
ಗೃಹಜ್ಯೋತಿಯಡಿ ಮನೆ ಮನೆಗೆ ಲೈನ್ ಮ್ಯಾನ್ ಅವರು ಆ.31ರವರೆಗೆ ಬರಲಿದ್ದಾರೆ. ಬಂಟ್ವಾಳದಲ್ಲಿ ಶೇ.60ರಷ್ಟು ಸರ್ವೆ ನಡೆದಿದೆ. ನೆಟ್ ವರ್ಕ್ ಇಲ್ಲದ ಮನೆಯವರನ್ನು ನೆಟ್ ವರ್ಕ್ ಇರುವೆಡೆಗೆ ತರಿಸಿ ಫೀಡ್ ಮಾಡಲಾಗುತ್ತದೆ. ಯಾರಿಗೂ ಗೊಂದಲ, ಭಯ ಬೇಡ

ಮೆಸ್ಕಾಂ ಬಂಟ್ವಾಳ-1 ಮತ್ತು ಬಂಟ್ವಾಳ-2 ಉಪವಿಭಾಗಗಳಿಗೆ ಸಂಬಂಧಿಸಿ ಬಿ.ಸಿ ರೋಡ್ ನ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಗುರುವಾರ ಜನಸಂಪರ್ಕ ಸಭೆ ನಡೆಯಿತು. ಈ ಸಂದರ್ಭ ಗೃಹಜ್ಯೋತಿ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರ ಪ್ರಶ್ನೆಗೆ ಉತ್ತರಿಸಿದ ವೃತ್ತ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್ ಹೀಗೆ ಉತ್ತರಿಸಿದರು.

ವಿದ್ಯುತ್ ಗುತ್ತಿಗೆದಾರರೂ ಹಾಗು ಸಾಮಾಜಿಕ ಕಾರ್ಯಕರ್ತರೂ ಆಗಿರುವ ಲಕ್ಷ್ಮೀನಾರಾಯಣ ಬಂಟ್ವಾಳ ಮಾತನಾಡಿ, ಬಹುತೇಕ ಟಿಸಿಗಳಿಗೆ ಗಿಡದ ಬಳ್ಳಿ ಸುತ್ತಿಕೊಂಡಿದ್ದು ತೆಗೆಯುವವರೇ ಇಲ್ಲ ಎಂಬಂತಾಗಿದೆ. ಅಪಾಯಕಾರಿಯಾಗಿರುವ ಇದನ್ನು ತತ್ ಕ್ಷಣವೇ ತೆಗೆಯಬೇಕು. ಇಲ್ಲವಾದರೆ ಸೊಪ್ಪು ಗಿಡವನ್ನು ಟಿಸಿಗೆ ಬಿಡಲು ನಮಗೂ ಅವಕಾಶ ಮಾಡಿಕೊಡಿ ಎಂದರು. ಗೃಹಜ್ಯೋತಿ ಪಡೆಯುವ ಕೆಲವು ಕುಟುಂಬಗಳು ಬೀದಿದೀಪ, ಪ್ಯಾಸೇಜ್ ಗೆ ನೇರ ಸಂಪರ್ಕ ಪಡೆದುಕೊಂಡಿದ್ದಾರೆ. ಇದರ ವಿರುದ್ದ ತನಿಖೆ ಮಾಡಬೇಕು. ಮೆಸ್ಕಾಂ ಕಚೇರಿ ಸಿಬ್ಬಂದಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದವರು ಒತ್ತಾಯಿಸಿದರು.

ಮೃತಪಟ್ಟ ಕಾರ್ಮಿಕಗೆ ಪರಿಹಾರ ನೀಡಿ
ಏಳು ತಿಂಗಳ ಹಿಂದೆ ವಿದ್ಯುತ್ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದ ಕಾವಳಮುಡೂರು ಗ್ರಾಮದ ಕಾವಳಕಟ್ಟೆ ನಿವಾಸಿ ಅಕ್ಬರ್ ಆಲಿ ಪ್ರಾಣ ಕಳೆದುಕೊಂಡಿದ್ದರು. ಇದುವರೆಗೂ ಅವರಿಗೆ ಪರಿಹಾರ ದೊರಕಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಗಮನ ಸೆಳೆದರು.

ಸರಕಾರದ ವತಿಯಿಂದಲೇ ನೇಮಕವಾದ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟೊರೇಟ್ ವರದಿಯ ಪ್ರಕಾರವೇ ನಾವು ಕ್ರಮ ಕೈಗೊಳ್ಳುತ್ತೇವೆ. ಆಕ್ಷೇಪಣೆ ಇದ್ದರೆ ಉಜಿರೆ ಸಬ್ ಡಿವಿಷನ್ ನಲ್ಲಿ ದೂರು ಅರ್ಜಿ ನೀಡಬಹುದು. ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಮ್ಟಾಡಿಯಲ್ಲಿ ಜೋತು ಬಿದ್ದ ಲೆನ್ ಗಳ ತೆರವು ಮಾಡಬೇಕು, ನಲ್ಕೆಮಾರ್ ಕೆರೆಯ ಬಳಿಕ ಅಪಾಯಕಾರಿ ಮರ ಇದ್ದು ಅದರ ತೆರವು ಮಾಡಬೇಕು. ಇರ್ವತ್ತೂರು ಗ್ರಾ.ಪಂ ವ್ಯಾಪ್ತಿಗೆ ಹೊಸ ಟಿಸಿ ಅಳವಡಿಸಬೇಕು, ನಾವೂರು ಬಡಗುಂಡಿಯಲ್ಲಿ ವೋಲ್ಟೇಜ್ ಸಮಸ್ಯೆಯನ್ನು ಸರಿ ಮಾಡಬೇಕು., ಕಾವಳಕಟ್ಟೆಯಲ್ಲಿ ವಿದ್ಯುತ್ ಕಂಬವೊಂದು ಅಪಾಯಕಾರಿಯಾಗಿ ರಸ್ತೆ ಬದಿ ಇದ್ದು, ವಾಹನಗಳು ಇದಕ್ಕೆ ತಾಗಿಕೊಂಡೇ ತೆರಳುತ್ತಿದೆ ಎಂಬಿತ್ಯಾದಿ ವಿಚಾರಗಳ ಕುರಿತು ಗ್ರಾಹಕರು ಗಮನ ಸೆಳೆದರು.
ಬಂಟ್ವಾಳ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್, ಬಂಟ್ವಾಳ ಉಪವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ಭಟ್, ಬಂಟ್ವಾಳ ಉಪವಿಭಾಗ 2ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು.


Be the first to comment on "ಗೃಹಜ್ಯೋತಿ ಕುರಿತು ಗೊಂದಲಗಳು ಬೇಡ: ಬಂಟ್ವಾಳ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಂಗಳೂರು ವೃತ್ತ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್"