ಒಂದು ಗೋಡೆ, ಎರಡು ಪಕ್ಷ, ದಿನವಿಡೀ ಆರೋಪ, ಪ್ರತ್ಯಾರೋಪ

ಇಡೀ ದಿನ ಪ್ರತಿಭಟನೆ, ಚರ್ಚೆ, ಆರೋಪ, ಪ್ರತ್ಯಾರೋಪಕ್ಕೆ ವೇದಿಕೆಯಾದ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ವಿವಾದ

ಜಾಹೀರಾತು

 

ಬಿ.ಸಿ.ರೋಡ್ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಗೋಡೆ ನಿಗದಿಯಾದ ಜಾಗಕ್ಕಿಂತ ಮುಂದೆ ಕಟ್ಟೋದು ಯಾಕೆ – ಬಿಜೆಪಿ

ಗೋಡೆ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸುವುದರ ಮೂಲಕ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅಡ್ಡಿ -ಕಾಂಗ್ರೆಸ್

ಜಾಹೀರಾತು

ಇಲ್ಲೇನಾಗುತ್ತಿದೆ? ಯಾಕೆ ಇಷ್ಟೊಂದು ಬೊಬ್ಬೆ ಹಾಕುತ್ತಿದ್ದಾರೆ? ಇವರು ತಮ್ಮ ಕಾಲದಲ್ಲಿ ಹೀಗೆ ಮಾಡಿಲ್ಲವೇ, ಅವರು ತಮ್ಮ ಕಾಲದಲ್ಲಿ ಹಾಗೆ ಮಾಡಿಲ್ಲವೇ ಎನ್ನುತ್ತಿದ್ದಾರಲ್ಲ?  – ರಸ್ತೆಯಲ್ಲಿ ನಡೆದುಕೊಂಡು ಹೋಗುವ ಜನಸಾಮಾನ್ಯ.

ಬಿ.ಸಿ.ರೋಡ್ ಇಂದಿರಾ ಕ್ಯಾಂಟೀನ್ ಆವರಣ ಗೋಡೆ ವಿಚಾರ ಇಂದು ಕಾಂಗ್ರೆಸ್ ಮತ್ತು ಬಿಜೆಪಿ ಎದುರುಬದುರು ಘೋಷಣೆ ಕೂಗುವಷ್ಟರ ಮಟ್ಟಿಗೆ ಮುಂದುವರಿಯಿತು. ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ ಎಂಬ ಸನ್ನಿವೇಶ ಬಂದಾಗ ಪೊಲೀಸರು ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದರು.

ಜಾಹೀರಾತು

ಇದಕ್ಕೂ ಮುನ್ನ ಬಿಜೆಪಿ ಪಕ್ಷದ ಮುಖಂಡರು ಶಾಸಕರ ನೇತೃತ್ವದಲ್ಲಿ ಆಡಳಿತ ಪಕ್ಷ, ಪುರಸಭೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ಬೆಳಗ್ಗೆಯೇ ಕ್ಯಾಂಟೀನ್ ಮುಂದೆ ಧರಣಿ ಕುಳಿತರೆ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸೇರಿಕೊಂಡರು. ಏರಿದ ಧ್ವನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭ ಅವರ ಮನವೊಲಿಸಲು ಎಎಸ್ಪಿ ಋಷಿಕೇಶ್, ಎಸ್ಸೈ ಚಂದ್ರಶೇಖರ್, ತಹಶೀಲ್ದಾರ್ ಪುರಂದರ ಹೆಗ್ಡೆ ಸಹಿತ ಅಧಿಕಾರಿಗಳು ಆಗಮಿಸಿದರೂ ಸಮರ್ಪಕ ಉತ್ತರವನ್ನು ನೀಡುವವರೆಗೂ ಕದಲುವುದಿಲ್ಲ, ಏನಿದ್ದರೂ ವಿಷಯವೇನೆಂದು ಜನರಿಗೆ ಗೊತ್ತಾಗಬೇಕು ಎಂದು ಶಾಸಕ ಹೇಳಿದರು. ಕೊನೆಗೆ ಸಹಾಯಕ ಕಮೀಷನರ್ ಆಗಮಿಸಿ  ಮಿನಿ ವಿಧಾನಸೌಧದೊಳಗೆ ಕಚೇರಿಯಲ್ಲಿ ಕುಳಿತು ಮಾತುಕತೆ ಮಾಡೋಣ ಎಂದು ಅವರನ್ನು ಕರೆದಾಗ ಶಾಸಕರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ತಹಶೀಲ್ದಾರ್ ಕೊಠಡಿಗೆ ತೆರಳಿದರು. ಈ ಸಂದರ್ಭ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಇಲ್ಲಿದ್ದರೆ ಸಾಕು, ಮಾಧ್ಯಮಗಳಿಗೆ ಪ್ರವೇಶವಿಲ್ಲ ಎಂದು ಸಹಾಯಕ ಕಮೀಷನರ್ ತಿಳಿಸಿದ ಕಾರಣ, ಮಾತುಕತೆ ವಿಚಾರಗಳು ಸಾರ್ವಜನಿಕರಿಗೆ ಅಲಭ್ಯವಾದವು. ಪ್ರತಿಭಟನೆ ಸಂದರ್ಭ ಬಿಜೆಪಿ ಮುಖಂಡರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ರವೀಂದ್ರ ಕಂಬಳಿ, ರಾಮದಾಸ ಬಂಟ್ವಾಳ, ಜಿ.ಆನಂದ, ಉದಯಕುಮಾರ್ ರಾವ್, ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ ಮಾಣಿ, ಗುರುದತ್ತ್ ಮೊದಲಾದವರು ಉಪಸ್ಥಿತರಿದ್ದರು.

ಸಂಜೆಯಾಗುತ್ತಲೇ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಆಗಮಿಸಿ ಘೋಷಣೆಗಳನ್ನು ಕೂಗುತ್ತಾ ವಾತಾವರಣವನ್ನು ಮತ್ತಷ್ಟು ಬಿಗುವಾಗಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರೂ ಕಾಂಗ್ರೆಸ್ ಕಾರ್ಯಕರ್ತರಿದ್ದೆಡೆ ಆಗಮಿಸಿ ಘೋಷಣೆ ಕೂಗಿದರು. ಪರಿಸ್ಥಿತಿ ಕೈಮೀರುವ ಮೊದಲೇ ಪೊಲೀಸರು ತಿಳಿಗೊಳಿಸಿದರು.ಇದೇ ವೇಳೆ ಮಾಜಿ ಸಚಿವರು ಸುದ್ದಿಗಾರರೊಂದಿಗೆ ಬಿಜೆಪಿಯ ಪ್ರತಿಭಟನೆಯನ್ನು ಟೀಕಿಸಿದರು. ಕಾಂಗ್ರೆಸ್ ವತಿಯಿಂದ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಯೂಸುಫ್ ಕರಂದಾಡಿ, ವಾಸು ಪೂಜಾರಿ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಪುರಸಭೆ ಸದಸ್ಯರು, ಜೆಡಿಎಸ್ ಪ್ರಮುಖರಾದ ಬಿ.ಮೋಹನ್, ಮಹಮ್ಮದ್ ಶಫಿ, ಹಾರೂನ್ ರಶೀದ್, ಅಬುಬಕ್ಕರ್ ಮತ್ತಿತರರು ಇದ್ದರು.

ಜಾಹೀರಾತು

ಬಿ.ಸಿ.ರೋಡಿನಲ್ಲಿ ಇಷ್ಟೆಲ್ಲ ಘಟನೆಗಳು ನಡೆಯುತ್ತಿರುವ ಸಂದರ್ಭ ಬೇರೆ ಬೇರೆ ಕಡೆಯಿಂದ ಆಗಮಿಸುವವರು ಅಲ್ಲೇನಾಗುತ್ತಿದೆ ಎಂದು ಕುತೂಹಲದಿಂದ ಇಣುಕುತ್ತಿದ್ದರು.

ಪ್ರತಿಭಟನಾಕಾರರ ಮನವೊಲಿಸಲು ಬಂಟ್ವಾಳ ಎಎಸ್ಪಿ ಋಷಿಕೇಶ್ ಸೋನಾವಣೆ, ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್, ಎಸ್.ಐ.ಗಳಾದ ಚಂದ್ರಶೇಖರ್, ಹರೀಶ್, ಪ್ರಸನ್ನ ಸೇರಿದಂತೆ ಪೊಲೀಸ್ ಪಹರೆಯೇ ಅಲ್ಲಿತ್ತು. ಬಂಟ್ವಾಳ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು – ರೈ
ಪಾರ್ಕಿಂಗ್‌ಗೆ ತೊಂದರೆ ಆಗುತ್ತದೆ ಎಂದಾದರೆ ಬಿ.ಸಿ.ರೋಡಿನಲ್ಲಿ ಇರುವ ಎಲ್ಲ ಅಕ್ರಮ ಕಟ್ಟಡಗಳು, ಅತಿಕ್ರಮಣಗಳನ್ನು ತೆರವುಗೊಳಿಸಬೇಕು ಎಂದು ಈ ಸಂದರ್ಭ ಸುದ್ದಿಗಾರರೊಂದಿಗೆ ರಮಾನಾಥ ರೈ ಹೇಳಿದರು. ಬಿಜೆಪಿಯವರು ಯಾವ ಅಭಿವೃದ್ಧಿಯನ್ನೂ ಅಪೇಕ್ಷಿಸುತ್ತಿಲ್ಲ. ಎಲ್ಲದಕ್ಕೂ ತಡೆ ತಂದರು. ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಬೇಕು ಎಂಬ ಇಚ್ಛೆ ಇವರಿಗಿಲ್ಲ. ಆವರಣಗೋಡೆ ನಿರ್ಮಾಣ ಬೇಕೇ ಬೇಕು. ಕ್ಯಾಂಟೀನ್ ಸ್ವಚ್ಛತೆ ಕಾಪಾಡಲು ಇದು ಸಹಕಾರಿ. ಶಾಲೆ ಮಕ್ಕಳು ಬರುವ ರಸ್ತೆ ಅಗಲಗೊಳಿಸಲೂ ಬಿಜೆಪಿಯವರು ಬಿಡುವುದಿಲ್ಲ. ಬಸ್ ನಿಲ್ದಾಣಕ್ಕೂ ತಡೆಯೊಡ್ಡಿದರು ಎಂದು ರೈ ಆರೋಪ ವ್ಯಕ್ತಪಡಿಸಿದರು.
ಇಂದಿರಾ ಕ್ಯಾಂಟೀನ್‌ಗೆ ಆಕ್ಷೇಪ ಇಲ್ಲ – ನಾಯ್ಕ್
ಕಂಪೌಂಡ್ ನಿರ್ಮಾಣ ಸಂದರ್ಭ ನಿಯಮವನ್ನು ಉಲ್ಲಂಘಿಸಿದ್ದ ಕುರಿತು ಪುರಸಭೆಗೆ ಸೂಚಿಸಿದರೂ ಅವರು ಅದನ್ನು ಪಾಲಿಸಿಲ್ಲ. ಇಂದಿರಾ ಕ್ಯಾಂಟೀನ್ ನಿರ್ಮಿಸಲು ನಮ್ಮ ಆಕ್ಷೇಪ ಇಲ್ಲ. ಆದರೆ ಕಂಪೌಂಡ್ ಸರಿಯಾದ ಜಾಗದಲ್ಲಿ ನಿರ್ಮಿಸಿ ಎಂದು ಹೇಳಿದರೆ ಕೇಳುತ್ತಿಲ್ಲ. ಸಚಿವರೇ ಕಂಪೌಂಡ್ ಬದಲು ಕಬ್ಬಿಣದ ಸರಳುಬೇಲಿ ಅಳವಡಿಸುವ ಕುರಿತು ಒಪ್ಪಿದ್ದರೆ, ಪುರಸಭೆಗೆ ಕಂಪೌಂಡ್ ಅನ್ನು ಅಕ್ರಮವಾಗಿ ನಿರ್ಮಿಸುವ ಹಠವೇಕೆ ಎಂದು ರಾಜೇಶ್ ನಾಯ್ಕ್ ಪ್ರತಿಭಟನೆ ಸಂದರ್ಭ ತಿಳಿಸಿದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಒಂದು ಗೋಡೆ, ಎರಡು ಪಕ್ಷ, ದಿನವಿಡೀ ಆರೋಪ, ಪ್ರತ್ಯಾರೋಪ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*