
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಯೋಜನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಪಾಣೆಮಂಗಳೂರು ನರಿಕೊಂಬುವಿನ ಭಯಂಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಸೋಮಯಾಜಿ ಹೇಳಿದ್ದಾರೆ.

ಗುರುವಾರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ತಂಡದ ಕೆಲಸವು ಸೇವಾ ಮನೋಭಾವದಿಂದ ಕೂಡಿದ್ದು, ಯಾವುದೇ ಕೆಲಸಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಸೇವೆಗೆ ಸಿದ್ದ ಎನ್ನುವ ಭಾವನೆಯಿಂದ ದುಡಿಯುತ್ತಿರುವ ಸದಸ್ಯರ ಶಕ್ತಿಯನ್ನು ಮೆಚ್ಚುವಂತದ್ದು ತಾವು ಮಾಡುವ ಈ ಸೇವೆಯು ದೇಶಸೇವೆಗೆ ಸಮಾನವಾದುದು ಎಂದು ಎನ್. ಡಿ. ಆರ್. ಎಫ್. ಕಮಾಂಡರ್ ಶಾಂತಿಲಾಲ್ ಜಟಿಯಾ ಹೇಳಿದರು.
ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ತಂಡವು ರಾಜ್ಯದಲ್ಲಿ ಉಂಟಾಗುವ ವಿಪತ್ತಿನ ಸಂದರ್ಭದಲ್ಲಿ ತಮ್ಮದೇ ಸೇವೆ ನೀಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.


ಯೋಜನೆ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ, ಶೌರ್ಯ ಯೋಜನಾಧಿಕಾರಿ ಜೈವಂತ್ ಪಟಗಾರ, ತಾಲೂಕು ಶೌರ್ಯ ಸಮಿತಿ ಮಾಸ್ಟರ್ ಕೃಷ್ಣಪ್ಪ ಕುಲಾಲ್, ಕ್ಯಾಪ್ಟನ್ ಪ್ರಕಾಶ್, ಪ್ರಗತಿಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸದಾನಂದ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ನೇತ್ರಾವತಿ ನದಿಯ ತಟದಲ್ಲಿ ಬಂಟ್ವಾಳ ತಾಲೂಕಿನ 90 ಶೌರ್ಯ ಸ್ವಯಂ ಸೇವಕರಿಗೆ ಪ್ರಾತ್ಯಕ್ಷಿಕೆ ಮೂಲಕ ವಿಪತ್ತಿನಲ್ಲಿ ಪ್ರಥಮ ಸ್ಪಂದನೆ, ಈಜುವಿಕೆ , ಪ್ರವಾಹ ಕುರಿತು ಅಣಕು ಪ್ರದರ್ಶನ ಮತ್ತು ತರಬೇತಿ ನೀಡಲಾಯಿತು. ಈ ಸಂದರ್ಭ ನೂತನ ಶೌರ್ಯ ಸಮಿತಿಯ ತಾಲೂಕು ಮಾಸ್ಟರ್ ಹಾಗೂ ಕ್ಯಾಪ್ಟನ್ ಆಯ್ಕೆ ಮಾಡಲಾಯಿತು ಬಂಟ್ವಾಳ ಶೌರ್ಯ ಸಮಿತಿಯ ಮಾಸ್ಟರ್ ಆಗಿ ಪ್ರವೀಣ್ ಕಾಡಬೆಟ್ಟು, ಕ್ಯಾಪ್ಟನ್ ಆಗಿ ಜಗದೀಶ್ ಆಚಾರ್ಯ ಆಯ್ಕೆಯಾದರು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ ಕಾರ್ಯಕ್ರಮ ನಿರ್ವಹಿಸಿದರು.


Be the first to comment on "ಬಂಟ್ವಾಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ತರಬೇತಿ ಕಾರ್ಯಾಗಾರ"