ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ, ವಿಶ್ವ ಹಿಂದು ಪರಿಷತ್ತಿನಲ್ಲಿ ಜಿಲ್ಲೆಯ ಸತ್ಸಂಗ ಪ್ರಮುಖ ಹಾಗೂ ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕರಾಗಿರುವ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಮೂವರು ಅರ್ಹರಿಗೆ ತನ್ನ ಸ್ವಂತ ಖರ್ಚಿನಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.
ಮನೆಗಳ ಹಸ್ತಾಂತರ ಕಾರ್ಯಕ್ರಮ ಸೋಮವಾರ ಕಶೆಕೋಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಮನೆಗಳ ಕೀಲಿಕೈಯನ್ನು ಹಸ್ತಾಂತರಿಸುವ ಮೂಲಕ ಆಶೀರ್ವದಿಸಿದರು.
ಈ ಸಂದರ್ಭ ವಿಶ್ವ ಹಿಂದು ಪರಿಷತ್ ಪ್ರಮುಖರಾದ ಕ.ಕೃಷ್ಣಪ್ಪ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಪೌರೋಹಿತ್ಯವನ್ನು ನಡೆಸುವ ಕಶೆಕೋಡಿ ಸೂರ್ಯನಾರಾಯಣ ಭಟ್, ತನ್ನ ಆದಾಯದ ಶೇ.50ರಷ್ಟನ್ನು ಸಮಾಜಕ್ಕೆ ಮೀಸಲಿರಿಸಿದ್ದು, ತಾನೇ ಜಾಗ ಖರೀದಿಸಿ, ಅವುಗಳಲ್ಲಿ ತಲಾ 4 ಸೆಂಟ್ಸ್ ಗಳಲ್ಲಿ ಮನೆ ಕಟ್ಟಿಸಿದ್ದಾರೆ. ಈ ಮನೆಗಳಿಗೆ ವಿದ್ಯುತ್, ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಸುಮಾರು 30 ಲಕ್ಷ ರೂ ವೆಚ್ಚ ಇದಕ್ಕಾಗಿದೆ. ಕಳೆದ ವರ್ಷ ಇದೇ ರೀತಿ ಸೂರ್ಯನಾರಾಯಣ ಭಟ್ ಒಬ್ಬರಿಗೆ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಿದ್ದು, ಒಟ್ಟು 4 ಮನೆಗಳನ್ನು ಅವರು ಅರ್ಹರಿಗೆ ಒದಗಿಸಿದಂತಾಗಿದೆ. ಇದಲ್ಲದೆ, ಬಸ್ ನಿಲ್ದಾಣ, ದಾರಿದೀಪ, ಶೌಚಾಲಯವನ್ನು ತನ್ನೂರಿಗೆ ಕಟ್ಟಿಸಿಕೊಟ್ಟಿದ್ದು, ವರ್ಷಂಪ್ರತಿ 5 ಮಂದಿ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ಆರ್ತತ್ರಾಣ ಯೋಜನೆಯನ್ವಯ ಏಳು ಮನೆಗಳ ತಿಂಗಳ ಖರ್ಚು ಒದಗಿಸುತ್ತಿದ್ದಾರೆ.
ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿ ಸೇರಿ
https://chat.whatsapp.com/HEamC5PR5BQ1pNoRgq3yx4
Be the first to comment on "ಬಡವರಿಗೆ ಮನೆ ನಿರ್ಮಿಸಿ ಹಸ್ತಾಂತರಿಸುವ ಮೂಲಕ ಮಾದರಿಯಾದ ಕಶೆಕೋಡಿ ಸೂರ್ಯನಾರಾಯಣ ಭಟ್"