ಬಂಟ್ವಾಳ: ಬಿಸಿರೋಡಿನ ಕೈಕಂಬದಲ್ಲಿ ಕ್ರೈಮ್ ಬ್ರಾಂಚ್ ಪೋಲೀಸರೆಂದು ನಂಬಿಸಿ ವ್ಯಕ್ತಿಯೋರ್ವರ ಬಂಗಾರ ದೋಚಿದ ಪ್ರಕರಣದಲ್ಲಿ ಇರಾನಿ ಗ್ಯಾಂಗ್ ಸದಸ್ಯರಾದ ಮಹಾರಾಷ್ಟ್ರ ದ ಜಾಕೀರ್ ಹುಸೇನ್ (26) ಮತ್ತು ಕಂಬರ್ ರಹೀಂ ಮಿರ್ಜಾ (32) ಬಂಧನಕ್ಕೊಳಗಾಗಿದ್ದಾರೆ.
2020 ರ ಜ.18 ರಂದು ಮಧ್ಯಾಹ್ನ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಮಿತ್ತಬೈಲು ಕೊಡಂಗೆ ನಿವಾಸಿ ಶಿವಪ್ರಸಾದ್ ಶರ್ಮ ಅವರು ಕೈಕಂಬದಲ್ಲಿ ನಡೆದುಕೊಂಡು ಹೋಗುವ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಕರೆದು ನಾನು ಕ್ರೈಂ ಬ್ರಾಂಚ್ ಪೋಲೀಸ್ ಆಫೀಸರ್ ನಿಮ್ಮನ್ನು ಚೆಕ್ ಮಾಡಲು ಇದೆ ಎಂದು ಇವನ ಜೊತೆ ಬಂದ ಇನ್ನೊಬ್ಬ ಕೂಡ ಅದೇ ಮಾತು ಹೇಳಿ ನಂಬಿಸಿ ಅವರು ಐಡೆಂಟಿಟಿ ಕೇಳಿದಾಗ ಆಶೋಕ್ ಕುಮಾರ್ ಕ್ರೈಂ ಬ್ರಾಂಚ್ ಎಂದು ಬರೆದಿರುವ ಕಾರ್ಡು ತೋರಿಸಿದ ಆರೋಪಿಗಳು ಇವರ ಬಳಿಯಲ್ಲಿದ್ದ ಬಂಗಾರ ಮತ್ತು ಹಣವನ್ನು ಕೇಳಿ ಪಡೆದುಕೊಂಡು ಇದನ್ನು ಕರವಸ್ತ್ರದಲ್ಲಿ ಕಟ್ಟಿಕೊಡುತ್ತೇವೆ ಹೀಗೆ ತಿರುಗಾಡ ಬಾರದೆಂದು ಹೇಳಿ ಪಡದುಕೊಂಡಿದ್ದರು.ಬಳಿಕ ಕರವಸ್ತ್ರದಲ್ಲಿ ಕಟ್ಟಿಕೊಂಡ ಲಕ್ಷಾಂತರ ರೂ ಮೌಲ್ಯದ ಬಂಗಾರ ಮತ್ತು ಹಣವನ್ನು ಹಿಡಿದುಕೊಂಡು ಬೈಕಿನಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ರೀತಿ ಕುಂದಾಪುರ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಈ ಪ್ರಕರದಣಲ್ಲಿ ಉಡುಪಿ ನಗರ ಪೋಲೀಸರು ಇರಾನಿ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಂಟ್ವಾಳದ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ಬಳಿಕ ಹಿರಿಯಡ್ಕ ಕಾರಾಗೃಹ ದಲ್ಲಿದ್ದ ಆರೋಪಿಗಳನ್ನು ಇಲ್ಲಿನ ಪ್ರಕರಣದ ವಿಚಾರಣೆಗಾಗಿ ಬಂಟ್ವಾಳ ನಗರ ಠಾಣೆಗೆ ಆರೋಪಿಗಳನ್ನು ಕರೆತಂದಿದ್ದು ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಮೇಲಾಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಅಪರಾಧ ವಿಭಾಗದ ಎಸ್.ಐ. ಕಲೈಮಾರ್ ಪಿ. ಆರೋಪಿಗಳನ್ನು ಪೋಲೀಸ್ ಕಸ್ಟಡಿಗೆ ಪಡೆದು ತನಿಖೆಗೆ ಒಳಪಡಿಸಿರುತ್ತಾರೆ.
Be the first to comment on "ಪೊಲೀಸರು ಎಂದು ನಂಬಿಸಿ ಚಿನ್ನ, ನಗದು ಕದ್ದೊಯ್ದ ಇಬ್ಬರ ಬಂಧನ"