
ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್–ಬಂಟ್ವಾಳ ವತಿಯಿಂದ ‘ಹಿರಿಯರ ಚಿಂತನಾ ಸಮಾವೇಶ’ ಆ.9ರಂದು ಪಾಣೆಮಂಗಳೂರಿನ ಹಳೆ ಸೇತುವೆ ಸಮೀಪದ ನೇತ್ರಾವತಿ ನದಿ ತಟದಲ್ಲಿರುವ ಶ್ರೀ ಭಯಂಕೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ, ಸಾಮಾಜಿಕ ಬಾಂಧವ್ಯ ಹಾಗೂ ವಿಚಾರ ವಿನಿಮಯದ ಉದ್ದೇಶ ಇದರಲ್ಲಡಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,50 ವರ್ಷಕ್ಕಿಂತ ಮೇಲ್ಪಟ್ಟವರು ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಹಿರಿಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ನೆಲೆಗಟ್ಟಿನಲ್ಲಿ ಹಾಗೂ ಆರೋಗ್ಯ, ಆಧ್ಯಾತ್ಮಿಕತೆ, ಸಾಮಾಜಿಕ ಬಾಂಧವ್ಯ ಹಾಗೂ ವಿಚಾರ ವಿನಿಮಯಕ್ಕೆ ವೇದಿಕೆಯಾಗುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದವರು ಹೇಳಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 250ಕ್ಕೂ ಅಧಿಕ ಹಿರಿಯರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಗಣಹೋಮ, ರುದ್ರಾಭಿಷೇಕ, ರುದ್ರಪಠಣ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಬಳಿಕ ಗಮಕ ವಾಚನ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ವಿಚಾರಗಳ ಕುರಿತು ವ್ಯಾಖ್ಯಾನ, ಸಭಾ ಕಾರ್ಯಕ್ರಮ, ಸಾಧಕರಿಗೆ ಗೌರವಾರ್ಪಣೆ, ಯೋಗ ಪ್ರದರ್ಶನ ಹಾಗೂ ಹಿರಿಯರ ಚಿಂತನ–ಮಂಥನ ಕಾರ್ಯಕ್ರಮಗಳು ಜರಗಲಿವೆ ಎಂದರು.
ಹಿರಿಯ ನಾಗರಿಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಸಮಾಜದ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸಲು ಹಾಗೂ ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯ ಬಗ್ಗೆ ಅರಿವು ಮೂಡಿಸಲು ಈ ಸಮಾವೇಶ ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಪ್ರತಿಷ್ಠಾನದ ಪ್ರಮುಖ ಪದಾಧಿಕಾರಿಗಳಾದ ಪ್ರೊ.ಸುಬ್ರಾಯ ರಾಮ ಮಡಿವಾಳ, ರಾಮ್ ಗಣೇಶ್ ಪ್ರಭು ಕೈಕುಂಜೆ, ಅನಾರು ಕೃಷ್ಣ ಶರ್ಮಾ, ಸಂಕಪ್ಪ ಶೆಟ್ಟಿ ಸಂಚಯಗಿರಿ, ಜಯರಾಮ ಭಂಡಾರಿ, ಪ್ರಶಾಂತ ಹೊಳ್ಳ, ಶಂಕರನಾರಾಯಣ ಐತಾಳ್, ಜಯಾನಂದ ಪೆರಾಜೆ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.


Be the first to comment on "ಹಿರಿಯರ ಚಿಂತನಾ ಸಮಾವೇಶ, ಸಾಮಾಜಿಕ ಬಾಂಧವ್ಯ ವಿಚಾರ ವಿನಿಮಯ ಉದ್ದೇಶ – ಕೈಯೂರು ನಾರಾಯಣ ಭಟ್"