ಒಳ್ಳೇ ಸೌಕರ್ಯ ಕೇಳೋದು ತಪ್ಪೇನಲ್ವಲ್ಲ?

ಹರೀಶ ಮಾಂಬಾಡಿ, www.bantwalnews.com

 

ಜಾಹೀರಾತು

ಮಂಗಳೂರಿನ ನಂತೂರ್ ಸರ್ಕಲ್ ನಲ್ಲಿ ಇಬ್ಬರು ಶನಿವಾರ ದಿನವಿಡೀ ಸುಡುಬಿಸಿಲಿನಲ್ಲಿ ಕುಳಿತು ಬೋರ್ಡ್ ನೆಟ್ಟು ಕುಳಿತಿದ್ದರು. ಮೊದಮೊದಲು ಯಾರಿವರು ಎಂಬುದರ ಗೋಜಿಗೂ ಸಾರ್ವಜನಿಕರು ಹೋಗಿರಲಿಲ್ಲ. ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಕುರಿತು ವಿಚಾರ ಬಿತ್ತರವಾಯಿತೋ ಪ್ರತಿನಿತ್ಯ ಹೋಗುವವರೂ ಹೌದಲ್ಲ, ಅವರು ಸುಮ್ಮನೇ ಕುಳಿತಿಲ್ಲ ಎಂದು ತಮ್ಮಲ್ಲೇ ಹೇಳಿಕೊಂಡರು.

ಇವರಿಬ್ಬರ ಹೆಸರು ಅರ್ಜುನ್ ಮತ್ತು ರೂಪನ್. ಮಂಗಳೂರಿನ ಅಲ್ಲಲ್ಲಿ ರಸ್ತೆಯನ್ನು ಕೆತ್ತಿದಂತೆ ಹೊಂಡಗಳಿರುವುದು ಜನಜನಿತ. ಇದರ ಕುರಿತು ಗಮನ ಸೆಳೆಯಲು ಅವರಿಬ್ಬರೂ ಈ ವಿಧಾನವನ್ನು ಅನುಸರಿಸಿದ್ದರು. ಬೋರ್ಡಿನಲ್ಲಿ IS IT TOO MUCH TO ASK FOR GOOD ROADS? ಎಂದು ಬರೆದಿತ್ತು.

ಹೌದಲ್ವಾ, ನಾವು ತೆರಿಗೆ ಕಟ್ತೇವೆ. ಪುರಸಭೆಯೋ, ಕಾರ್ಪೊರೇಶನ್ನೋ, ಪಂಚಾಯಿತಿಯೋ ಕೇಳಿದ ‘ಕರ’ಗಳನ್ನೆಲ್ಲಾ ಕೊಡ್ತೇವೆ. ಅವರಿಂದ ಸಕಾಲಕ್ಕೆ ವಿದ್ಯುದ್ದೀಪ ಉರೀಬೇಕು, ಸಕಾಲಕ್ಕೆ ನಳ್ಳಿಯಲ್ಲಿ ನೀರು ಬರಬೇಕು, ಸಕಾಲಕ್ಕೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು, ಒಳ್ಳೇ ರಸ್ತೆ ಬೇಕು ಎಂದು ಕೇಳುವುದು ತಪ್ಪಾ?

ಶಿರಾಡಿ ಘಾಟಿಯೇನೋ ಸಾಧಾರಣವಾಗಿದೆ. ಆದರೆ ಅದನ್ನು ತಲುಪುವ ರಸ್ತೆಗಳು ಏನೇನೂ ಚೆನ್ನಾಗಿಲ್ಲ. ಜನಪ್ರತಿನಿಧಿಗಳನ್ನು ಕೇಳಿದರೆ ‘ಹಾಗೆಲ್ಲಾ ಕೇಳುವುದುಂಟೇ, ಮಳೆ ಬರುವಾಗ ಯಾವಾಗ್ಲೂ ಆಗ್ತದೆ, ಮತ್ತೆ ಸರಿ ಆಗ್ತದೆ, ನಿಮಗೆ ಬೇರೇನೂ ಕಾಣಿಸುವುದಿಲ್ವಾ’ ಎಂಬ ಉತ್ತರ ಸಿಗುತ್ತದೆ ಎಂಬ ವಿಷಾದದ ಮಾತುಗಳು ಸಾರ್ವಜನಿಕರಿಂದ ಬರಬಾರದು, ಸಾರ್ವಜನಿಕರು ಕೇಳುವುದಕ್ಕೆ ಮೊದಲೇ ಜನಪ್ರತಿನಿಧಿಗಳು ಅವರ ಕೆಲಸ ಮಾಡಬೇಕು ಎನ್ನುತ್ತಾರೆ ಹಿರಿಯರು.

ಕೋಟಿ ಕೋಟಿ ಮಾತನಾಡುವ ರಾಜಕಾರಣಿಗಳು ಆ ಕೋಟಿಗಳನ್ನು ನಮ್ಮ ಕಿಸೆಯಿಂದದಲೇ ಪಡೆದದ್ದು ಎಂಬುದನ್ನು ಹೇಳಲು ಮರೆಯಬಹುದೇನೋ, ಆದರೆ ನಮಗೆ ಅದು ನೆನಪಿದೆಯಲ್ವಾ. ಅಭಿವೃದ್ಧಿಯ ಸಾಧನೆ ಪಟ್ಟಿ ನೀಡುವಾಗ ನಾನು ಅಷ್ಟು ಕೋಟಿ ಕೊಟ್ಟೆ, ಇಷ್ಟು ಕೋಟಿ ಕೊಟ್ಟೆ ಎಂದು ಹೇಳುವವರು ನೀವು ಕೊಟ್ಟ ತೆರಿಗೆ ಹಣದಿಂದ ನೀವು ಆರಿಸಿ ಕಳಿಸಿದ ನಾನು ನಿಮ್ಮ ಆಶಯಕ್ಕೆ ಅನುಗುಣವಾಗಿ ಈ ಕೆಲಸ ಮಾಡಿದೆ ಎಂದು ತಪ್ಪಿಯೂ ಹೇಳಲು ನೆನಪಾಗುವುದಿಲ್ಲ ಪಾಪ!!. ಎಲ್ಲಾದರೂ ಹೇಳಿದ್ದುಂಟೇ? ಯಾರಾದರೂ ತಮ್ಮ ಕಿಸೆಯಿಂದ ಹಣ ಹಾಕಿ ಕಟ್ಟಡ, ಬಸ್ ನಿಲ್ದಾಣ, ಸೇತುವೆ, ರಸ್ತೆ ಮಾಡಿಸಿದ್ದಾರಾ, ಇಲ್ಲ ಎಂದಾದ ಕಾರಣ, ಇದೆಲ್ಲವೂ ನಮ್ಮ ಹಣದಿಂದಲೇ ಆದ ಕಾರಣ ಏನಾಗುತ್ತಿದೆ ಎಂದು ನಮಗೆ ಕೇಳುವ ಹಕ್ಕಿದೆ ಎಂಬ ಹಿನ್ನೆಲೆಯಲ್ಲೇ ಸಮಸ್ಯೆಗಳುಂಟಾದಾಗ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಒಳರಸ್ತೆಗಳು, ಹೆದ್ದಾರಿಗಳು ಹದಗೆಟ್ಟ ಕೂಡಲೇ ರಿಪೇರಿ ಮಾಡಿ ಎಂದು ನಮ್ಮ ನಮ್ಮ ವಿಧಾನದಲ್ಲಿ ಒತ್ತಾಯಿಸುತ್ತೇವೆ.

ಹೀಗಾಗಿಯೇ #SaveNH75 ಎಂಬ ಅಭಿಯಾನ ಸಹಿತ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು, ಸೋಶಿಯಲ್ ಮೀಡಿಯಾಗಳ ಮೂಲಕ ಆಡಳಿತವನ್ನು ತಲುಪುವ ಯತ್ನ ಮಾಡಿದೆ. ಎಲ್ಲರಿಗೂ ಬೇಕಾಗಿರುವುದು ಉತ್ತಮ ಸೌಕರ್ಯ. ರಸ್ತೆಯಲ್ಲಿ ಎಡಕ್ಕೆ ಚಲಿಸಿ, ಬಲಕ್ಕೆ ಹೋಗಬೇಡಿ ಎಂಬ ನಿಯಮವಿದೆ. ನಿಯಮ ಪಾಲನೆ ಮಾಡಬೇಕಿದ್ದರೆ ಎಡದಲ್ಲಿ ಹೊಂಡ ಇರಬಾರದು. ಹೊಂಡ ತಪ್ಪಿಸಲು ಬಲಕ್ಕೆ ಚಲಿಸಿ ಅಪಘಾತವಾದದ್ದುಂಟು. ಈಗ ಮೊಬೈಲ್ ನಲ್ಲಿ ಟೈಪ್ ಮಾಡಿ ತಮ್ಮ ವಿಚಾರ ಮಂಡಿಸುವವರು ರಸ್ತೆ ಬದಿ ನಿಂತು ಆಗ್ರಹ ಮಾಡುತ್ತಿದ್ದಾರೆ. ಸಮಸ್ಯೆಗಳು ಬಂದ ಬಳಿಕ ಪರಿಹಾರ ಹುಡುಕುವ ಮೊದಲು ಸಮಸ್ಯೆಯೇ ಬಾರದಂತೆ ವ್ಯವಸ್ಥೆ ಕಲ್ಪಿಸುವತ್ತ ಆಡಳಿತ ಗಮನ ಹರಿಸಬೇಕು. ಮನಸ್ಸಿದ್ದರೆ ಮಾರ್ಗ. ಇದು ಸಾಧ್ಯ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಒಳ್ಳೇ ಸೌಕರ್ಯ ಕೇಳೋದು ತಪ್ಪೇನಲ್ವಲ್ಲ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*