ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರವೂ ಮಳೆಯ ಅಬ್ಬರವಿತ್ತು. ಅಲ್ಲಲ್ಲಿ ಹಾನಿ, ರಸ್ತೆ ಮುಳುಗಡೆ, ಸಮಸ್ಯೆಗಳು ತಲೆದೋರಿದವು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಜಿಲ್ಲೆಯಾದ್ಯಂತ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇತ್ತೀಚಿನ (8 ಗಂಟೆಗೆ) ವರದಿಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ, ಸ್ನಾತಕೋತ್ತರ ಪದವಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ನಾಳೆ (ಆಗಸ್ಟ್ 9ರಂದು) ಒಂದು ದಿನದ ರಜೆಯನ್ನು ಮುಂದುವರಿಸಿ ಘೋಷಿಸಲಾಗಿದೆ.
- ನೇತ್ರಾವತಿ (ಬಂಟ್ವಾಳ) – 8.8 (ಅಪಾಯದ ಮಟ್ಟ 8.5)
- ನೇತ್ರಾವತಿ (ಉಪ್ಪಿನಂಗಡಿ) 30 (ಅಪಾಯದ ಮಟ್ಟ 31.5)
- ಕುಮಾರಧಾರಾ (ಉಪ್ಪಿನಂಗಡಿ) 25.6 (ಅಪಾಯದ ಮಟ್ಟ 26.5)
ಬಂಟ್ವಾಳದಲ್ಲಿ ಹೇಗಿತ್ತು ಗುರುವಾರ?
ಇಡೀ ಬಂಟ್ವಾಳ ತಾಲೂಕಿನಲ್ಲಿ ಗುರುವಾರ ಮಳೆ ಕಡಿಮೆ ಇದ್ದರೂ ಘಟ್ಟ ಪ್ರದೇಶಗಳಲ್ಲಿ ಮಳೆಯಾದ ಕಾರಣ ನೇತ್ರಾವತಿ ಇದೇ ಮೊದಲ ಬಾರಿಗೆ ಅಪಾಯದ ಮಟ್ಟ (8.5 ಮೀಟರ್ ) ಮೀರಿತ್ತು. ರಾತ್ರಿ 7.45ರ ವೇಳೆಗೆ 8.8 ಮೀಟರ್ ಎತ್ತರದಲ್ಲಿ ನದಿ ಹರಿಯುತ್ತಿತ್ತು.
ನದಿ ತೀರ ಪ್ರದೇಶಗಳ ಕೆಲವೆಡೆ ನೀರು ಹರಿದುಬಂದಿದ್ದು, ತಾಲೂಕಿನಾದ್ಯಂತ ಮಳೆಹಾನಿಯ ಒಟ್ಟು 53 ಪ್ರಕರಣಗಳು ವರದಿಯಾದವು. ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಉಪ್ಪಿನಂಗಡಿ ಸಂಪರ್ಕ ಸೇತುವೆ ಮುಳುಗಿದೆ. ಕೈರಂಗಳ ಗ್ರಾಮದಲ್ಲಿ ಕಾಲುದಾರಿ ಕುಸಿದು 14 ಮನೆಗಳಿಗೆ ಹೋಗುವ ದಾರಿ ಸಂಪರ್ಕ ಕಡಿತಗೊಂಡಿದೆ. ಬುಧವಾರ ರಾತ್ರಿಯಿಂದ ಗುರುವಾರದವರೆಗೆ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 53 ಕಡೆ ಹಾನಿಗಳು ಸಂಭವಿಸಿವೆ. ಇವುಗಳಲ್ಲಿ 36 ಮನೆಗಳು, 5 ತೋಟಗಳಿಗೆ ಹಾನಿಯಾಗಿವೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.
www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸುದ್ದಿ, ಲೇಖನಗಳಿಗೆ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127
Be the first to comment on "ಮಳೆಯ ಅಬ್ಬರ, ನೇತ್ರಾವತಿ ಸಮೃದ್ಧ, ನಾಳೆಯೂ ಶಾಲೆ, ಕಾಲೇಜಿಗೆ ರಜೆ"