
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಪ್ರಥಮಗಳ ಸಾಧನೆ ಮಾಡಿದ, ಹಲವು ದಾಖಲೆಗಳ ಮೂಲಕ ಗಮನ ಸೆಳೆದ ಪಂಚಾಯಿತಿಗಳಲ್ಲಿ ಮುಂಚೂಣಿಯಲ್ಲಿ ನೇತ್ರಾವತಿ ನದಿ ತೀರದ ಹಸಿರಿನ ಮಡಿಲಲ್ಲಿರುವ ಕಡೇಶ್ವಾಲ್ಯ ನಿಲ್ಲುತ್ತದೆ.

ಪುಟ್ಟ ಪಂಚಾಯಿತಿಯಾದರು ಸಾಧನೆ ಹಿರಿದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಗ್ರಾಮ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಗಮನ ಸೆಳೆದಿದೆ.
ಇಲ್ಲಿನ ಪ್ರಗತಿಯ ಕುರಿತು ಅಧ್ಯಯನಕ್ಕೆಂದೇ ಸುಮಾರು 150ಕ್ಕಿಂತ ಹೆಚ್ಚು ಗ್ರಾ.ಪಂ ಗಳ ತಂಡ ಭೇಟಿನೀಡಿದ್ದು ವಿಶೇಷ.

ಕಡೇಶ್ವಾಲ್ಯ ಗ್ರಾ.ಪಂ ಹಲವು ಸಾಧನೆ ಮತ್ತು ಪುರಸ್ಕಾರವನ್ನು ಪಡೆದಿದ್ದರೆ ಅದಕ್ಕೆ ಮೂಲ ಕಾರಣ ಈ ಭಾಗದ ಜನ ಮತ್ತು ಜನಪ್ರತಿನಿಧಿಗಳು. ಅವರು ಗ್ರಾ.ಪಂ ಆಡಳಿತ ವ್ಯವಸ್ಥೆಯ ಮೇಲಿರಿಸಿದ ನಂಬಿಕೆಯೇ ಇಲ್ಲಿನ ಬದಲಾವಣೆಗೆ ಪ್ರಮುಖ ಕಾರಣ ಎನ್ನುತ್ತಾರೆ ಪಿಡಿಒ ಸುನಿಲ್ ಕುಮಾರ್.

ಈಗಾಗಲೇ ನೇತ್ರಾವತಿ ನದಿ ತೀರದಲ್ಲಿರುವ ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಶ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರದ ಹೊಸ್ತಿಲಲ್ಲಿದ್ದರೆ, ಇದರ ಎದುರು ಅಜಿಲಮೊಗರು ಸಂಪರ್ಕಿಸುವ ಬೃಹತ್ ಸೇತುವೆಯೊಂದು ನಿರ್ಮಾಣದ ಕೊನೆಯ ಹಂತದಲ್ಲಿದೆ. 4 ವಾರ್ಡ್, 13 ಸದಸ್ಯರು ಇರುವ ಪಂಚಾಯಿತಿಯಲ್ಲಿ 5026 ಜನಸಂಖ್ಯೆಯಿದೆ. ಸುಮಾರು 20ರಿಂದ 22 ಲಕ್ಷ ರೂ ಸ್ವಂತ ಆದಾಯವನ್ನು ಗಳಿಸುತ್ತಿರುವ ಪಂಚಾಯಿತಿಯ ಬರಿಮಾರು, ಪೆರಾಜೆ, ಪೆರ್ನೆ, ಕೆದಿಲ ಗ್ರಾಮ ಪಂಚಾಯಿತಿಗಳಿಗೆ ತಾಗಿಕೊಂಡಿದೆ.
ರಾಜ್ಯದ ಗಮನ ಸೆಳೆದ ಸ್ವಚ್ಛ ಸಂಕೀರ್ಣ
ರಾಜ್ಯ ಮಟ್ಟದಲ್ಲಿ ಇಲ್ಲಿನ ಸ್ವಚ್ಛ ಸಂಕೀರ್ಣ ಗಮನ ಸೆಳೆದಿದೆ. ಅತ್ಯುತ್ತಮ ಸ್ವಚ್ಛಸಂಕಿರ್ಣ ನಿರ್ವಹಣೆ ರಾಜ್ಯಮಟ್ಟದ ದ್ವಿತೀಯ ಸ್ಥಾನ ಪಡೆದ ಜಿಲ್ಲೆಯ ಏಕೈಕ ಪಂಚಾಯತಿ ಎಂದು ಗುರುತಿಸಲ್ಪಟ್ಟ ಕಡೇಶ್ವಾಲ್ಯ, *2025-26ನೆ ಸಾಲಿನಲ್ಲಿ ಶೇ100ರಷ್ಟು ಸಂಪೂರ್ಣ ತೆರಿಗೆ ವಸೂಲಿ ಮಾಡಿದ ತಾಲೂಕಿನ ಏಕೈಕ ಪಂಚಾಯತಿಯಾಗಿದೆ. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ ಕಲಿಕಾ ಕೇಂದ್ರ ಯೋಜನೆ ಆಯ್ಕೆಯಾದ ತಾಲೂಕಿನ ಏಕೈಕ ಪಂಚಾಯಿತಿ, ಐಎಸ್ ಒ ಸರ್ಟಿಫಿಕೇಟ್ ಯೋಜನೆಗೆ ಆಯ್ಕೆಯಾದ ತಾಲೂಕಿನ ಏಕೈಕ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮೃತ ಗ್ರಾಮ ಪಂಚಾಯತಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು, ಹರ್ ಘರ್ ಜಲ್ ಘೋಷಿತ ಪಂಚಾಯತಿಯಾಗಿ ರೂಪುಗೊಂಡಿದೆ. ತಾಲೂಕಿನ ಪ್ರಥಮ ಡಿಜಿಟಲ್ ಗ್ರಂಥಾಲಯ ನಿರ್ಮಿಸಿದ ಪಂಚಾಯತಿ, , ನರೇಗಾ ಯೋಜನೆಯಡಿ ಅಮೃತ ಉದ್ಯಾನವನ ನಿರ್ಮಿಸಿದ ತಾಲೂಕಿನ ಮೊದಲ ಪಂಚಾಯತಿ, ಅಮೃತ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿ ಪಡಿಸಿದ ತಾಲೂಕಿನ ಮೊದಲ ಪಂಚಾಯತಿ. ಮಾತೃ ಸಂಜೀವಿನಿ ಒಕ್ಕೂಟವನ್ನು ನೋಂದಣಿ ಮಾಡಿಸಿದ ಜಿಲ್ಲೆಯ ಮೊದಲ ಪಂಚಾಯತಿ, ಸ್ವಚ್ಛಸಂಕೀರ್ಣಕ್ಕೆ ಇಬ್ಬರು ಪರವಾನಗಿ ಹೊಂದಿದ ಮಹಿಳಾ ಚಾಲಕಿಯರನ್ನು ನೇಮಿಸಿದ ಜಿಲ್ಲೆಯ ಮೊದಲ ಪಂಚಾಯತಿಸಂಪೂರ್ಣ ಸಾಕ್ಷರತೆ, ಕ್ಷಯಮುಕ್ತ ಗ್ರಾಮವಾಗಿದ್ದಲ್ಲದೆ, ಬಯಲು ಬಹಿರ್ದೆಸೆಮುಕ್ತ ಮಾದರಿ ಗ್ರಾಮವಾಗಿದೆ.ಬಾಲ್ಯವಿವಾಹಮುಕ್ತ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದು, ಬಯಲು ಬಹಿರ್ದೆಸೆಮುಕ್ತ ಮಾದರಿ ಗ್ರಾಮ ಪಂಚಾಯತಿಯಾಗಿ ಗುರುತಿಸಿಕೊಂಡಿದೆ. ಆಧುನಿಕ ಕಚೇರಿ ಮತ್ತು ಸಭಾಂಗಣದೊಂದಿಗೆ ಪ್ರಗತಿಸೌಧವಾಗಿ ಪಂಚಾಯಿತಿ ಕಚೇರಿ ಮಾರ್ಪಾಟಾಗಿದ್ದು, ಸಕಾಲ ಸೇವೆಯ ವಾಯಿದೆಯನ್ನು ಮೀರದ ತ್ವರಿತ ಅರ್ಜಿ ವಿಲೇವಾರಿ ಆಗುತ್ತಿದೆ. ಇಲ್ಲೆಲ್ಲ ನಗದುರಹಿತ ಸೇವೆ ಇರುವುದು ವಿಶೇಷ.



Be the first to comment on "ಕಡೇಶ್ವಾಲ್ಯ ಪಂಚಾಯಿತಿಗೆ ಹಲವು ಪ್ರಥಮಗಳ ದಾಖಲೆ ಸರಮಾಲೆ"