ಬಂಟ್ವಾಳ ಕ್ಷೇತ್ರ ಸಹಿತ ದ.ಕ. ಜಿಲ್ಲೆಯ ಎಲ್ಲ ಎಂಟು ಕ್ಷೇತ್ರಗಳನ್ನೂ ಕಾಂಗ್ರೆಸ್ ಜಯಗಳಿಸಲಿದೆ. ರಾಜ್ಯ ಸರಕಾರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಸಾಧನೆಯೇ ಇದಕ್ಕೆ ಶ್ರೀರಕ್ಷೆಯಾಗಲಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.
ಬಿ.ಸಿ.ರೋಡಿನ ಪ್ರಚಾರ ಸಮಿತಿ ಕಚೇರಿಯಲ್ಲಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ಧರಾಮಯ್ಯನವರ ಕಳೆದೈದು ವರ್ಷಗಳ ದಕ್ಷ ಆಡಳಿತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದಕಾಪಾಡಿಕೊಂಡು ಬರುವಲಿ ಜಿಲ್ಲಾಉಸ್ತುವರಿ ಸಚಿವ ಬಿ. ರಮಾನಾಥ ರೈಯವರ ಸಮರ್ಥ ನಿರ್ವಹಣೆಯನ್ನು ನಾಡಿನ ಜನತೆ ಮೆಚ್ಚಿಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಕಳೆದ ಆರು ತಿಂಗಳಿಂದೀಚೆಗೆ ರಾಜ್ಯ ಸರಕಾರದ ಸಾಧನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಮನೆ ಮನೆ ಮನೆ ಭೇಟಿ ಕಾರ್ಯಕ್ರಮಗಳು ಈಗಾಗಲೇ ಯಶಸ್ವಿಯಾಗಿದೆ. ಪಂಚಾಯತು ಹಾಗೂ ಕ್ಷೇತ್ರ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸಲಾಗಿದೆ. ಜಿಲ್ಲೆಯ ಎಂಟೂ ಅಭ್ಯರ್ಥಿಗಳು ಕಳಂಕರಹಿತರು. ಆದರೆ ಬಿಜೆಪಿ ಅಭ್ಯರ್ಥಿಗಳನ್ನು ಆ ಪಕ್ಷದಲ್ಲಿದ್ದವರೇ ಟೀಕಿಸುತ್ತಿದ್ದಾರೆ ಎಂದರು.
ಇಡೀ ರಾಜ್ಯದ ಗಮನ ಸೆಳೆದ ಬಂಟ್ವಾಳದ ಅಭಿವೃದ್ಧಿ ಬಿಜೆಪಿಗೆ ಕಾಣಿಸುತ್ತಿಲ್ಲ ಎಂಬುದು ವಿಷಾದನೀಯ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿಜೆಪಿಯ ನಾಗರಾಜ ಶೆಟ್ಟಿ ತಮಗೆ ಅಧಿಕಾರ ದೊರಕಿದ ಸಂದರ್ಭ ಏನು ಮಾಡಿದ್ದರು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಇಬ್ಬಗೆ ಧೋರಣೆ ಅನುಸರಿಸುತ್ತಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ಬಂಟ್ವಾಳ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ತೋರಿಸಲಿ ಎಂದು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿ. ಸಿ. ರಾಡ್ರಿಗಸ್, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ, ಪಕ್ಷ ಪ್ರಮುಖರಾದ ಚಂದ್ರಶೇಖರ ಪೂಜಾರಿ, ಬೇಬಿ ಕುಂದರ್, ಬಿ.ಕೆ.ಇದಿನಬ್ಬ ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಸಹಿತ ಜಿಲ್ಲೆಯ ಎಂಟೂ ಸ್ಥಾನ ಕಾಂಗ್ರೆಸ್ ಗೆ: ಹರೀಶ್ ಕುಮಾರ್"