ಬೆಳೆವಿಮೆ ಮೌಲ್ಯಮಾಪನಕ್ಕೆ ಮಳೆಮಾಪಕ ಸರಿ ಇಲ್ಲದಿದ್ದರೆ ಹತ್ತಿರದ ಎರಡು ಪಂಚಾಯತ್ ಗಳ ವರದಿ ಪರಿಗಣನೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಹೇಳಿದ್ದಾರೆ.

ಬಂಟ್ವಾಳ ತಾ.ಪಂ. ಆಡಳಿತಾಧಿಕಾರಿ ಇಬ್ರಾಹಿಂ ದೊಡ್ಡಮನಿ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅವರು ಮಳೆಮಾಪಕಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ದೂರುಗಳ ಕುರಿತು ಪ್ರಸ್ತಾವಿಸಿ, ಈ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಈ ವೇಳೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜಾ ಉತ್ತರಿಸಿ ಬಂಟ್ವಾಳ ಗ್ರಾ.ಪಂ ಮಟ್ಟದಲ್ಲಿ ಮಳೆ ಮಾಪಕ ಸರಿ ಇಲ್ಲದಿದ್ದರೂ ಪಕ್ಕದ ಎರಡು ಪಂಚಾಯತ್ ಗಳ ವರದಿಯನ್ನು ಪರಿಗಣಿಸಿ ಬೆಳೆ ವಿಮೆ ಸಂದರ್ಭ ಪರಿಗಣಿಸಲು ಅವಕಾಶ ಇದೆ ಎಂದರು.
ತಾಲೂಕು ಮಟ್ಟದಲ್ಲಿ ಅಧಿಕಾರಿಗಳಿಗೆ ಬರುವ ಎಲ್ಲಾ ಸಾರ್ವಜನಿಕ ದೂರು ದುಮ್ಮಾನಗಳಿಗೆ ಪ್ರಥಮವಾಗಿ ಸ್ಪಂದಿಸಬೇಕು. ತಮ್ಮ ವ್ಯಾಪ್ತಿಯಲ್ಲಿಯೇ ಅದಕ್ಕೆ ಪರಿಹಾರ ಒದಗಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಇಬ್ರಾಹಿಂ ದೊಡ್ಡಮಣಿ ಹೇಳಿದರು.


Be the first to comment on "ಮಳೆಮಾಪಕ ಸರಿ ಇಲ್ಲದಿದ್ದರೆ, ಹತ್ತಿರದ ಪಂಚಾಯಿತಿ ವರದಿ ಪರಿಗಣನೆ, ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿ ಮಾಹಿತಿ"