ಬಂಟ್ವಾಳನ್ಯೂಸ್, www.bantwalnews.com
ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೂಚನೆ ಹಿನ್ನೆಲೆಯಲ್ಲಿ, ಪ್ರಕರಣಗಳು ದ್ವಿಗುಣಗೊಳ್ಳುವ ವೇಗ ತಗ್ಗಿಸಿ ಟೆಲಿಮೆಡಿಸನ್ ಮೂಲಕ ಚಿಕಿತ್ಸೆ ನೀಡುವ ಕುರಿತು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೊರೋನಾ ರೋಗ ಲಕ್ಷಣ ಕಡಿಮೆ ಪ್ರಮಾಣದಲ್ಲಿದ್ದರೆ ಮನೆಯಲ್ಲಿಯೇ ಕ್ವಾರೆಂಟೀನ್ ಮಾಡಿ ಚಿಕಿತ್ಸೆ ನೀಡುವ ಕುರಿತಂತೆಯೂ ಗಂಭೀರವಾಗಿ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ. ಕೊರೋನಾ ಸೋಂಕು ನಿಯಂತ್ರಣ ಕುರಿತು ತಜ್ಞರ ಜತೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಸೋಂಕು ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಕರ್ಫ್ಯೂ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಆಸ್ಪತ್ರೆಗಳಿಗೆ ಆಮ್ಲಜನಕ, ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರುವಂತ ನೋಡಿಕೊಳ್ಳುವ ಜತೆಗೆ ಕೋವಿಡ್ ಕುರಿತು ಭೀತಿಯ ವಾತಾವರಣ ನಿವಾರಿಸಲು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುವುದು. ತಜ್ಞರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ಅಳವಡಿಸುವ ಕುರಿತು ಚರ್ಚೆ ನಡೆಸಲಾಗಿದೆ. ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಬೇಕಾಬಿಟ್ಟಿ ಸಂಚರಿಸಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಜನರಲ್ಲಿ ಅರಿವು ಮೂಡಿಸಲು 600 ಕ್ಕೂ ಹೆಚ್ವು ಆಟೋಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಇನ್ನು ಮುಂದೆ ಕರ್ಫ್ಯೂ ಕಠಿಣವಾಗಿ ಜಾರಿಯಾಗಲಿದೆ ಎಂದರು.
ಸ್ವಯಂ ಲಾಕ್ ಡೌನ್ ಅನಿವಾರ್ಯ: ಕೊರೊನಾ ಸದ್ಯದ ಪರಿಸ್ಥಿತಿ ಎದುರಿಸಬೇಕಾದರೆ ನಮಗೆ ನಾವೇ ಸ್ವಯಂ ಲಾಕ್ಡೌನ್ ಹಾಕಿಕೊಳ್ಳಬೇಕಿದೆ. ಮುಖ್ಯವಾಗಿ ಹೊರಗೆ ತಿರುಗಾಡುವವರು ಹಿರಿಯರು, ಮಕ್ಕಳು, ಅನಾರೋಗ್ಯವಂತರಿಂದ ಮನೆಯಲ್ಲಿ ದೂರವಿರಿ. ಕ್ವಾರಂಟೈನ್ನಲ್ಲಿರುವವರು ಕೂಡ ಯಾವುದೇ ಕಾರಣಕ್ಕೂ ಸುತ್ತಾಡುವಂತಿಲ್ಲ. ಕೆಲವೊಂದು ವಿಚಾರದಲ್ಲಿ ನಮಗೆ ನಾವು ದಿಗ್ಬಂಧನ ಹಾಕದಿದ್ದರೆ, ಕೊರೊನಾ ನಿಯಂತ್ರಣ ಕಷ್ಟ.
ಬೆಂಗಳೂರಿನಲ್ಲಿ ಕೊರೊನಾ ಮಹಾಸ್ಫೋಟವಾಗುತ್ತಿದ್ದಂತೆ, ಕರಾವಳಿ ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಭಾನುವಾರ ಒಂದೇ ದಿನ ಮೂವರು ಮೃತಪಟ್ಟಿದ್ದರೆ, ಜುಲೈ 1ರಂದು ಮೂವರು ಸಾವನ್ನಪ್ಪಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸ್ವಯಂ ಲಾಕ್ ಒಂದೇ ಪರಿಹಾರ ಎನ್ನುತ್ತದೆ ದ.ಕ.ಜಿಲ್ಲಾಡಳಿತ. ಲಾಕ್ಡೌನ್ ಅವಧಿಯಲ್ಲಿ ವಿದೇಶದಿಂದ ಬಂದವರಲ್ಲಿ ಹೆಚ್ಚಾಗಿ ಕೊರೊನಾ ಪತ್ತೆಯಾಗಿದ್ದರೆ, ಅನ್ಲಾಕ್ ಬಳಿಕ ಮಹಾರಾಷ್ಟ್ರ-ಮುಂಬಯಿಯಿಂದ ಬಂದವರಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ವಿದೇಶ, ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ನಲ್ಲಿರಿಸುತ್ತಿದ್ದ ಕಾರಣ ಸೋಂಕು ಹರಡುವಿಕೆ ನಿಯಂತ್ರಣದಲ್ಲಿತ್ತು. ಆದರೆ ಒಂದು ವಾರದಲ್ಲಿ ಸ್ಥಳೀಯವಾಗಿ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತಕ್ಕೆ ಮತ್ತಷ್ಟು ತಲೆನೋವಾಗಿದೆ. ಕೆಲವು ಪ್ರಕರಣಗಳಲ್ಲಿ ಸೋಂಕಿತನ ಹಿಸ್ಟರಿಯೇ ಇಲ್ಲ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ
ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Be the first to comment on "ಸೂಪರ್ ಫಾಸ್ಟ್ ಕೊರೊನಾ: ಹೇಗೆ ಸೋಂಕುನಿಯಂತ್ರಣ?"