್ ಮಾತನಾಡಿ, ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ, ಕಲೆ ಉಳಿಸಿ ಬೆಳೆಸಲು ಯುವಪೀಳಿಗೆ ಮುಂದಾಗಿರುವುದು ಅಭಿನಂದನೀಯ ಎಂದರು. ಕರ್ನಾಟಕ ಕಲಾಶ್ರೀ ಮಂಗಳೂರು ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಗಳೂರು ದಾಯ್ಜಿವರ್ಲ್ಡ್ ಟಿವಿ ವಾಹಿನಿಯ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ನೃತ್ಯವಷ್ಟೇ ಅಲ್ಲ ಜೀವನದಲ್ಲಿ ಸಾಧನೆ ಮಾಡಲು ತಾಳ್ಮೆಯ ಕಲಿಕೆ ಮುಖ್ಯವೆಂಬುದನ್ನು ನೃತ್ಯಪಟುಗಳು ತೋರಿಸಿದ್ದಾರೆ ಎಂದರು. ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ನೃತ್ಯಗುರು ರೋಹಿಣಿ ಉದಯ್ ತಮ್ಮ ಶಿಷ್ಯೆಯರ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕಲಾವಿದೆಯರಾದ ಶ್ರದ್ಧಾ ಮತ್ತು ಶ್ರಮ್ಯ ಅವರ ಹೆತ್ತವರಾದ ಮೋಹನ ಕಲ್ಲಡ್ಕ ಮತ್ತು ರೂಪಕಲಾ ಮತ್ತು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಸಂಚಾಲಕ ಉದಯ ವೆಂಕಟೇಶ ಭಟ್ ಉಪಸ್ಥಿತರಿದ್ದರು. ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ಜಯರಾಮ್ ಬೆಂಗಳೂರು, ವೀಣೆಯಲ್ಲಿ ವಿದ್ವಾನ್ ಗೋಪಾಲ ವೆಂಕಟರಮಣ ಬೆಂಗಳೂರು, ನೃತ್ಯನಿರ್ದೇಶನ ಮತ್ತು ನಟುವಾಂಗದಲ್ಲಿ ವಿದುಷಿ ರೋಹಿಣಿ ಉದಯ್, ಮೃದಂಗದಲ್ಲಿ ವಿದ್ವಾನ್ ಕಾರ್ತಿಕ್ ವೈಧಾತ್ರಿ ಬೆಂಗಳೂರು, ರಿದಂ ಪ್ಯಾಡ್ ನಲ್ಲಿ ಡಿ.ವಿ.ಪ್ರಸನ್ನ ಕುಮಾರ್ ಬೆಂಗಳೂರು ಸಹಕರಿಸಿದರು. ವಿಘ್ನೇಶ್ ಕಲ್ಲಡ್ಕ ಸ್ವಾಗತಿಸಿದರು. ಶ್ವೇತಾ ಅರೆಹೊಳೆ ಕಾರ್ಯಕ್ರಮ ನಿರ್ವಹಿಸಿದರು.



Be the first to comment on "ಬಂಟ್ವಾಳ: ಕಲ್ಲಡ್ಕ ಸಹೋದರಿಯರ ಭರತನಾಟ್ಯ ರಂಗಪ್ರವೇಶ"