ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸಾಕಷ್ಟು ನೀರಿದ್ದರೂ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ನೀರು ಬಿಡದ ಕಾರಣ, ಕಳೆದ ಎರಡು ದಿನಗಳಿಂದ ಹಲವೆಡೆ ನೀರು ಪೂರೈಕೆ ವ್ಯತ್ಯಯಗೊಂಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಬಂಟ್ವಾಳ ಪುರಸಭೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಪಕ್ಷಗಳ ಮುಖಂಡರು, ಪುರಸಭೆ ಮಾಜಿ ಸದಸ್ಯರು, ಸಾರ್ವಜನಿಕರು ಆಗಮಿಸಿ ಪ್ರತಿಭಟನೆ ನಡೆಸಿದರು.

ಜನರ ಆಕ್ರೋಶ ತೀವ್ರಗೊಂಡ ಬಳಿಕ ಸ್ಥಳಕ್ಕೆ ಆಡಳಿತಾಧಿಕಾರಿ ಹಾಗೂ ಸಹಾಯಕ ಕಮೀಷನರ್ ಮೀನಾಕ್ಷಿ ಆರ್ಯ, ಯೋಜನಾ ನಿರ್ದೇಶಕ ಸಂತೋಷ್, ತಹಸೀಲ್ದಾರ್ ಮಂಜುನಾಥ್ ಸಹಿತ ನಾನಾ ಅಧಿಕಾರಿಗಳು ಭೇಟಿ ನೀಡಿ, ಮುಖ್ಯಾಧಿಕಾರಿ ತೀರ್ಥಪ್ರಸಾದ್ ಮತ್ತು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಬಳಿ ಸಮಸ್ಯೆ ಇಷ್ಟು ಬೆಳೆಯಲು ಕಾರಣವೇನು ಎಂದು ಪ್ರಶ್ನಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಸಮಾಧಾನ ಹೇಳಿದ ಆಡಳಿತಾಧಿಕಾರಿ ಮೀನಾಕ್ಷಿ, ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ತತ್ ಕ್ಷಣದಿಂದ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕಾನೂನಿನ ಪ್ರಕಾರ ಮುಂದಿನ ಕ್ರಮವನ್ನು ಜನರಿಗೆ ತೊಂದರೆಯಾಗದಂತೆ ಕೈಗೊಳ್ಳಲಾಗುವುದು ಎಂದರು.
ಯೋಜನಾ ನಿರ್ದೇಶಕ ಸಂತೋಷ್ ಮಾತನಾಡಿ, ಗುತ್ತಿಗೆ ವಿಚಾರ ಹಾಗು ಗುತ್ತಿಗೆ ಸಿಬ್ಬಂದಿ ವೇತನ ಸಮಸ್ಯೆಗೆ ಸಂಬಂಧಿಸಿ ಸಂಜೆಯೊಳಗೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ಮುಖಂಡ ಎ.ಗೋವಿಂದ ಪ್ರಭು ಈ ವೇಳೆ ಮಾತನಾಡಿ, ನಮಗೆ ಶಾಶ್ವತ ಪರಿಹಾರ ದೊರಕಬೇಕು, ಗುತ್ತಿಗೆ ವಿಚಾರಕ್ಕೆ ಹಾಗೂ ಕೆಲಸ ಮಾಡುವವರ ವಿಚಾರಕ್ಕೆ ಸಂಬಂಧಿಸಿ ನ್ಯಾಯ ಒದಗಿಸಬೇಕು ಎಂದರು.
ಮೊನೀಶ್ ಆಲಿ ಮಾತನಾಡಿ, ಕಾನೂನು ತಪ್ಪಿ, ಅಡ್ ಜಸ್ಟ್ ಮೆಂಟ್ ಮಾಡಬೇಕು ಎಂದು ನಾವು ಹೇಳುವುದಿಲ್ಲ. ನೀವು ಖುದ್ದಾಗಿ ನಿಂತು ಕ್ರಮ ಕೈಗೊಳ್ಳಬೇಕು ಎಂದು ಆಡಳಿತಾಧಿಕಾರಿ ಅವರಿಗೆ ತಿಳಿಸಿದರು.
ಮಾಜಿ ಸದಸ್ಯ ಪ್ರವೀಣ್ ಮಾತನಾಡಿ, ಕುಡಿಯುವ ನೀರು ಪೂರೈಕೆ ಮಾಡದೇ ಇರುವುದು ಗಂಭೀರ ವಿಷಯವಾಗಿದ್ದು, ಕೂಡಲೇ ಪರಿಹರಿಸಬೇಕು ಎಂದರು.

ಬೆಳಗ್ಗಿನಿಂದಲೇ ಪ್ರತಿಭಟನೆ:
ಬೆಳಗ್ಗೆ ಸುಮಾರು 10 ಗಂಟೆ ವೇಳೆ ಸಾರ್ವಜನಿಕರು, ಮೂರು ಪಕ್ಷಗಳ ಮುಖಂಡರು ಪುರಸಭೆ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿಸದ ತಹಸೀಲ್ದಾರ್ ಮಂಜುನಾಥ್ ಪುರಸಭೆ ಕಚೇರಿಗೆ ಆಗಮಿಸಿದ ವೇಳೆ ಸ್ಥಳೀಯರು ಸಮಸ್ಯೆಯನ್ನು ವಿವರಿಸಿದರು. ಬಳಿಕ ಕಚೇರಿಯೊಳಗೆ ತೆರಳಿದ ತಹಸೀಲ್ದಾರ್ ಅವರಿಗೆ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಬಾರದೇ ಇರುವುದ ಗಮನಕ್ಕೆ ಬಂದಿದೆ. ದೂರವಾಣಿ ಕರೆ ಮಾಡಿ ಇಬ್ಬರನ್ನೂ ಬರುವಂತೆ ಸೂಚಿಸಿದ್ದಾರೆ. ಕೊನೆಗೆ ಮುಖ್ಯಾಧಿಕಾರಿ ಕಚೇರಿಗೆ ಆಗಮಿಸಿದ್ದು, ಬಳಿಕ ಉನ್ನತಾಧಿಕಾರಿಗಳು ಬಂದ ನಂತರ ಮಾತುಕತೆ ನಡೆಸಲಾಗಿದೆ.
ಪ್ರತಿಭಟನೆ ಸಂದರ್ಭ ಮಾಜಿ ಸದಸ್ಯರಾಧ ಗೋವಿಂದ ಪ್ರಭು, ಮೊನೀಶ್ ಆಲಿ, ಇದ್ರೀಸ್, ಪ್ರವೀಣ್, ಗಂಗಾಧರ್ ಪೂಜಾರಿ, ಮಹಮ್ಮದ್ ಶರೀಫ್, ಮೀನಾಕ್ಷಿ, ಸಿದ್ದೀಕ್, ಜಗದೀಶ್ ಕುಂದರ್, ಹಲವು ಸಾಮಾಜಿಕ ಕಾರ್ಯಕರ್ತರು, ಮಾಜಿ ಸದಸ್ಯರು ಹಾಜರಿದ್ದರು.


Be the first to comment on "ಬಂಟ್ವಾಳದಲ್ಲಿ ನೀರು ಪೂರೈಕೆ ವ್ಯತ್ಯಯ: ಪುರಸಭೆ ಮುಂದೆ ಪ್ರತಿಭಟನೆ"