ಕೆಲಿಂಜ ಕನ್ನಡ ಶಾಲೆಯಲ್ಲಿ ಎರಡೇ ತಿಂಗಳಲ್ಲಿ ಮೂರು ಪಟ್ಟು ಮಕ್ಕಳು.. ಈ SUCCESS STORY ಹಿಂದಿನ ಕಥೆ ಇಲ್ಲಿದೆ

ಕನ್ನಡ ಮಾಧ್ಯಮ ಶಾಲೆಯಾದ ವಿಟ್ಲ (VITTLA) ಸಮೀಪದ ಕೆಲಿಂಜದ ಸರಕಾರಿ ಶಾಲೆಯಲ್ಲಿ ಕೇವಲ 24 ಮಕ್ಕಳು ಮೊನ್ನೆ ಮಾರ್ಚ್ ತಿಂಗಳಲ್ಲಿದ್ದರು. ಈಗ ಶಾಲೆಗೆ 79 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಈ ಬದಲಾವಣೆಗೆ ಹಿರಿಯ ವಿದ್ಯಾರ್ಥಿಗಳು ನಡೆಸಿದ ದಿಢೀರ್ ‘ಕಾರ್ಯಾಚರಣೆ’ ಕಾರಣ. ಶಾಲೆ ಮಕ್ಕಳಿಗೆ ಉಚಿತ ವಾಹನ, ಇಬ್ಬರು ಶಿಕ್ಷಕಿಯರ ನೇಮಕ, ಅವರಿಗೆ ಗೌರವಧನ, ಎಲ್.ಕೆ.ಜಿ. ತರಗತಿ ಆರಂಭ, ಸ್ಪೋಕನ್ ಇಂಗ್ಲೀಷ್ ಕೋರ್ಸ್ ಹೀಗೆ ಹಿರಿಯ ವಿದ್ಯಾರ್ಥಿಗಳೇ ಆಗಿರುವ ಊರಪರವೂರವರನ್ನು ಸೇರಿಸಿ, ದೊಡ್ಡ ಮೊತ್ತದ ಧನಸಂಗ್ರಹಿಸಿ, ಅದನ್ನು ಪೂರ್ತಿ ಶಾಲೆ ಬಳಕೆಗೆಂದೇ ಮೀಸಲಿರಿಸುವ ಕಾರ್ಯವನ್ನು ಕೇವಲ ಎರಡೇ ತಿಂಗಳಲ್ಲಿ ಮಾಡಿ ತೋರಿಸಿದ್ದಾರೆ. ಈ ಯಶೋಗಾಥೆ ಕುರಿತ ವಿಶೇಷ ವರದಿ ಮತ್ತು ವಿಡಿಯೋಗಾಗಿ ಮುಂದೆ ಓದಿರಿ

ಜಾಹೀರಾತು

ಕನ್ನಡ ಕಲಿಸುವ ಸರಕಾರಿ ಶಾಲೆಯಲ್ಲಿ ಇಂಥ ದಿಢೀರ್ ಬೆಳವಣಿಗೆ ಹಿಂದೆ ಬೆನ್ನೆಲುಬಾಗಿ ನಿಂತ ಹಿರಿಯ ವಿದ್ಯಾರ್ಥಿಗಳ ತನು, ಮನ ಜೊತೆಗೆ ಧನದ ಕೊಡುಗೆ ಇದೆ. ಶಾಲೆ ಮುಚ್ಚುವ ಭೀತಿಯಲ್ಲಿದ್ದಾಗ, ಮುಖ್ಯೋಪಾಧ್ಯಾಯ ತಿಮ್ಮಪ್ಪ ನಾಯ್ಕ್ ಸೇರಿ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ, ಸುಮಾರು ಹತ್ತು ಮಂದಿ ಒಂದು ಭಾನುವಾರ ಒಟ್ಟು ಸೇರಿ ಶಾಲೆ ಉಳಿಸುವ ತೀರ್ಮಾನ ಕೈಗೊಂಡರು. ಬಳಿಕ ಸಭೆಗಳು ನಡೆದವು. ಸಂತೋಷ್ ಶೆಟ್ಟಿ ಪೆಲತ್ತಡ್ಕ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೊಂಡಿತು. ಕೆ.ಎಂ.ರಫೀಕ್ ಗುಳಿಗದ್ದೆ ಗೌರವಾಧ್ಯಕ್ಷರಾಗಿ, ಎನ್.ಹಮೀದ್ ಜಿ.ಎಸ್. ಉಪಾಧ್ಯಕ್ಷರಾಗಿ, ಸಂತೋಷ್ ಶೆಟ್ಟಿ ಸೀನಾಜೆ ಕಾರ್ಯದರ್ಶಿಯಾಗಿ, ದೇವಪ್ಪ ಗೌಡ ಕೆಲಿಂಜ ಕೋಶಾಧಿಕಾರಿಯಾಗಿ ತಂಡವೇ ಸಿದ್ಧಗೊಂಡಿತು. ಇವರು ಶಾಶ್ವತ ನಿಧಿಯೊಂದನ್ನು ರಚಿಸಿದರು. 1 ಲಕ್ಷ ರೂ, 50 ಸಾವಿರ ರೂ ಸಹಿತ ದೊಡ್ಡ, ಸಣ್ಣ ಮೊತ್ತದ ದೇಣಿಗೆ ಕೂಡಿಸಿದರು. ನೋಡನೋಡುತ್ತಿದ್ದಂತೆ 25 ಲಕ್ಷ ರೂಗಳ ಮೊತ್ತವಾಯಿತು. ಬಳಿಕ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನವೊಂದನ್ನು ಮಾಡಿ ಗಮನ ಸೆಳೆದರು.  ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜಯಂತಿ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಹಿರಿಯ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು. ಶಾಲೆಗೆ ಆಗಮಿಸಲು ಎರಡು ಆಟೊರಿಕ್ಷಾಗಳನ್ನು ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಇದು ಉಚಿತ. ಪ್ರತ್ಯೇಕ ಸಮವಸ್ತ್ರ, ನೋಟ್ ಪುಸ್ತಕ, ಸ್ಪೋಕನ್ ಇಂಗ್ಲೀಷ್, ಗೌರವ ಶಿಕ್ಷಕರಿಗೆ ವೇತನ, ಮೇಜು ಕುರ್ಚಿ, ಶುದ್ಧ ಕುಡಿಯುವ ನೀರಿನ ಘಟಕ, ಸುಸಜ್ಜಿತ ಬಿಸಿಯೂಟದ ಕೊಠಡಿ ಹೀಗೆ ಶಾಲೆಗೆ ಪೂರಕವಾದವುಗಳನ್ನೆಲ್ಲಾ ಒದಗಿಸಿಸಲಾಗಿದೆ. ಹೀಗಾಗಿಯೇ ಎಲ್.ಕೆ.ಜಿ. ಸೇರಿ ಒಟ್ಟು 79 ವಿದ್ಯಾರ್ಥಿಗಳು ಈಗ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಮಕ್ಕಳು ಕಡಿಮೆಯಾಗುತ್ತಾರೆ ಎಂಬ ಆತಂಕವಿದ್ದ ಸಂದರ್ಭ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದ್ದ ವೇಳೆ ಪೂರಕವಾಗಿ ಅವರು ಸ್ಪಂದಿಸಿದರು. ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ಶಾಲೆಗೆ ಭದ್ರ ನೆಲೆಯನ್ನು ಒದಗಿಸಿದ್ದಾರೆ ಎನ್ನುತ್ತಾರೆ ಮುಖ್ಯೋಪಾಧ್ಯಾಯ ತಿಮ್ಮಪ್ಪ ನಾಯ್ಕ್,

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಕೆಲಿಂಜ ಕನ್ನಡ ಶಾಲೆಯಲ್ಲಿ ಎರಡೇ ತಿಂಗಳಲ್ಲಿ ಮೂರು ಪಟ್ಟು ಮಕ್ಕಳು.. ಈ SUCCESS STORY ಹಿಂದಿನ ಕಥೆ ಇಲ್ಲಿದೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*