
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆ ಬಂಟ್ವಾಳದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಅಂಬೇಡ್ಕರ್ ಕುರಿತು ಮಾತನಾಡಿದ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ.ಅಜಕ್ಕಳ ಗಿರೀಶ್ ಭಟ್, ಸಾಮಾಜಿಕವಾಗಿ ತಾರತಮ್ಯವನ್ನು ಎದುರಿಸಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿದರು. ನ್ಯಾಯವಾದಿಯಾಗಿದ್ದಾಗ ಅವಕಾಶವಿಲ್ಲದವರಿಗೆ ಧ್ವನಿ ನೀಡಲು ವಾರಪತ್ರಿಕೆ ಆರಂಭಿಸಿದರು, ದನಿ ಇಲ್ಲದವರ ಪರ ಕೋರ್ಟ್ ನಲ್ಲಿ ವಾದಿಸಿದರು.
ರಾಜಕೀಯದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಸ್ಥಾನ ಮೀಸಲಿಡುವ ಕುರಿತು ಪ್ರತಿಪಾದಿಸಿದರು. ಜನರಿಗೆ ಭೌತಿಕ ಸಂಪತ್ತು ಮುಖ್ಯವಲ್ಲ, ಆಧ್ಯಾತ್ಮಿಕ ಏಳಿಗೆ ಮುಖ್ಯ ಎಂದು ಅವರೇ ಬರೆದುಕೊಂಡಿದ್ದಾರೆ. ಬಸವಣ್ಣ, ಬುದ್ಧನಂತೆ ಅಂಬೇಡ್ಕರ್ ಅವರೂ ಆಧ್ಯಾತ್ಮದಲ್ಲಿ ಭಾರತೀಯತೆ ಪ್ರತಿಪಾದನೆ ಮಾಡಿದರು ಎಂದರು.
ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಕಾಪಾಡುವ ಮೂಲಕ ಅಂಬೇಡ್ಕರ್ ಆದರ್ಶ ಪಾಲನೆಯಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಸೇವಾ ಭಾರತಿಯ ಅಧ್ಯಕ್ಷ ನ್ಯಾಯವಾದಿ ರಮೇಶ್ ಉಪಾಧ್ಯಾಯ, ಮುಖಂಡರಾದ ಸೇಸಪ್ಪ ಬೆದ್ರಕಾಡು, ಮೋಹನ್ ಚಂಡ್ತಿಮಾರ್ ಉಪಸ್ಥಿತರಿದ್ದರು. ನವೀನ್ ಕೊಡಂಬೆಟ್ಟು ವೈಯಕ್ತಿಕ ಗೀತೆ ಹಾಡಿದರು. ಸಮಾಜದ ಏಳಿಗೆಗಾಗಿ ಶ್ರಮಿಸಿದ ಸೇಸಪ್ಪ ಬೆದ್ರಕಾಡು, ಬೇಬಿ ಮೈರಾನ್ ಪಾದೆ ಮತ್ತು ಸತೀಶ್ ಅರಳ ಅವರನ್ನು ಸನ್ಮಾನಿಸಲಾಯಿತು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಸ್ವಾಗತಿಸಿದರು. ಕೇಶವ ದೈಪಲ ವಂದಿಸಿದರು. ಕೀರ್ತಿ ವಗ್ಗ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಬಂಟ್ವಾಳದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಜಯಂತಿ ಆಚರಣೆ"