ಬಂಟ್ವಾಳ: ಜೂನ್ ತಿಂಗಳ ಮೊದಲ ವಾರದವರೆಗೆ ಸರಕಾರಿ ಪಿಯು ಕಾಲೇಜುಗಳಲ್ಲಿ ಪದವಿಪೂರ್ವ ಕಾಲೇಜುಗಳ ಆರಂಭವನ್ನು ಮುಂದೂಡಲು ತಾಪಂ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.

ತಾಲೂಕಿನ ಹಲವೆಡೆ ನೀರಿಲ್ಲದೆ ಜನರು ಪರದಾಡುತ್ತಿದ್ದು, ಶಾಲಾ ಕಾಲೇಜುಗಳು ಆರಂಭಗೊಂಡರೆ ಮಕ್ಕಳಿಗೂ ಸಮಸ್ಯೆ.
ಕರಾವಳಿಯ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ವರ್ಷ ತೀವ್ರ ತರವಾದ ಕುಡಿಯುವ ನೀರಿನ ಬವಣೆ ಉದ್ಬವಿಸಿದ್ದು, ಜಿಲ್ಲೆಯ ನಾನಾ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ. ಪಿಯು ಕಾಲೇಜುಗಳಲ್ಲಿನ ಬಹುತೇಕ ಕುಡಿಯುವ ನೀರಿಗೆ ಸಂಬಂಧಿಸಿದ ಕೊಳವೆ ಬಾವಿಗಳು ಈಗಾಗಲೇ ಭತ್ತಿ ಹೋಗಿದ್ದು, ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಗಾಗಿ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಗಳು ನೀರಿನ ಅಭಾವದಿಂದ ತತ್ತರಿಸಿ ಹೋಗಿವೆ. ಬೇಸಿಗೆಯ ಕಾಲದ ಇತ್ತೀಚಿನ ತಾಪಮಾನ ಸಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹವಮಾನ ಇಲಾಖೆಯ ಪ್ರಕಾರ ಜೂನ್ ಮೊದಲ ವಾರ ತನಕ ಕರಾವಳಿ ಜಿಲ್ಲೆಗೆ ಮುಂಗಾರು ಪ್ರಾರಂಭವಾಗುವ ಲಕ್ಷಣ ಕಡಿಮೆ ಎಂದು ತಿಳಿಸಿದೆ.
ಈ ಎಲ್ಲಾ ಅಂಶಗಳನ್ನು ಮನಗಂಡು ಉಭಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸಭೆ ಸೇರಿ ಈಗಾಗಲೇ ಆರಂಭವಾಗ ಬೇಕಿದ್ದ ತರಗತಿಗಳನ್ನು ಸ್ವಲ್ಪ ಸಮಯಕ್ಕೆ ಮೂಂದೂಡಿ ಪ್ರಕಟಣೆ ಹೊರಡಿಸಿವೆ. ಪ್ರಸ್ತುತ ನೀರಿನ ಅಭಾವ ಪರಿಸ್ಥಿತಿಯನ್ನು ಅವಲೋಕಿಸಿ ಸರಕಾರಿ ಪಿಯುಸಿ ಕಾಲೇಜುಗಳ ಪ್ರಿನ್ಸಿಪಾಲರ ಸಂಘ ಕೂಡ ಸ್ವಲ್ಪ ಸಮಯ ತರಗತಿ ಆರಂಭಿಸುವುದನ್ನು ಮುಂದೂಡಲು ಮನವಿ ಸಲ್ಲಿಸಿದೆ. ಕೆಲವೊಂದು ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಬಳಕೆಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರುಸುತ್ತಿವೆ. ಹೀಗಾಗಿ ಈಗಾಗಲೇ ಆರಂಭವಾಗಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪಿಯುಸಿ ತರಗತಿಗಳನ್ನು ತಕ್ಷಣದಿಂದ ಸ್ವಲ್ಪ ಮಟ್ಟಿಗೆ ಸ್ಥಗಿತಗೊಳಿಸಿ, ಕನಿಷ್ಠ ಜೂನ್ ತಿಂಗಳ ಮೊದಲ ವಾರದವರೆಗೆ ಮುಂದೂಡಲು ವಿನಂತಿಸಿದ್ದಾರೆ.

Be the first to comment on "ಜೂನ್ ಮೊದಲವಾರದವರೆಗೆ ಕಾಲೇಜು ಆರಂಭ ಮುಂದೂಡಲು ಮನವಿ"