
.ವಿಕಸಿತ ಭಾರತ ಮೊದಲ ಮೆಟ್ಟಿಲು ಗ್ರಾಮ ವಿಕಾಸ .ಆಧ್ಯಾತ್ಮಿಕ ತಳಹದಿಯ ನಿಸ್ವಾರ್ಥ ಸೇವೆಯಿಂದ ಯಶಸ್ಸು ಸಿಗುತ್ತದೆ. ಸತ್ಕರ್ಮಗಳು ನಮ್ಮನ್ನು ಹಿಂಬಾಲಿಸಿ ಬರುತ್ತವೆ. ಉಪಕಾರ ದೃಷ್ಟಿಯಿಂದ ಕಾರ್ಯ ನಿರ್ವಹಿಸುವುದು ಅಗತ್ಯಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಭಾನುವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ರಜತ ಸಂಭ್ರಮ ಸಮಿತಿ ಮತ್ತು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಗ್ರಾಮವಿಕಾಸ ರಜತ ಸಂಭ್ರಮ ಮತ್ತು ಒಡಿಯೂರು ಶ್ರೀ ವಿಕಾಸವಾಹಿನಿ ಸಂಗಮ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು
ಗ್ರಾಮ ವಿಕಾಸ ಯೋಜನೆಯ ಇಂದು ಬೆಳೆದು ನೆರಳು ಕೊಡುವ ಮರವಾಗಬೇಕಾದರೆ ಹಲವರ ಪರಿಶ್ರಮ ,ತ್ಯಾಗ ಇದೆ. ಒಡಿಯೂರು ಶ್ರೀ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಸಂಘ ಬೆಳೆದು ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಮೂರು ಜಿಲ್ಲೆಗಳ ಗ್ರಾಮಗಳಲ್ಲಿ ಛಾಪು ಮೂಡಿಸಿದೆ ಎಂದರು
ತುಳುವಿಗೆ ಮಾನ್ಯತೆ ಅಭಿನಂದನೆ:
ತುಳುಭಾಷೆಗೆ ಕರ್ನಾಟಕದ ಎರಡನೇ ಆಡಳಿತ ಭಾಷೆಯ ಮಾನ್ಯತೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿರುವುದು ಸಂತಸದ ವಿಚಾರ ಎರಡೂವರೆ ಸಾವಿರ ವರ್ಷದ ಇತಿಹಾಸದ ತುಳುಭಾಷೆಗೆ ಮಾನ್ಯತೆ ದೊರೆತಿರುವುದು ತುಳುವರ ಹಲವು ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ವಿಜಯ. ಇದರಿಂದಾಗಿ ತುಳುಭಾಷೆ ಸಂವಿಧಾನದ 8ನೇ ಪರಿಚ್ಛೆದಕ್ಕೆ ಸೇರ್ಪಡೆಗೆ ರಹದಾರಿಯಾಗಿದೆ. ಕರಾವಳಿಯ ಅಭಿವೃದ್ಧಿಗೆ ಸ್ಪಂದಿಸಿದ
ಮುಖ್ಯಮಂತ್ರಿಗಳಿಗೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ, ಉಸ್ತುವಾರಿ ಸಚಿವ ಯು. ಟಿ.ಖಾದರ್.
ಮತ್ತು ಎಲ್ಲಾ ಸಚಿವರಿಗೆ, ಶಾಸಕರಿಗೆ ಅಭಿನಂದನೆಗಳು ಎಂದು ಸ್ವಾಮೀಜಿ ಹೇಳಿದರು.
ದುರ್ಬಲರ ಆಶಾಕಿರಣ:
ಸಾನಿಧ್ಯ ವಹಿಸಿದ್ದ ಸಾಧ್ವಿ ಶ್ರೀ ಮಾತಾನಂದಮಯೀ ಮಾತನಾಡಿ, ದುರ್ಬಲರ ಆಶಾಕಿರಣವಾದ ಗ್ರಾಮವಿಕಾಸ ಯೋಜನೆ ಆತ್ಮಕಲ್ಯಾಣದ ಜತೆ ಸಮಾಜ ಕಲ್ಯಾಣ ಕಾರ್ಯ ಮಾಡಿದೆ ಎಂದರು.

ಇದೇ ಸಂದರ್ಭ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ ರಜತ ವಿಕಾಸವನ್ನು ಸಂಸದ ಕ್ಯಾ ಬೃಜೇಶ್ ಚೌಟ ಬಿಡುಗಡೆ ಮಾಡಿದರು. ಪ್ರಧಾನಿಯವರ ಪ್ರೇರಣೆ ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಸ್ಥಾನಮಾನ ಸಿಗಲು ಕಾರಣವಾಗಿದೆ. ಘೋಷಣೆ ಮಾಡಿದ ಮುಖ್ಯಮಂತ್ರಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬರೋಡ ತುಳುವನ್ನು ಶೀಘ್ರದಲ್ಲೇ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಡ ಹಾಕುವಂತೆ ಆಗ್ರಹಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ 25ವರ್ಷಗಳ ಅವಲೋಕನದ 20 ನಿಮಿಷಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ., ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಸಚಿವ ಬಿ. ರಮಾನಾಥ ರೈ, ಮುಂಬೈ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಮುಂಬೈ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಅಧ್ಯಕ್ಷ ದಾಮೋದರ ಎಸ್. ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ, ಪುಣೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ವಿ. ಶೆಟ್ಟಿ ಭಾಗವಹಿಸಿದ್ದರು.
ಸಾಧನಾ ಪ್ರಶಸ್ತಿ ಪ್ರದಾನ
ಮುಂಬೈಯ ಒಡಿಯೂರು ಶ್ರೀ ಯುವ ಸೇವಾ ಬಳಗದ ಅಧ್ಯಕ್ಷ ಡಾ.ಅದಿಪ್ ಕೆ.ಶೆಟ್ಟಿ ಅವರಿಗೆ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗ್ರಾಮ ವಿಕಾಸ ಯೋಜನೆಯ ಸಂಚಾಲಕರ ಸಹಿತಸೇವಾ ಸಂಕಲ್ಪದಲ್ಲಿ ದುಡಿದವರನ್ನು ಗೌರವಿಸಲಾಯಿತು
ವೇದಿಕೆಯಲ್ಲಿ ರಜತ ಸಂಭ್ರಮ ಸಮಿತಿಯ ಕಾರ್ಯಾಧ್ಯಕ್ಷ ಸಹಕಾರ ರತ್ನ ಸುರೇಶ ರೈ ಎ. ಉಪಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ ಉಳಿಪ್ಪಾಡಿಗುತ್ತು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಜತ ಸಂಭ್ರಮದ ಪದಾಧಿಕಾರಿಗಳು, ಗ್ರಾಮ ವಿಕಾಸ ಯೋಜನೆಯ ಮೂರು ಜಿಲ್ಲೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್ ರೈ ಆಶಯಗೀತೆ ಹಾಡಿದರು. ರಜತ ಸಂಭ್ರಮ ಸ್ಮರಣ ಸಂಚಿಕೆಯ ಸಂಪಾದಕ ಪತ್ರಕರ್ತ ಯಶವಂತ ವಿಟ್ಲ ಸ್ವಾಗತಿಸಿದರು. ರಜತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಮ ವಿಕಾಸ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಮಾತೇಶ್ ಭಂಡಾರಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



Be the first to comment on "ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬೆಳ್ಳಿ ಹಬ್ಬ – .ವಿಕಸಿತ ಭಾರತ ಮೊದಲ ಮೆಟ್ಟಿಲು ಗ್ರಾಮ ವಿಕಾಸ: ಶ್ರೀ ಗುರುದೇವಾನಂದ ಸ್ವಾಮೀಜಿ"