ಪೊದೆಗಳ ಮರೆಯಲ್ಲಿರುವ ಪಾಣೆಮಂಗಳೂರಿನ ಈ ಬಾವಿ ನೆನಪಾಗಬಹುದೇ?

ಪುನಶ್ಚೇತನ ಮಾಡಿದರೆ ನೀರಿನ ಸಮಸ್ಯೆ ನಿವಾರಣೆಯಾಗಬಹುದು

ಕಾಲ ಬದಲಾದಂತೆ ಜನರಿಗೆ ಉಪಯೋಗವಾಗುತ್ತಿದ್ದ ವಸ್ತುಗಳು ತೆರೆಮರೆಗೆ ಸರಿಯುವುದು ಇದ್ದದ್ದೇ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಲ್ಲೂ ಹಾಗೆ ಆಗಿದೆ. ಒಂದು ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ಮೆರೆದಿದ್ದ ಪೇಟೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಬಾವಿ ಇತ್ತು ಎನ್ನುವುದೇ ಈಗ ಮರೆತುಹೋದಂತಿದೆ.

ಜಾಹೀರಾತು

ಪಾಣೆಮಂಗಳೂರು ಸರಕಾರಿ ಶಾಲೆಯ ಪಕ್ಕದಲ್ಲಿ ಗಿಡಗಂಟಿಗಳಿಂದ ಕೂಡಿದ ಪೊದೆಗಳಿಂದ ಆವೃತವಾಗಿರುವ ಕಸಕಡ್ಡಿಗಳು ತುಂಬಿದ ಬಾವಿಯ ಕತೆ ಇದು.
ರಸ್ತೆಯ ಒಂದು ಬದಿಯಲ್ಲಿ ದೇವಸ್ಥಾನ, ಮತ್ತೊಂದು ಬದಿಯಲ್ಲಿ ಶಾಲೆ. ಮಧ್ಯೆ ಶಾಲೆಯ ಆವರಣದ ಪಕ್ಕದಲ್ಲೇ ಗಿಡಗಂಟಿಗಳಿಂದ ಬಾವಿ ಮುಚ್ಚಿಹೋಗಿ, ಕಸಕಡ್ಡಿಗಳಿಂದ ಕೂಡಿದೆ. ಇದರ ಸಮೀಪ ಸುಳಿಯಲೂ ಅಸಾಧ್ಯವಾಗುವಂತೆ ಇರುವ ಚರಂಡಿಯಲ್ಲಿ ಕಸ ಎಸೆಯುತ್ತಾರೆ, ಪೊದೆಗಳು ಇರುವ ಜಾಗದಲ್ಲೇ ಮೂತ್ರವಿಸರ್ಜನೆಯನ್ನೂ ಮಾಡುತ್ತಾರೆ. ಆದರೆ ಬಾವಿ ತಿಪ್ಪೆಗುಂಡಿಯಂತಾಗಿದೆ.

ಜಾಹೀರಾತು

ಎಲ್ಲರಿಗೂ ಬೇಕಾದ ಬಾವಿ ಈಗ ನಿರ್ಲಕ್ಷ್ಯಕ್ಕೆ:

ಪಕ್ಕದಲ್ಲೇ ಇರುವ ಸರಕಾರಿ ಶಾಲೆಗೂ ಇದೇ ಬಾವಿಯ ನೀರನ್ನು ಉಪಯೋಗಿಸಲಾಗುತ್ತಿತ್ತು. ಹಿಂದೆಲ್ಲಾ ಕೊಡಪಾನದಿಂದ ಬಾವಿಯ ನೀರನ್ನು ಸೇದುತ್ತಿದ್ದ ಕಾಲದಲ್ಲಿ ಇದೇ ನೀರನ್ನು ಉಪಯೋಗಿಸಿ ಕಾರು ತೊಳೆಯಲಾಗುತ್ತಿತ್ತು. ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಪಾಣೆಮಂಗಳೂರು ಪೇಟೆಯಿಂದ ಮಂಗಳೂರಿಗೆ ನಿತ್ಯ ಸರ್ವೀಸ್ ಕಾರುಗಳು ಓಡಾಡುತ್ತಿದ್ದವು. ಅವೆಲ್ಲವೂ ಅಂಬಾಸಿಡರ್ ಕಾರುಗಳು. ಇವುಗಳನ್ನು ಈಗಿನಂತೆ ಸರ್ವೀಸ್ ಸ್ಟೇಶನ್ ಗೆ ಹೋಗಿ ತೊಳೆಯುತ್ತಿರಲಿಲ್ಲ. ಈ ಬಾವಿಯ ನೀರನ್ನೇ ಚಾಲಕರು ಸೇದಿ ಕಾರು ತೊಳೆಯುತ್ತಿದ್ದರು.

ಜಾಹೀರಾತು

ಬಾಡಿಗೆ ಮುಗಿಸಿ ಸಂಜೆ ವೇಳೆ ಬರುವ ಕಾರುಗಳು ಮತ್ತು ಬೆಳಿಗ್ಗೆ ಎದ್ದು ರೆಡಿಯಾಗುವ ಕಾರುಗಳನ್ನು ಇದೇ ಬಾವಿಯಿಂದ ನೀರು ತೆಗೆದು ತೊಳೆಯುತ್ತಿರುವ ದೃಶ್ಯಗಳು ಮೂರು ದಶಕದ ಹಿಂದೆ ಸರ್ವೇಸಾಮಾನ್ಯವಾಗಿತ್ತು. ಪುರಸಭಾ ವ್ಯಾಪ್ತಿಯಲ್ಲಿ ಇಲಾಖೆ ಪೈಪ್ ಮೂಲಕ ಶುಧ್ದ ಕುಡಿಯುವ ನೀರನ್ನು ಮನೆಬಾಗಿಲಿಗೆ ಪೂರೈಕೆ ಮಾಡತೊಡಗಿದಾಗ ಬಾವಿ ತನ್ನಿಂದ ತಾನೆ ತನ್ನ ಸೌಂದರ್ಯ ಕಳಚುತ್ತಾ ಬಂತು. ಇದೀಗ ಪಾಣೆಮಂಗಳೂರಿನಲ್ಲಿ ಸರಕಾರಿ ಬಾವಿಯೊಂದತ್ತಾ? ಅದು ಎಲ್ಲಿತ್ತು ಎಂದು ಹುಡುಕುವ ಪರಿಸ್ಥಿತಿ ಇದೆ.

ಪುರಸಭಾ ಇಲಾಖೆಯಲ್ಲಿ ಕೆರೆಗಳ ಪುನಶ್ಚೇತನಕ್ಕೆ ಅವಕಾಶಗಳಿವೆ, ಆದೇ ರೀತಿ ಅಲ್ಲೊಂದು ಇಲ್ಲೊಂದು ಅಳಿದುಳಿದ ಅಳಿವಿನಂಚಿನಲ್ಲಿರುವ ಸರಕಾರಿ ಬಾವಿಗಳ ಉಳಿಸಲು ಇಲಾಖೆಯ ಜೊತೆಗೆ ಸಂಘಸಂಸ್ಥೆಗಳು ನೆರವಾಗುವ ಅವಶ್ಯಕತೆ ಇದೆ. ನದಿಯಲ್ಲೇ ನೀರು ಕಡಿಮೆಯಾಗುತ್ತಿರುವ ಕಾಲದಲ್ಲಿ ಜಲಮರುಪೂರಣ, ಜಲಸಂರಕ್ಷಣೆಗೆ ಬಾವಿಗಳು ಅವಶ್ಯವೂ ಹೌದು. ಮೊದಲೇ ಮಳೆ ಇಲ್ಲ, ಇರುವ ನೀರಿನ ಸೆಲೆಗಳನ್ನು ಹೀಗೆ ನಿರುಪಯುಕ್ತವನ್ನಾಗಿಸಿದ್ದಕ್ಕೇ ಪ್ರಕೃತಿ ಬಿಸಿಲಿನ ಶಾಪ ನೀಡುತ್ತಿದೆ ಎಂದು ಆಡಿಕೊಳ್ಳುವಂತೆ ಆಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಪೊದೆಗಳ ಮರೆಯಲ್ಲಿರುವ ಪಾಣೆಮಂಗಳೂರಿನ ಈ ಬಾವಿ ನೆನಪಾಗಬಹುದೇ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*