
ಬಂಟ್ವಾಳದಲ್ಲಿ ಗುರುವಾರ ರಾತ್ರಿ ಭಾರಿ ಮಳೆಯಾಗುತ್ತಿದ್ದು ನೇತ್ರಾವತಿ ನದಿ ನೀರಿನ ಮಟ್ಟ ಏರುತ್ತಿದೆ. ನದಿ ಪಕ್ಕದಲ್ಲಿರುವ ಮನೆಗಳು ಜಲಾವೃತಗೊಂಡಿದ್ದು, ಪಾಣೆಮಂಗಳೂರು ಗೂಡಿನಬಳಿಯಲ್ಲಿ ಸಂಜೆ ಕಂಡುಬಂದ ದೃಶ್ಯವಿದು. ಚಿತ್ರ: ದೀಪಕ್ ಸಾಲ್ಯಾನ್
ಗುರುವಾರ ರಾತ್ರಿ ಮತ್ತೆ ಮಳೆಯಾಗುತ್ತಿದ್ದು, 10.6 ಮೀ.ನಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆ, ಬಂಟ್ವಾಳ ಪ್ರವಾಸಿ ಮಂದಿರ, ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ನಂದರಬೆಟ್ಟುವಿನಲ್ಲಿ ಸ್ಥಳೀಯರೇ ಗಂಜಿಕೇಂದ್ರವನ್ನು ತೆರೆದಿದ್ದಾರೆ. ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಗಂಜಿಕೇಂದ್ರ ಪೂರ್ತಿ ವ್ಯವಸ್ಥೆಯನ್ನು ಬಂಟ್ವಾಳ ಪುರಸಭೆಯ ವತಿಯಿಂದ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ತಿಳಿಸಿದ್ದಾರೆ.

ಚಿತ್ರ: ದೀಪಕ್ ಸಾಲ್ಯಾನ್
ಇನ್ನು ಎರಡು ದಿನಗಳ ಮಟ್ಟಿಗೆ ಮಳೆಯ ಅರ್ಭಟವಿರುವ ಸೂಚನೆ ಇರುವ ಹಿನ್ನಲೆಯಲ್ಲಿ ಈ ಎಲ್ಲಾ ಕುಟುಂಬಗಳನ್ನು ಗಂಜಿ ಕೇಂದ್ರ ಇಲ್ಲವೇ ಸಂಬಂಧಿಕರ ಮನೆಗೆ ತೆರಳುವಂತೆ ಸೂಚಿಸಲಾಗಿದ್ದು, ನೆರೆಯ ಅಪಾಯವನ್ನು ಎದುರಿಸಲು ತಾಲೂಕಾಡಳಿತ ಸನ್ನದ್ದವಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಬಿ.ಸಿ.ರೋಡಿನ ನಂದರಬೆಟ್ಟುವಿನಲ್ಲಿ ಮನೆಗಳು ಅಪಾಯದಲ್ಲಿರುವುದು ಚಿತ್ರ: ಕಿಶೋರ್ ಪೆರಾಜೆ
ನೇತ್ರಾವತಿ ಅಪಾಯದ ಮಟ್ಟವನ್ನು ಮೀರಿ ಹರಿಯುವ ಹಿನ್ನಲೆಯಲ್ಲಿ ಬಂಟ್ವಾಳದಲ್ಲಿ ತಾಲೂಕಾಡಳಿತ ಹೈಎಲಟ್೯ನಲ್ಲಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಿವಿಧೆಡೆ ನೆರೆಪೀಡಿತರನ್ನು ಭೇಟಿಯಾದರು. ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಅವರೂ ಬಂಟ್ವಾಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಪುರಂದರಹೆಗ್ಡೆ ನೇತೃತ್ವದ ಕಂದಾಯಾಧಿಕಾರಿಗಳಾದ ರಾಮ ಕಾಟಿಪಳ್ಳ ,ಕಂದಾಯ ನಿರೀಕ್ಷಕ ಶಿವ ನಾಯ್ಕ್, ಸಿಬಂದಿ ಸದಾಶಿವ ಕೈಕಂಬ, ಸುಂದರ, ಶೀತಲ್ ಶಿವ ಪ್ರಸಾದ್, ಯಶೋಧಾ, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಕೃತಿ ವಿಕೋಪ ಅಧಿಕಾರಿ ವಿಷು ಕುಮಾರ್, ಪುರಸಭಾ ಮುಖ್ಯಾಧಿಕಾರಿ ರೇಖಾ.ಜೆ.ಶೆಟ್ಟಿ, ಸಮುದಾಯ ಸಂಘಟನೆಯ ಅಧಿಕಾರಿ ಮತ್ತಡಿ ಮೊದಲಾದವರನ್ನೊಳಗೊಂಡ ತಂಡ ಬೆಳಿಗ್ಗಿನಿಂದಲೇ ನೆರೆ ಪೀಡಿತ ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳ,ಪೊಲೀಸ್ ಇಲಾಖೆಕೂಡ ಮುನ್ನಚ್ಚರಿಕಾ ಕ್ರಮದಲ್ಲಿ ನಿರತವಾಗಿದೆ.

ಬಂಟ್ವಾಳ ನೆರೆಪೀಡಿತ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.


Be the first to comment on "ರಾತ್ರಿ ಮತ್ತೆ ಮಳೆ: ಬಂಟ್ವಾಳದಲ್ಲಿ ಏರಿದ ನೀರಿನ ಮಟ್ಟ"