ಉಳ್ಳಾಲ ರಾಣಿ ಅಬ್ಬಕ್ಕ ಕುರಿತು ಬಹುಮುಖಿ ಚಿಂತನೆ – ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ವಿಚಾರಗೋಷ್ಠಿ

ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ಶುಕ್ರವಾರ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ತುಳು ಬದುಕು ವಸ್ತು ಸಂಗ್ರಹಾಲಯ ವತಿಯಿಂದ ರಾಣಿ ಅಬ್ಬಕ್ಕ ಬಹುಮುಖಿ ಚಿಂತನೆ ವಿಚಾರಗೋಷ್ಠಿ ನಡೆಯಿತು.

ತುಳುನಾಡಿನ ಸಿರಿತುಪ್ಪೆಗೆ ಪೊಲಿ ಹಾಕುವ ಮೂಲಕ ಸಾಂಪ್ತದಾಯಿಕವಾಗಿ ಉದ್ಘಾಟನೆ ನಡೆಯಿತು. ಬಳಿಕ ಜ್ಯೋತಿ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕಿ ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ, ಇಡೀ ಭಾರತದಲ್ಲಿ ಪೋರ್ಚುಗೀಸ್ ವಿರುದ್ಧ ಹೋರಾಡಿದ ಅಬ್ಬಕ್ಕನ ಕುರಿತು ದಾಖಲೆ ಸರಿಯಾಗಿಲ್ಲದಿರುವುದೇ ದುರಂತ. ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರು ಇಡಬೇಕು ಎಂದು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ ಎಂದು ನೆನಪಿಸಿದ ಅವರು ಹೆಣ್ಣುಮಕ್ಕಳು ಎಲ್ಲರೂ ಅಬ್ಬಕ್ಕರಾಗಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಸಂಶೋಧಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಮಾತನಾಡಿ, ಒಂದು ವೇಳೆ ಇಟಾಲಿಯನ್ ಪ್ರವಾಸಿ ಪಿಯತ್ತೊ ದೆಲ್ಲಾ ವೆಲ್ಲೆ ಅಬ್ಬಕ್ಕ ಕುರಿತು ಬರೆಯದೇ ಇದ್ದರೆ ಹಾಗೂ ಪೋರ್ಚುಗೀಸ್ ಆಕರಗಳಿಂದ ಅಬ್ಬಕ್ಕ ಕುರಿತು ಹೆಚ್ಚಿನ ಮಾಹಿತಿ ದೊರೆಯದೇ ಇದ್ದರೆ, ನಮಗೆ ಅವಳ ಬಗ್ಗೆ ತಿಳಿಯಲೂ ಸಾಧ್ಯವಿರಲಿಲ್ಲ. ವಿದೇಶಿ ಆಧಾರಗಳನ್ನು ಅವಲಂಬಿಸಿಯೇ ಅಬ್ಬಕ್ಕನ ಅಧ್ಯಯನ ಮಾಡಬೇಕಾಗುತ್ತದೆ. ಅಬ್ಬಕ್ಕನ ಬಗ್ಗೆ ಸಮಗ್ರ ಮಾಹಿತಿಯನ್ನು ನಾವು ಹೊಂದಿರದೇ ಇರುವುದು ಐತಿಹಾಸಿಕ ದುರಂತ. ಉಳ್ಳಾಲದಲ್ಲಿ ನೂರು ವರ್ಷಗಳ ಅವಧಿಯಲ್ಲಿ ಇಬ್ಬರು ಅಬ್ಬಕ್ಕ ರಾಣಿಯರು ತುಳುನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಅಬ್ಬಕ್ಕ ಹುಟ್ಟಿ ಐನೂರನೇ ವರ್ಷ ಎಂಬುದೂ ಅನುಮಾನವಿದೆ. ಗೊಂದಲ ನಿವಾರಣೆ ಆಗಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ ಅಬ್ಬಕ್ಕ ಎಂದರೆ ಯಾರು ಎಂಬುದನ್ನು ಡಾ.ತುಕಾರಾಮ ಪೂಜಾರಿ ದಂಪತಿ ತೋರಿಸಿಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಕರಾವಳಿ ಉತ್ಸವ ಮೈದಾನಕ್ಕೆ ಅಬ್ಬಕ್ಕ ರಾಣಿ ಮೈದಾನ ಎಂದು ಹೆಸರಿಡಲು ಮನಪಾ ಮತ್ತು ರಾಜ್ಯ ಸರಕಾರ ಪ್ರಯತ್ನಿಸಬೇಕು. ಅಕಾಡೆಮಿಕ್ ಚಟುವಟಿಕೆ ಕುರಿತು ತುಳು ಸಾಹಿತ್ಯ ಅಕಾಡೆಮಿ ಪ್ರಥಮ ಪ್ರಾಶಸ್ತ್ಯ ನೀಡುತ್ತದೆ, ಆಟಿದ ಕೂಟ ಕುರಿತು ಅಕಾಡೆಮಿ ಸ್ಪಷ್ಟ ನಿಲುವು ಹೊಂದಿದೆ. ಕಂಡದ ಗೊಬ್ಬು ಮಾಡುವವರು ಹಡೀಲು ಬಿದ್ದ ಗದ್ದೆಯಲ್ಲಿ ಬೆಳೆ ಬೆಳೆದರೆ ಅದೇ ದೊಡ್ಡ ಕೊಡುಗೆ ಎಂದರು.

ಬೆಳಗಿನ ಅವಧಿಯಲ್ಲಿ ಉಳ್ಳಾಲದ ಅಬ್ಬಕ್ಕ ರಾಣಿಯರು ಐತಿಹಾಸಿಕ ನೆಲೆ ಕುರಿತು ಸಂಶೋಧಕಿ ಡಾ. ಮಾಲತಿ ಕೃಷ್ಣಮೂರ್ತಿ ಬೆಳಕು ಚೆಲ್ಲಿದರು. ಕಾದಂಬರಿಗಳಲ್ಲಿ ಅಬ್ಬಕ್ಕ ವಿಚಾರದಲ್ಲಿ ಡಾ.ವಿ.ಕೆ. ಯಾದವ ವಿಚಾರ ಮಂಡಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಸಂಸ್ಥಾಪಕ ಡಾ. ತುಕಾರಾಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ವಸ್ತುವಿನ ಮುಖಾಂತರ ಚರಿತ್ರೆ ನಿರ್ಮಾಣವಾಗುತ್ತದೆ ಎಂಬುದನ್ನು ಗಮನಿಸಬೇಕು. ಸಮುದಾಯದ ಚರಿತ್ರೆಯನ್ನು ಬಿಚ್ಚಿಡಲು ಜನಸಾಮಾನ್ಯರ ಬದುಕು ಪ್ರೇರಣೆ ಆಗಬೇಕು. ಯುವಪೀಳಿಗೆಗೆ ನಮ್ಮ ನೆಲದ ಸಂಸ್ಕೃತಿ ಅರಿವು ಆಗಬೇಕು ಎಂಬ ದೃಷ್ಟಿಯಿಂದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ರೂಪುಗೊಂಡಿದೆ ಎಂದರು.ಜಯಶ್ರೀ ಪ್ರತಿಮ್ ಕುಮಾರ್ ಪ್ರಾರ್ಥಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ವಂದಿಸಿದರು. ಸಿಂಧೂರ ಟಿ.ಪಿ. ಕಾರ್ಯಕ್ರಮ ನಿರ್ವಹಿಸಿದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಉಳ್ಳಾಲ ರಾಣಿ ಅಬ್ಬಕ್ಕ ಕುರಿತು ಬಹುಮುಖಿ ಚಿಂತನೆ – ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ವಿಚಾರಗೋಷ್ಠಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*