ಆವರಿಸಿದ ಕಲಾವಿದ – ಪುನೀತ್ ರಾಜ್ ಕುಮಾರ್

  • ಅರವಿಂದ ಚೊಕ್ಕಾಡಿ

ಪುನೀತ್ ರಾಜ್ಕುಮಾರ್ ನನ್ನ ಪರಿಚಿತರಲ್ಲ. ಸ್ನೇಹಿತರೂ ಅಲ್ಲ. ಜೀವನದಲ್ಲಿ ಒಮ್ಮೆಯೂ ಭೇಟಿ ಆಗಿಲ್ಲ. ಆದರೆ ನನ್ನನ್ನು ಕಾಡಿದ ಮರಣಗಳಲ್ಲಿ ಇದೂ ಒಂದು.

ಪುನೀತ್ ಜನಿಸಿದ್ದು 1975 ರಲ್ಲಿ. ನಾನು ಜನಿಸಿದ್ದೂ 1975 ರಲ್ಲಿ. 1985 ರ ಕಾಲಕ್ಕೆ ನಾನು, ಅಪ್ಪ, ಅಮ್ಮ ಕೊಡಗಿನ ಶ್ರೀಮಂಗಲದ ಸಮೀಪ ಬೀರುಗದಲ್ಲಿದ್ದ ಕಾಲ. 1985 ರ ಜೀವನ ಈಗ ನನಗೂ ಅನುಭವಕ್ಕೆ ಸುಲಭವಾಗಿ ತಂದುಕೊಳ್ಳಲು ಕಷ್ಟ. 5 ಪೈಸೆಗೆ 5 ಮಿಠಾಯಿಗಳನ್ನು ಖರೀದಿಸಿ ತಿನ್ನಬಹುದಿತ್ತು. ಒಂದೂ ವರೆ ರುಪಾಯಿಗೆ ಒಂದು ಕೆ.ಜಿ. ಸಿಗುತ್ತ ಇತ್ತು. ಸಂಬಂಧಿಗಳಿಗೆ ಸಂಪರ್ಕಕ್ಕಿದ್ದ ಏಕೈಕ ಮಾಧ್ಯಮ ಅಂಚೆ ಪತ್ರಗಳು. ಫೋನ್ ನಮ್ಮ ಕಲ್ಪನೆಯಲ್ಲೆ ಇಲ್ಲದ ಕಾಲ. ಕೂಲಿಗೆ 5 ರುಪಾಯಿ ದಿನ ಸಂಬಳದ ಕಾಲ. ಸಂಬಳಕ್ಕೆ ಹಣ ಇಲ್ಲದಿದ್ದರೆ ಮುಂದಿನ ಬೇಸಾಯದಲ್ಲಿ ಒಂದು‌ ಮುಡಿ ಬತ್ತ ನಿಮಗೆ ಎನ್ನುತ್ತಿದ್ದುದನ್ನು ಕಂಡಿದ್ದೆ.

ಅಪ್ಪ ಹಲವು ಅಂತರಗಳಲ್ಲಿರುವ ನಾಲ್ಕು ದೇವಸ್ಥಾನಗಳ ಅರ್ಚಕರು. ಅಪ್ಪನಿಗೆ ಅನಾರೋಗ್ಯವಾದ್ದರಿಂದ 7-11 ವರ್ಷಗಳ ನಡುವಿನ ಹುಡುಗ ನಾನು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ ಎಲ್ಲ ನಾಲ್ಕೂ ದೇವಸ್ಥಾನಗಳ ಪೂಜೆ ಮಾಡಿ ಬಂದು ಶಾಲೆಗೆ ಹೋಗಬೇಕಿತ್ತು. ಅಲ್ಲೊಂದು ಗಂಧರ್ವ ಭೈರವ ಗುಡಿ ಇದೆ. ಬ್ರಹ್ಮಗಿರಿ ಬೆಟ್ಟದ ಕಾಡಿನಲ್ಲೆ ಒಂದರ್ಧ ಕಿಲೋ ಮೀಟರ್ ಹತ್ತಿಕೊಂಡು ಹೋಗಬೇಕು. ಕಾಲಕ್ಕೆ ಅದು ಹುಲಿ ಇದ್ದ ಕಾಡು. ಸಾಮಾನ್ಯವಾಗಿ ನನಗೆ ಭಯ ಇಲ್ಲ. ಆದರೆ ಅದೊಂದು ದಿನ ಪೂಜೆ ಮುಗಿಸಿ ಇಳಿದು ಬರುವಾಗ ಯಾವುದೊ ಪ್ರಾಣಿ ಪಕ್ಕದಲ್ಲೆ ಕೂಗಿದ ಸದ್ದಿಗೆ ಹೆದರಿ ಓಡಿದ್ದರಲ್ಲಿ ಕೆಳಗೆ ಗದ್ದೆಯ ತನಕ ಓಡಿ ಬಂದವನು ಗದ್ದೆ ಸಮೀಪ ಎಡವಿ ಬಿದ್ದ ರಭಸಕ್ಕೆ ಎಡ ಮೊಣಕಾಲಿನ ಒಳಗೆ ಒಂದು ಚೂಪಾದ ಕಲ್ಲು ನಾಟಿ ಒಳಗೆ ಹೋಗಿತ್ತು. ಕಲ್ಲು ಹೋದ ಜಾಗದ ಕಪ್ಪನೆಯ ಗುರುತು ಈಗಲೂ ಎಡ ಮೊಣ ಕಾಲಿನಲ್ಲಿದೆ.

ಜಾಹೀರಾತು

1985 ರಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದಬೆಟ್ಟದ ಹೂವುಸಿನಿಮಾ ಬಿಡುಗಡೆಯಾಗಿತ್ತು. ‘ನಾಂದಿಯಂತಹ ಅಮೋಘ ಸಿನಿಮಾಗಳನ್ನು ನಿರ್ದೇಶಿಸಿದ ಎನ್. ಲಕ್ಷ್ಮೀನಾರಾಯಣ ಸಿನಿಮಾದ ನಿರ್ದೇಶಕರು. “ತಾಯೆ ಶಾರದೆ ಲೋಕ ಪೂಜಿತೆ ಜ್ಞಾನ ದಾತೆ ನಮೋಸ್ತುತೇಎಂದು ಪಿ. ಬಿ.‌ಶ್ರೀನಿವಾಸ್ ಹಾಡಿದ ಅದ್ಭುತ ಹಾಡು ಅದರಲ್ಲಿದೆ. ಒಬ್ಬ ಬಡ ಹುಡುಗ ಅನಾರೋಗ್ಯ ಪೀಡಿತ ಅಪ್ಪ ಅಮ್ಮನನ್ನು ಸಾಕಲು ವಿಶೇಷ ಅಧ್ಯಯನಕ್ಕಾಗಿ ಬರುವ ಶರ್ಲಿ ಎಂಬ ಸಂಶೋಧಕಿಗೆ ಬೇಕಾದ ಬೆಟ್ಟದ ಹೂವನ್ನು ತಂದುಕೊಟ್ಟರೆ ಸಂಶೋಧಕಿ ಹುಡುಗನಿಗೆ ಎರಡು ರೂಪಾಯಿಯೊ ಐದು ರೂಪಾಯಿಯೊ ಕೊಡುತ್ತಿದ್ದರು. ಹಣವನ್ನು ಹುಡುಗ ಅಮ್ಮನಿಗೆ ಕೊಡುತ್ತಾನೆ. ಅದರಲ್ಲಿ ಹತ್ತು ಪೈಸೆ ಅಮ್ಮ ಮಗನಿಗೆ ಕೊಡುತ್ತಾಳೆ. ಹಾಗೆ ಬಂದ ಹಣವನ್ನೆಲ್ಲ ಒಟ್ಟು ಮಾಡಿ ಅಂಗಡಿಯಲ್ಲಿರುವರಾಮಾಯಣಪುಸ್ತಕವನ್ನು ಕೊಂಡು ಓದಬೇಕೆಂಬ ಆಸೆ ಹುಡುಗನಿಗೆ. ಬೆಟ್ಟದ ಹೂವನ್ನು ತರಲು ಹೋಗಿ ಹುಲಿ ಗರ್ಜನೆಗೆ ಹೆದರುವ ಹುಡುಗನ ಮುಖ ಭಾವ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕೊನೆಗೂ ರಾಮಾಯಣಕ್ಕಾಗಿ ಕೂಡಿಸಿಟ್ಟ ಹಣವನ್ನೆಲ್ಲ ಚಳಿಯಲ್ಲಿ ನಡುಗುವ ತಂದೆಗಾಗಿ ಕಂಬಳಿ ಕೊಂಡುಕೊಳ್ಳಲು ಬಳಸಿ ಅಂಗಡಿಯಲ್ಲಿರುವ ರಾಮಾಯಣ ಪುಸ್ತಕವನ್ನು ಆಸೆಯಿಂದ ನೋಡುತ್ತಾ ಹುಡುಗ ಹೋಗುವಲ್ಲಿಗೆ ಕಥೆ ಮುಗಿಯಿತು.

ಕಷ್ಟಗಳ ಒಳಗೆಯೇ ಓದಿನ ಆಸೆಯ ಹುಡುಗನಾಗಿ ಪುನೀತ್ ರಾಜ್ಕುಮಾರ್ ನನ್ನ ಭಾವ ಭಿತ್ತಿಯನ್ನು ಕಲಾವಿದರಾಗಿ ಪ್ರವೇಶಿಸಿ ನಿಂತವರು. ಕಥೆ, ನಿರ್ದೇಶನ ಯಾವುದೂ ಪುನೀತ್ ಅವರದಲ್ಲ. ಆದರೆ ಸನ್ನಿವೇಶವನ್ನು ಅನುಭವಿಸಿ ಅಭಿವ್ಯಕ್ತಿಪಡಿಸಬೇಕಲ್ಲ. ಹತ್ತು ವರ್ಷ ವಯಸ್ಸಿನ ಪುನೀತ್ ಅದನ್ನು ಎಷ್ಟು ಸಮರ್ಥವಾಗಿ ನಿರ್ವಹಿಸಿದ್ದರೆಂದರೆ ನಾನಿರುವ ತನಕ ಅಭಿನಯ ನನ್ನಮನಃಪಟಲದಿಂದ ಕದಲಲಾರದು.

“ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ ಮಿನುಗು ತಾರೆ ಅಂದ ನೋಡು ಎಂತ ಚಂದ ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ” ‘ ಭಾಗ್ಯವಂತ’ ಸಿನಿಮಾಕ್ಕಾಗಿ ಪೂರ್ಣಚಂದ್ರ ಹಾಡಿರುವ ಈ ಗೀತೆಗೆ ಕೆ. ಎಸ್. ಅಶ್ವತ್ಥ್-ಪುನೀತ್ ರಾಜ್‌ಕುಮಾರ್ ಅಭಿನಯಿಸಿದ್ದರು. ಅದರಲ್ಲೂ ಪುನೀತ್ ಅವರದು ಕಾಡುವ ಅಭಿನಯವೇ. ಎಲ್ಲರಿಂದಲೂ ತಿರಸ್ಕೃತನಾದ, ಬಾಲ್ಯದಲ್ಲೆ ತಂದೆ ತಾಯಿಯನ್ನು ಕಳೆದುಕೊಂಡ ನತದೃಷ್ಟನೆನಿಸಿಕೊಂಡ ಬಾಲಕ ಅಪಘಾತವಾಗಲಿದ್ದ ಇಡೀ ರೈಲು ಅಪಘಾತಕ್ಕೊಳಗಾಗದಂತೆ ತಡೆದು ‘ ಭಾಗ್ಯವಂತ’ ಬಾಲಕನಾದ ಕಥೆ ಇದು. ‘ಎರಡು ನಕ್ಷತ್ರಗಳು’ ನಲ್ಲಿ “ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು” ಗೀತೆ ಪುನೀತ್ ಅವರೇ ಹಾಡಿದ್ದು.‌ ಮರೆಯಲು ಸಾಧ್ಯವಿಲ್ಲ. “ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು” ಕೂಡ ಪುನೀತ್ ಹಾಡಿದ್ದು.

ಜಾಹೀರಾತು

ಒಬ್ಬ ಕಲಾವಿದ ಹಲವರ ಬದುಕಿನೊಂದಿಗೆ ಸಂವಾದಿಸಿ ಆತ್ಮಬಲವನ್ನು ಒದಗಿಸಬಲ್ಲ. ನನಗೆ ಅಂತಹ ಆತ್ಮಬಲವನ್ನು ಒದಗಿಸಿದ ಕಲಾವಿದರಲ್ಲಿ ಪುನೀತ್ ಒಬ್ಬರು. ಆ ರೂಪದಲ್ಲಿ ಪುನೀತ್ ಇಂದಿಗೂ ನನ್ನನ್ನು ಆವರಿಸಿಕೊಂಡಿದ್ದಾರೆ. ವ್ಯಕ್ತಿಯಾಗಿ ನನಗವರು ಅಪರಿಚಿತರು. ಅವರ ದಾನ, ಸಂಸ್ಕಾರ, ವಿನಯಗಳ ಬಗ್ಗೆ ಕೇಳಿದ್ದೇನೆ. ಗೊತ್ತಿಲ್ಲ. ಬಹುಶಃ ಅದು ರಾಜ್‌ಕುಮಾರ್ ಕುಟುಂಬದ ಸಹಜ ನಡೆವಳಿಕೆ. ಆ ಕ್ರೆಡಿಟ್ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೇ ಸಲ್ಲಬೇಕು. ಏನೇ ಆದರೂ, ಎಷ್ಟು ಅಮೂಲ್ಯವೇ ಆದರೂ,” ಒನ್ಸ್ ಲಾಸ್ಟ್, ಲಾಸ್ಟ್ ಪಾರ್ ಎವರೇ” ಅಲ್ವಾ. ಬೇರಾವ ಚಿಂತನೆಗೂ ಅಲ್ಲಿ ಅವಕಾಶವೇ ಇರುವುದಿಲ್ಲ. ಪುನೀತ್ ಅವರಿಗೆ ಶ್ರದ್ಧಾಂಜಲಿ…. (ಈ ಲೇಖನ ಅರವಿಂದ ಚೊಕ್ಕಾಡಿ ಅವರ ಫೇಸ್ ಬುಕ್ ನಲ್ಲಿ ಪ್ರಕಟವಾಗಿದ್ದು, ಅವರ ಅನುಮತಿಯೊಂದಿಗೆ ಪ್ರಕಟಿಸಲಾಗಿದೆ. ಅದರ ಲಿಂಕ್ ಇಲ್ಲಿದೆ.. https://www.facebook.com/aravindachokkadi )

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಆವರಿಸಿದ ಕಲಾವಿದ – ಪುನೀತ್ ರಾಜ್ ಕುಮಾರ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*