ಮಳೆ ಬಂದ ಮೇಲೆ ಯೋಚಿಸುವುದಕ್ಕಿಂತ ಸಮಸ್ಯೆಗಳೇ ಬಾರದಂತೆ ಕೆಲಸ ಮಾಡಿ: ತಹಸೀಲ್ದಾರ್ ಸೂಚನೆ

ಮಳೆ ಬಂದ ಮೇಲೆ ಕಾರ್ಯಪ್ರವೃತ್ತರಾಗುವ ಬದಲು ಸಮಸ್ಯೆಗಳೇ ಬಾರದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್ ಎಚ್ಚರಿಕೆ ನೀಡಿದ್ದಾರೆ.

ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮುಂಗಾರು ಮುನ್ನೆಚ್ಚರಿಕೆ ಕುರಿತು ಪಿಡಿಓಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಅಧಿಕಾರಿಗಳು ಮಳೆಗಾಲ ಎದುರಿಸಲು ಸನ್ನದ್ಧರಾಗಬೇಕು, ಮೇ.2ರೊಳಗೆ ಅಪಾಯಕಾರಿ ಜಾಗ ಗುರುತಿಸಿ ವರದಿ ನೀಡಬೇಕು, ಅನಾಹುತಗಳು ಆಗದೇ ಇರುವಂತೆ ಮುಂಜಾಗರೂಕತೆ ವಹಿಸಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಮಾತನಾಡಿ ಸೂಚನೆನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು ಪಾಲಿಸಬೇಕು ಮಳೆಗಾಲದ ಸಂದರ್ಭ ಸಮಸ್ಯೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ನದಿ ತೀರದಲ್ಲಿ ಕಟ್ಟುನಿಟ್ಟು, ಪ್ರವಾಹ ಬಂದಾಗ ಎಚ್ಚರ:

ನೇತ್ರಾವತಿ ನದಿ ಸಹಿತ ತಾಲೂಕಿನ ನದಿ, ಹಳ್ಳಗಳ ಸಮೀಪ ಸಾರ್ವಜನಿಕರು ಅಪಾಯಕಾರಿ ಜಾಗಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಸ್ಥಳೀಯಾಡಳಿತಗಳು ಕೈಗೊಳ್ಳಬೇಕು ಎಂದು ಪುರಸಭೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಓಗಳಿಗೆ ತಹಸೀಲ್ದಾರ್ ಸೂಚನೆ ನೀಡಿದರು. ವಿಶೇಷವಾಗಿ ಪುರಸಭೆಯ ಜಾಗಗಳು, ಗ್ರಾಮಗಳಾದ ನಾವೂರು, ಅಜಿಲಮೊಗರವೇ ಮೊದಲಾದ ಜಾಗಗಳಲ್ಲಿ ಎಚ್ಚರಿಕೆ ವಹಿಸಬೇಕು, ಸೂಚನಾ ಫಲಕಗಳನ್ನು ಹಾಕಬೇಕು ಎಂದರು.

ಕಳೆದ ಮಳೆಗಾಲದ ಸಂದರ್ಭ, ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳಲ್ಲಿ ನಿರ್ಮಾಣ ಕಾರ್ಯದ ಅವ್ಯವಸ್ಥೆಗಳಿಂದ ತೊಂದರೆಗಳು ಉಂಟಾಗಿತ್ತು. ಈ ಬಾರಿ ಅದು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಹೈವೇ ಕಾಮಗಾರಿ ಸಂಬಂಧಿಸಿದ ಗುತ್ತಿಗೆದಾರರ ಪ್ರತಿನಿಧಿಯನ್ನು ಸ್ಥಳಕ್ಕೆ ಕರೆಸಿ ಸೂಚನೆಗಳನ್ನು ನೀಡಲಾಯಿತು. ಈ ವೇಳೆ ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ತಮ್ಮ ಭಾಗದ ಸಮಸ್ಯೆಗಳನ್ನು ವಿವರಿಸಿದರು. ಗೋಳ್ತಮಜಲು ಗ್ರಾಪಂ ಕಟ್ಟಡವಿರುವ ಭಾಗ ಕುಸಿತದ ಸ್ಥಿತಿಯಲ್ಲಿದ್ದು, ಅದಕ್ಕೆ ತಡೆಗೋಡೆಯನ್ನು ಹೈವೇ ಕಂಪನಿ ನಿರ್ಮಿಸಿಕೊಡಬೇಕು ಎಂದು ಪಿಡಿಓ ವಿಜಯಶಂಕರ ಆಳ್ವ ಹೇಳಿದರು. ಫ್ಲೈಓವರ್ ನಲ್ಲಿ ನೀರು ಹೊರಚೆಲ್ಲದಂತೆ ಗಮನಹರಿಸಬೇಕು. ಕಾಮಗಾರಿ ಆಗುವ ಜಾಗದಲ್ಲಿ ಜನರಿಗೆ ತೊಂದರೆ ಆಗದಂತೆ, ಎಚ್ಚರಿಕೆಯಿಂದ ಕೆಲದ ಮಾಡಬೇಕು ಎಂದು ತಹಸೀಲ್ದಾರ್ ಸೂಚಿಸಿದರು. ಆರು ತಿಂಗಳೊಳಗೆ ಹೆದ್ದಾರಿ ಕೆಲಸಗಳು ಮುಗಿಯುತ್ತದೆ, ಕಲ್ಲಡ್ಕ ಫ್ಲೈಓವರ್ ಮುಂದಿನ ತಿಂಗಳು ಸಂಚಾರಕ್ಕೆ ತೆಗೆದುಕೊಳ್ಳುತ್ತದೆ ಎಂದು ನಿರ್ಮಾಣ ಕಂಪನಿ ಪ್ರತಿನಿಧಿ ಸಭೆಗೆ ತಿಳಿಸಿದರು. ಹೆದ್ದಾರಿ ಕಾಮಗಾರಿ ನಡೆಯುವ ಪೆರಾಜೆಯಲ್ಲಿ ಈಗಾಗಲೇ ಕಂಪೆನಿ ಚರಂಡಿಗಳನ್ನು ನಿರ್ಮಿಸಿದೆಯಾದರೂ ಅದರಲ್ಲಿನ ಹೂಳು ತುಂಬಿ, ಮಳೆಗಾಲದ ಆರಂಭದ ದಿನಗಳಲ್ಲಿ ನೀರು ಹರಿಯಲು ಸಾಧ್ಯಾಗದೆ ಹೆದ್ದಾರಿಯ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯನ್ನು ಉಂಟು ಮಾಡುದರಿಂದ ಹೂಳೆತ್ತುವಂತೆ ಅವರು ತಿಳಿಸಿದರು.

ಮಳೆ, ಗಾಳಿ ಸಂದರ್ಭ ಫ್ಲೆಕ್ಸ್ ಬ್ಯಾನರ್ ಬಂಟಿಂಗ್ ಗಳು ಅಪಾಯಕಾರಿ ಸ್ಥಿತಿಯಲ್ಲಿ ಹೆದ್ದಾರಿ ಬದಿಯಲ್ಲಿ ವಾಹನ ಸಂಚಾರಕ್ಕೆ ಅಪಾಯಕಾರಿಯಾಗುವಂಥ ಸನ್ನಿವೇಶದಲ್ಲಿ ಇರುವುದು ಗಮನಕ್ಕೆ ಬಂದಿದ್ದು, ಡಿಸಿ ಈಗಾಗಲೇ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇವುಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಹೆದ್ದಾರಿ ಬದಿಯ ಪಂಚಾಯತ್ ಪಿಡಿಒಗಳು ಹಾಗು ಪುರಸಭಾಧಿಕಾರಿಗಳಿಗೆ ಸೂಚಿಸಿದರು.

ಬ್ರಿಟಿಷ್ ಸರ್ಕಾರದ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆಗಾಗಿ ಪುರಸಭೆಯ ಇಂಜಿನಿಯರ್ ಗೆ ಸೂಚಿಸಲಾಗಿತ್ತು. ಇನ್ನೂ ವರದಿ ನೀಡಿಲ್ಲವೇಕೆ, ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಸಸ್ಪೆಂಡ್ ಮಾಡಿ ಎಂದು ಮುಖ್ಯಾಧಿಕಾರಿ ನಝೀರ್ ಅವರ ಬಳಿ ತಹಸೀಲ್ದಾರ್ ಸೂಚಿಸಿದರು. ತಾಲೂಕಿನ ಹಲವೆಡೆ ತೆರೆದ ಕ್ವಾರಿಗಳು ಹಾಗೂ ಕಾಮಗಾರಿ ನಿಲ್ಲಿಸಿದ ಕ್ವಾರಿಗಳು ಅಪಾಯದ ಸ್ಥಿತಿಯಲ್ಲಿದ್ದರೆ, ಅವುಗಳನ್ನು ಗುರುತಿಸಿ, ಗುಂಡಿ ಮುಚ್ಚಿಸಲು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ತಹಸೀಲ್ದಾರ್ ನೀಡಿದ್ದಾರೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಳೆ ಬಂದ ಮೇಲೆ ಯೋಚಿಸುವುದಕ್ಕಿಂತ ಸಮಸ್ಯೆಗಳೇ ಬಾರದಂತೆ ಕೆಲಸ ಮಾಡಿ: ತಹಸೀಲ್ದಾರ್ ಸೂಚನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*