ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಬಂಟ್ವಾಳ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ರಾಜಗೋಪಾಲ ಕನ್ಯಾನ ಅವರ ಸಂಪಾದಿತ ಅನುವಾದಿತ ಕೃತಿ ಮಲಯಾಳೀ ವಿಷವೈದ್ಯ ಹಾಗೂ ಕೆ.ಟಿ. ರೈ ವಿಟ್ಲ ಮತ್ತು ರಾಜಗೋಪಾಲ ಕನ್ಯಾನ ಜಂಟಿಯಾಗಿ ಸಂಪಾದಿಸಿದ ಕೆದಂಬಾಡಿ ಜತ್ತಪ್ಪ ರೈ ಅವರ ಅನುವಾದಿತ ತುಳು ಗೀತಾಂಜಲಿ ಎಂಬ ಕೃತಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಭಾಷಾಂತರದ ಮೂಲಕ ಪರಸ್ಪರ ಬರೆಹಗಳನ್ನು ಹಂಚಿಕೊಳ್ಳುವುದರಿಂದ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷಾ ಸಂಬಂಧಗಳ ಬೆಸುಗೆ ಸಾಧ್ಯವಿದೆ, ಕನ್ನಡ ಭಾಷೆಯನ್ನು ಇನ್ನೂ ಶ್ರೀಮಂತಗೊಳಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಡಾ. ಕೆದಂಬಾಡಿ ತಿಮ್ಮಪ್ಪ ರೈ ವಿಟ್ಲ ಅವರು ತುಳು ಗೀತಾಂಜಲಿ ಬಗ್ಗೆ, ಡಾ. ಅಜಕ್ಕಳ ಗಿರೀಶ ಭಟ್ ಅವರು ಪುಸ್ತಕ ಪ್ರಕಟಣಾ ಕಾರ್ಯಗಳ ಕುರಿತು ಹಾಗೂ ಡಾ. ಜೆಡ್ಡು ಗಣಪತಿ ಭಟ್ ಅವರು ಮಲಯಾಳಿ ವಿಷವೈದ್ಯ ಕೃತಿ ಸಂಬಂಧಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೃತಿ ಸಂಪಾದಕ ರಾಜಗೋಪಾಲ ಕನ್ಯಾನ ಕೃತಿ ಪ್ರಕಟಣೆ ಕುರಿತು ಮಾತನಾಡಿದರು. ಅಬುಬಕ್ಕರ್ ಅಮ್ಮುಂಜೆ ನಾಡಗೀತೆ ಹಾಡಿದರು. ಗೌರವ ಕಾರ್ಯದರ್ಶಿಗಳಾದ ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದ ಸಮಾರಂಭದಲ್ಲಿ ತಾಲೂಕು ಕಸಾಪ ಸಂಘಟನಾ ಕಾರ್ಯದರ್ಶಿ ಜಯರಾಮ ಪಡ್ರೆ ಸ್ವಾಗತಿಸಿದರು. ಮತ್ತೋರ್ವ ಸಂಘಟನಾ ಕಾರ್ಯದರ್ಶಿ ದಾಮೋದರ ಏರ್ಯ ವಂದಿಸಿದರು. ಕೋಶಾಧ್ಯಕ್ಷ ಅಬ್ದುಲ್ ರಹಿಮಾನ್ ಡಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ನುರಿತ ಕಲಾವಿದರಿಂದ ಉಲೂಪಿ ವಿವಾಹ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
ಕೃತಜ್ಞತೆಗಳು.
– ರಾಜಗೋಪಾಲ್ ಕನ್ಯಾನ