ಮಂಗಳೂರು: ಮೂಲತಃ ಬಂಟ್ವಾಳ ತಾಲೂಕಿನವರಾದ ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಮತ್ತು ರಾಜ್ಯದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಡಾ. ಅರುಣಶ್ಯಾಮ್ ಅವರನ್ನು ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ನ ಸ್ವತಂತ್ರ ಹೆಚ್ಚುವರಿ ನಿರ್ದೇಶಕರನ್ನಾಗಿ (Non-Executive, Independent Director) ನೇಮಕ ಮಾಡಲಾಗಿದೆ.
ಜುಲೈ 18ರಂದು ನಿರ್ದೇಶಕ ಮಂಡಳಿಯ ಸಭೆಯಲ್ಲಿ ಡಾ. ಎಂ.ಅರುಣ ಶ್ಯಾಮ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ಜುಲೈ 18ರಿಂದ ನಾಲ್ಕು ವರ್ಷಗಳ ಅವಧಿಗೆ ನೇಮಿಸಲಾಯಿತು. ಅವರ ನೇಮಕವನ್ನು ಮಂಗಳೂರು ದಕ್ಷಿಣ ಶಾಸಕ ಎಂ.ವೇದವ್ಯಾಸ ಕಾಮತ್ ಸಹಿತ ಪ್ರಮುಖರು ಸ್ವಾಗತಿಸಿದ್ದಾರೆ. ಅವರ ವಿವರಗಳು ಇಲ್ಲಿವೆ.

ಡಾ. ಅರುಣ ಶಾಮ್ ಅವರು 1982 ಮಾರ್ಚ್ 21ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪಂಜಿಗದ್ದೆಯ ಕೃಷಿ ಕುಟುಂಬದಲ್ಲಿ ಜನಿಸಿದರು.

ಪ್ರಾಥಮಿಕ ಶಿಕ್ಷಣವನ್ನು ವಿಟ್ಲ ಮಾದಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಿಕ್ಷಣವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮಾಡಿದ್ದು, ಬಳಿಕ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ (LLB) ಪಡೆದರು. ಶಿವಮೊಗ್ಗದ ಸಿ.ಬಿ.ಆರ್. ನ್ಯಾಷನಲ್ ಲಾ ಕಾಲೇಜಿನ (ಕುವೆಂಪು ವಿವಿ) ಮೂಲಕ ಎಲ್ಎಲ್ಎಂ (LLM) ಮುಗಿಸಿ, ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಪಿಎಚ್ಡಿ(Ph.D.) ಪದವಿ ಪಡೆದಿದ್ದಾರೆ.

ವಕೀಲಿವೃತ್ತಿ: 2004ರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡ ಇವರು, ಶಿವಮೊಗ್ಗದ ಹಿರಿಯ ನ್ಯಾಯವಾದಿ ಎಂ.ಆರ್. ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ವೃತ್ತಿಜೀವನ ಆರಂಭಿಸಿದರು.

2006 ರಲ್ಲಿ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ ಕೆ. ಎಂ. ನಟರಾಜ್ ಅವರೊಂದಿಗೆ ಬೆಂಗಳೂರು ಹೈಕೋರ್ಟ್ನಲ್ಲಿ ಕೆಲಸ ಆರಂಭಿಸಿದರು. ನಂತರ ಬೆಂಗಳೂರಿನಲ್ಲಿ ತಮ್ಮದೇ ಆದ ಅರುಣ್ ಶ್ಯಾಮ್ ಅಸೋಸಿಯೇಟ್ಸ್ ಕಾನೂನು ಸಂಸ್ಥೆಯನ್ನು ಸ್ಥಾಪಿಸಿದರು. ಸೆಪ್ಟೆಂಬರ್ 2020 ರಲ್ಲಿ ಇವರನ್ನು ಕರ್ನಾಟಕ ಸರ್ಕಾರದ Additional Advocate General(AAG) ಆಗಿ ನೇಮಿಸಲಾಗಿತ್ತು. ಶತಮಾನೋತ್ತರ ಇತಿಹಾಸವಿರುವ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ನ ಸ್ವತಂತ್ರ ಹೆಚ್ಚುವರಿ ನಿರ್ದೇಶಕರನ್ನಾಗಿ (Non-Executive, Independent Director) ನೇಮಕ ಮಾಡಲಾಗಿದೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಶೈಕ್ಷಣಿಕ ಮಂಡಳಿ (Academic Council) ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜಿನಲ್ಲಿದ್ದಾಗ ಎಬಿವಿಪಿಯ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅವರು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳ ಮೂಲಕ ಗುರುತಿಸಲ್ಪಟ್ಟಿದ್ದಾರೆ. ಇತ್ತೀಚೆಗೆ ಯಶಸ್ವಿಯಾಗಿ ನಡೆದ ಬಂಟ್ವಾಳ ತಾಲೂಕಿನ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು.


Be the first to comment on "ಕರ್ಣಾಟಕ ಬ್ಯಾಂಕ್ ಸ್ವತಂತ್ರ ಹೆಚ್ಚುವರಿ ನಿರ್ದೇಶಕರಾಗಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ ಶ್ಯಾಮ್ ನೇಮಕ"