ಬಂಟ್ವಾಳ ತಾಲೂಕಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ. ಶ್ಯಾಮರಾವ್ ನಿಧನ

ಜಾಹೀರಾತು

ಬಂಟ್ವಾಳ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ (97) ಮಂಗಳವಾರ ಬೆಳಿಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ ರಾಜೀವಿ, ಪುತ್ರ ಸತೀಶ್ ಹಾಗೂ ಐದುಮಂದಿ ಹೆಣ್ಣುಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ

ಮೂಲತಃ ಬಿ.ಸಿ.ರೋಡಿನವರಾದ ಇವರ ಕಳೆದ ಕೆಲವು ಸಮಯಗಳಿಂದ ವಯೋ ಸಹಜ ಅನಾರೋಗ್ಯದಿಂದ‌ ಬಳಲುತ್ತಿದ್ದು, ಶಿವಮೊಗ್ಗದ ಮಗನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ತಮ್ಮ ಜೀವಿತದ ಬಹು ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದಿದ್ದರೂ , ಇವರು ಮೂಲತಃ ಬಂಟ್ವಾಳ ತಾಲೂಕಿನ ಬಿಸಿರೋಡಿನವರು. ಕಲಿತದ್ದು ೭ನೇ ತರಗತಿವರೆಗೆ. ಆದರೆ ಕನ್ನಡ,

ಜಾಹೀರಾತು

ತಮಿಳು, ಹಿಂದಿ, ಇಂಗ್ಲಿಷ್, ತೆಲುಗು ಹೀಗೆ ಪಂಚಭಾಷೆ ಬಲ್ಲವರು. ವಿದ್ಯಾರ್ಥಿ ದೆಸೆಯಿಂದಲೇ ಬಾವುಟ ಹಿಡಿಯುವುದು, ಜೈಕಾರ ಕೂಗುವುದು, ಕರಪತ್ರ ಹಂಚುವುದು ಮೊದಲಾದ ಹುಡುಗಾಟಿಕೆಗಳಿಂದ ಕ್ರಾಂತಿಕಾರಿಯೆಂದು ಗುರುತಿಸಿಕೊಂಡಿದ್ದ ಇವರು೧೯೪೨ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 1923 ರಲ್ಲಿ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದಲ್ಲಿ ಜನಿಸಿದ ಶ್ಯಾಮರಾಯ ಆಚಾರ್ಯರು ಎಂ.ಡಿ.ಶ್ಯಾಮರಾವ್ ಎಂದೇ ಪ್ರಸಿದ್ಧರು.

ಬಂಟ್ವಾಳ ಮಂಗಳೂರು ಮುಖ್ಯ ರಸ್ತೆಯ ಪಕ್ಕದಲ್ಲಿ ಇದ್ದ ಇವರ ಮನೆಯ ಮುಂದೆ ಹಾದು ಹೋಗುತ್ತಿದ್ದ ಸ್ವಾತಂತ್ರ್ಯ ಚಳುವಳಿಗಾರರ ಸಾಲುಸಾಲು ಹಾಗೂ ಪೊಲೀಸರ ಮಾರ್ಚ್ ಫಾಸ್ಟ್ ಸಣ್ಣ ವಯಸ್ಸಿನ ಶ್ರೀ ಶಾಮರಾಯರಿಗೆ ಪ್ರೇರಣೆಯಾದವು.

ಹುಡುಗಾಟಿಕೆಯಲ್ಲಿ ತನ್ನದೇ ಸ್ನೇಹಿತರ ಗುಂಪು ಕಟ್ಟಿ ತಂದೆಯವರಿಗೆ ಗೊತ್ತಾಗದಂತೆ, ಚಳುವಳಿಗಳ ಸಮಯದಲ್ಲಿ, ಬ್ರಿಟೀಷರ  ದೂರವಾಣಿ ಲೈನ್ ಗಳನ್ನು ಕಟ್ ಮಾಡುವುದರಿಂದ ಶುರುವಾಗಿದ್ದು , ಮುಂದೆ ಚಳುವಳಿಗಾರರಿಗೆ ಗುಪ್ತ ವಾಗಿ ಮಾಹಿತಿ ತಲುಪಿಸುವ ಸಂವಾಹಕನ ಕೆಲಸವನ್ನೂ ಮಾಡಿದವರು. ಚಳುವಳಿಗಾರರಿಗೆ ಪೊಲೀಸರ , ಸೈನ್ಯದ ಬರುವಿಕೆಯ ಸೂಚನೆ ಕೊಡುವುದು,  ಸೇತುವೆಗಳ ಕಲ್ಲು ತೆಗೆದು ಗರ್ನಲ್ ಗಳನ್ನು ಇಟ್ಟು ಸಿಡಿಸುವುದು , ಮುಂತಾದ ಹುಡುಗಾಟಿಕೆಯ ಅಳಿಲು ಸೇವೆಯನ್ನು ದೇಶಪ್ರೇಮ ದಿಂದಲೇ ಮಾಡಿದರು.ಈ ಹುಡುಗನ ದೇಶಪ್ರೇಮ ಊರು ತುಂಬಾ ಹರಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯ್ತು. ತಂದೆಯ  ಗಮನಕ್ಕೆ ಬಂದಾಗ ಊರು ಬಿಟ್ಟು 3 , 4 ದಿನ ನಡೆದು ಹೋಗಿ ಸೇರಿದ್ದು ಕರ್ಮ ಭೂಮಿ ಶಿವಮೊಗ್ಗೆಗೆ. ಬಳಿಕ ತಮ್ಮ ಹೆಸರನ್ನು ಶ್ಯಾಮ ರಾವ್ ಎಂದು ಹೇಳಿ ಕೊಂಡು, ತಂದೆಯವರಿಂದ ದೂರ ಉಳಿದ ಇವರು ಸ್ವಾತಂತ್ರ್ಯ ಚಳುವಳಿಯಲ್ಲಿ ಅಡೆತಡೆಯಿಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡರು.

ಜಾಹೀರಾತು

ಅಂದಿನ ಕಾಂಗ್ರೇಸ್ ಸೇವಾದಳಕ್ಕೆ ಸೇರಿಕೊಂಡು ಗುಪ್ತವಾಗಿ ವಿವಿಧೆಡೆ ನಡೆಯುವ ಚಳುವಳಿಗಳ ಆಯೋಜನೆಗಳಲ್ಲಿ ಸಹಾಯ ಮಾಡುವುದು, ಸಂದೇಶಗಳನ್ನು ರವಾನಿಸುವುದು , ಹೀಗೆ ಯುವಕನಾಗಿ ತಮ್ಮನ್ನು ತೊಡಗಿಸಿಕೊಂಡರು. ಈ ಸಮಯದಲ್ಲಿ ಅನೇಕ ಮಹನೀಯರ ಒಡನಾಟ ಇವರಿಗೆ ದೊರಕಿತು.ಗೋಪಾಲ ಗೌಡರು, ರವಳಪ್ಪ, ದೊರೆಸ್ವಾಮಿ ಅಯ್ಯಂಗಾರ್, ಪೊನ್ನಮ್ಮ, ಎಂ.ಪಿ. ಈಶ್ವರಪ್ಪ, ಲಾಯರ್ ಸಿದ್ದಯ್ಯ, ನಾಗಪ್ಪ ಶೆಟ್ಟಿ, ಖಾದಿ ಶಂಕರಪ್ಪ ಮುಂತಾದವರ ಒಡನಾಟ ಬೆಳೆಯಿತು.

1946 ರಲ್ಲಿ ಬಂಧಿತರಾಗಿ ಶಿವಮೊಗ್ಗದ ಜೈಲಿನಲ್ಲಿ 2 ತಿಂಗಳ ಜೈಲು ಶಿಕ್ಷೆ ಗೆ ಒಳಗಾದರು. ಸ್ವಾತಂತ್ರ್ಯ ಸಿಕ್ಕ ನಂತರವೂ ತಮ್ಮ ಸೇವಾ ಕಾರ್ಯವನ್ನು  ಮುಂದುವರೆಸಿಕೊಂಡ ಇವರು,‌ಗಾಂಧೀಜಿ ಯವರು ಹಾಕಿಕ್ಕೊಟ್ಟ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು. 

ಸ್ವಂತವಾಗಿ ಹಿಂದಿ ಕಲಿತು, ಹಿಂದಿಯನ್ನು ದೇಶದ ಸಂಪರ್ಕ ಭಾಷೆ ಮಾಡುವ ಗಾಂಧೀಜಿಯವರ ಕನಸಿನಂತೆ , ಶಿವಮೊಗ್ಗದ ಗಾಂಧಿ ಮಂದಿರದಲ್ಲಿ ಸಾವಿರಾರು ಜನರಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮೂಲಕ ಯಾವುದೇ ಶುಲ್ಕವಿಲ್ಲದೇ ಹಿಂದಿ ಪಾಠ ಮಾಡಿದರು.  ಇವರ ಶಿಷ್ಯರಲ್ಲಿ ಅನೇಕರು ಮುಂದೆ ಶಿವಮೊಗ್ಗದ ಹಿಂದಿ ಶಿಕ್ಷಕರಾಗಿ, ವಿದ್ವಾಂಸರಾಗಿ ಹೋಗಿರುವುದು ವಿಶೇಷ.  ಈಗಿನ ಗಾಂಧಿ ಮಂದಿರಕ್ಕೆ ಇವರೇ ನಾಮಕರಣ ಮಾಡಿದ್ದು, ಮುಂದೆ ಅದುವೇ ಚಾಲನೆಯಲ್ಲಿ ಉಳಿದದ್ದು ವಿಶೇಷ,.

ಜಾಹೀರಾತು

1960 ರಲ್ಲಿ  ರಾಜೀವಿಯವರನ್ನು ಮದುವೆಯಾದ ನಂತರ ಜೀವನೋಪಾಯಕ್ಕಾಗಿ ಮಾಡಿದ್ದು, ಟೈಪ್ ರೈಟರ್ ರಿಪೇರಿ , ಮೆಡಿಕಲ್ ಸಾಧನಗಳ ರಿಪೇರಿಗಳನ್ನು. ಆ ಸಮಯದಲ್ಲಿ ಬಾಂಬೆ ಮತ್ತು ಬೆಂಗಳೂರಿನಿಂದ ತಂತ್ರಜ್ಞರು ಬರ ಬೇಕಾಗಿದ್ದ ಸಂಧರ್ಭದಲ್ಲಿ, ಅವರ ಕೆಲಸಗಳನ್ನು ಸ್ವತಃ ಕಲಿತು , ಸೇವಾ ಮನೋಭಾವದಿಂದ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾದರು. ಬೆರಳಚ್ಚು ಯಂತ್ರ, ಹೊಲಿಗೆ ಯಂತ್ರ, ಕಲ್ಲಚ್ಚು, ಆಟೋ ಮೀಟರ್, ಸೂಕ್ಷ್ಮ ದರ್ಶಕ, ದೂರದರ್ಶಕ ಮೊದಲಾದ ಸೂಕ್ಷ್ಮ ಯಂತ್ರಗಳನ್ನು ದುರಸ್ತಿ ಮಾಡುವ ಇವರು ಸಣ್ಣ ಇಂಜಿನಿಯರ್ರೂ ಆಗಿದ್ದಾರೆ. ಆಸ್ಪತ್ರೆಗಳಲ್ಲಿನ ಆರೋಗ್ಯ ಸಂಬಂಧಿ ಹಳೇ ಯಂತ್ರಗಳ ರಿಪೇರಿಗಾಗಿ ಶಿವಮೊಗ್ಗದ ಕೆಲ ವೈದ್ಯರು ಇತ್ತೀಚಿನವರೆಗೂ ಇವರ ನೆರವು ಪಡೆಯುತ್ತಿದ್ದರು.

ಅಂಬರ ಚರಕದಲ್ಲಿ ನೂಲು ತೆಗೆಯುವುದರಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ ಇವರು, ಮನೆಮನೆಗೆ ತೆರಳಿ ಚರಕದಿಂದ  ಇವರು ನೂಲು ತೆಗೆಯುವ ತರಬೇತಿ ನೀಡಿದ್ದಾರೆ. ಚಿನ್ನದ ಕೆಲಸದಲ್ಲೂ ವಿಶೇಷ ಪ್ರಾವಿಣ್ಯತೆ ಹೊಂದಿದ್ದ ಇವರು ಹೋರಾಟದ ಆ ದಿನಗಳಲ್ಲಿ ರಾತ್ರಿ ಹೊತ್ತು ತನ್ನ ಅಣ್ಣ ಪುಟ್ಟಣ್ಣ ಆಚಾರ್ ರೊಂದಿಗೆ ಚಿನ್ನದ ಕೆಲಸ ಮಾಡಿಕೊಂಡಿದ್ದರು.

ಇವರ ದೇಶ ಪ್ರೇಮಿ ಬದುಕನ್ನು ಗೌರವಿಸಿ ಈಗಾಗಲೇ ನಾಡಿನ ಹಲವಾರು ಸಂಘ ಸಂಸ್ಥೆಗಳು ಶ್ಯಾಮ್ ರಾವ್  ರವರನ್ನು ಗೌರವಿಸಿದೆ.ಶಿವಮೊಗ್ಗದ ಕಾಳಿಕಾ ಪರಮೇಶ್ವರಿ ಸೊಸೈಟಿಯ ಪ್ರಾರಂಭದ ಕಮಿಟಿ ಸದಸ್ಯ , ಹಾಗೂ ಶಿವಮೊಗ್ಗದಲ್ಲಿ ಸತ್ಯ ಸಾಯಿ ಮಂದಿರ ಹುಟ್ಟು ಹಾಕಿದವರಲ್ಲಿ ಒಬ್ಬರಾದ ಇವರು, ಲೋಕಾ ಸಮಸ್ತಾ ಸುಖಿನೋ ಭವಂತು ಎನ್ನುವ ವಾಕ್ಯವನ್ನು ತಮ್ಮ ಮಂತ್ರವನ್ನಾಗಿಸಿ , ಸೇವೆ ಸಲ್ಲಿಸಿದ ಮಹನೀಯರು.ತಮ್ಮ ಆರು ಜನ ಮಕ್ಕಳೊಂದಿಗೆ , ಅಣ್ಣನ ಹಾಗೂ ಇತರ ದೂರದ ಊರಿನ ಅನೇಕ ವಿಶ್ವಕರ್ಮ ಜನಾಂಗದ ಮಕ್ಕಳಿಗೆ ಆಶ್ರಯದಾತರಾಗಿ ಮಾದರಿ ಬದುಕನ್ನು ಕಟ್ಟಿಕೊಂಡವರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳ ತಾಲೂಕಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ. ಶ್ಯಾಮರಾವ್ ನಿಧನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*