ಎಲ್ಲಾ ರೈತರ ನೀರಾವರಿ ಪಂಪ್ ಸೆಟ್ಟ್ ವಿದ್ಯುತ್ ಸಂಪರ್ಕ ವಿಧಿಸಿದ ಅಭಿವೃದ್ದಿ ಶುಲ್ಕವನ್ನು ತಕ್ಷಣದಿಂದಲೇ ಕೈ ಬಿಟ್ಟು ಪರಿಷ್ಕ್ರತ ಆದೇಶ ಹೊರಡಿಸುವಂತೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ. ಅಧ್ಯಕ್ಷ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.
ಈ ಕುರಿತು ರಾಜ್ಯ ಇಂಧನ ಸಚಿವರಿಗೆ ಅವರು ಪತ್ರ ಬರೆದಿದ್ದಾರೆ. ರೈತರು ತಮ್ಮ ಕೃಷಿ ಜಮೀನಿನಲ್ಲಿ ಕೃಷಿ ಸಂಬಂಧಿತ ಬೆಳೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ನೀರಾವರಿ ಪಂಪ್ ಸೆಟ್ಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯುವರೇ ಶೀಘ್ರ ವಿದ್ಯುತ್ ಸಂಪರ್ಕ ಯೋಜನೆ ಯಡಿಯಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಅರ್ಜಿ ಸಲ್ಲಿಸುವಾಗಲೇ ಠೇವಣಿಯೊಂದಿಗೆ ಅಭಿವೃದ್ದಿ ಶುಲ್ಕ ಹೆಸರಿನಲ್ಲಿ ರೂ.15,000 ಹೆಚ್ಚುವರಿಯಾಗಿ ಪಾವತಿಸಲು ಸರಕಾರದ ಇಂಧನ ಇಲಾಖಾ ಕಾರ್ಯದರ್ಶಿ ಆದೇಶ ಹೊರಡಿಸಿದ್ದರಿಂದ ರಾಜ್ಯದ ಕೃಷಿಕ ಕುಟುಂಬಗಳಿಗೆ ಮತ್ತು ರೈತರಿಗೆ ತುಂಬಾ ಹೊರೆಯಾಗಿದೆ. ರೈತರು ಸರಕಾರದ ನಿಲುವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ . ಈಗಾಗಲೇ ರಾಜ್ಯಾದಾದ್ಯಂತ ಲಕ್ಷಾಂತರ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿ ಕೆಲಸ ಆದೇಶವಾಗಿದ್ದುಕೊಂಡು ವಿದ್ಯುತ್ ಸಂಪರ್ಕ ಪಡೆಯುವ ಈ ಸಂದರ್ಭ ಇಂತಹ ಆದೇಶಗಳು ರೈತರಲ್ಲಿ ದಿಗ್ಬ್ರಮೆ ಹುಟ್ಟಿಸಿದೆ . ಸರಕಾರದ ಈ ಆದೇಶದಂತೆ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೊಳಿಸುವ ಸಂಬಂಧ ಏ.15ರಂದು ಆದೇಶವಾಗಿದೆ. ಆದರೆ ಈ ಆದೇಶ 2023ರ ಸೆ.23ರ ಬಳಿಕ ನೋಂದಣಿಯಾದ ಎಲ್ಲಾ ರೈತರಿಗೂ ಸಂಬಂಧಪಡುವಂತಾಗಿದ್ದು ,ಅಂದಿನಿಂದ ನೀರಾವರಿ ವಿದ್ಯುತ್ ಸಂಪರ್ಕ ಪಡೆದಿರುವ ರೈತರು ರೂ.15000- ಅಭಿವೃದ್ದಿ ಶುಲ್ಕ ಭರಿಸಬೇಕಾಗುತ್ತದೆ . ಇದರಿಂದ ಸರಕಾರವು ಗ್ಯಾರಂಟಿ ಯೋಜನೆಗಳ ಸಂಭ್ರಮಾಚರಣೆಗಾಗಿ ರೈತರಿಂದಲೂ ಹಣ ವಸೂಲಿ ಮಾಡಿ ರೈತರ ಬೆನ್ನೆಲುಬನ್ನು ಮುರಿದಂತೆ ಆಗಿದ್ದು ,ರೈತರಿಗೆ ತುಂಬಾ ಕಷ್ಟವಾಗಿದೆ ಎಂದವರು ತಿಳಿಸಿದ್ದಾರೆ.
Be the first to comment on "ರೈತರ ಪಂಪ್ ಸೆಟ್ ವಿದ್ಯುತ್ ಸಂಪರ್ಕಕ್ಕೆ ಅಭಿವೃದ್ಧಿ ಶುಲ್ಕದ ಹೊರೆ – ತಕ್ಷಣದಿಂದಲೇ ರದ್ದುಗೊಳಿಸಿ, ಪರಿಷ್ಕೃತ ಆದೇಶ ಹೊರಡಿಸಲು ಪ್ರಭಾಕರ ಪ್ರಭು ಮನವಿ"