ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಇನ್ಫೋಸಿಸ್ ಸಮರ್ಪಣ ಟ್ರಸ್ಟ್ ವತಿಯಿಂದ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಗಳಿಗೆ ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಶನಿವಾರ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಸಮರ್ಪಣ್ ಟ್ರಸ್ಟ್ ನ ರಿತೇಶ್ ಬೆಂಗಳೂರು ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅವರಿಗೆ ಕಿಟ್ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಈಗಾಗಲೇ ರಾಜ್ಯದ 22 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಬಳಕೆ ಮತ್ತು ಫಲಿತಾಂಶವನ್ನು ಅನುಸರಿಸಿ ಮತ್ತಷ್ಟು ಶೈಕ್ಷಣಿಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಉದ್ಧೇಶಿಸಲಾಗಿದೆ. ಅಲ್ಲದೆ ಟ್ರಸ್ಟ್ ಉದ್ಯೋಗ, ಕೌಶಲ್ಯ ಅಭಿವೃದ್ಧಿ ಯೋಜನೆ, ನನ್ನ ಕಣ್ಣು ಯೋಜನೆ ಮೊದಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ವಿಜ್ಞಾನ ನಮ್ಮ ಜೀವನದ ಗುಣಮಟ್ಟವನ್ನು ಅಭಿವೃದ್ಧಿ ಮಾಡಲು ಬಳಕೆಯಾಗಬೇಕು. ಕೇವಲ ಪರೀಕ್ಷೆಗಾಗಿ ಕಲಿಕೆ ಎಂಬ ಟ್ರೆಂಡ್ ಬದಲಾಗಬೇಕು. ಮಕ್ಕಳ ಮನಸ್ಸಿನಾಳಕ್ಕೆ ತಲುಪುವಂತೆ ವಿಜ್ಞಾನದ ಪಾಠ ನಡೆಯಬೇಕು ಎಂದರು.
ಬೋಧನಾಕ್ರಮದಲ್ಲಿ ಬದಲಾವಣೆಯಾಗಬೇಕು ಎಂದ ಅವರು, ಗುಣಮಟ್ಟದ ವಿಜ್ಞಾನದ ಕಲಿಕೆ ಇಂದು ಪ್ರಾಥಮಿಕ ಹಂತದಲ್ಲೇ ಆಗಬೇಕಾಗಿದೆ. ವಿಜ್ಞಾನವನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳ ಕೊರತೆ ಇರುವುದು ಗಂಭೀರ ವಿಚಾರ. ಪ್ರಾಥಮಿಕ ಹಂತದಲ್ಲೇ ವಿಜ್ಞಾನದ ಕುರಿತು ಆಸಕ್ತಿ ಮೂಡಿಸುವ ಕಾರ್ಯ ಆಗಬೇಕು. ವಿಜ್ಞಾನ ಕಿಟ್ ಕೊಡುಗೆಗಳ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕಾದದ್ದು ಪ್ರಮುಖವಾದ ವಿಚಾರ ಎಂದರು.
ಉಪಪ್ರಾಂಶುಪಾಲ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೊ, ಇನ್ಫೋಸಿಸ್ ಟ್ರಸ್ಟ್ ನ ಪ್ರಮುಖರಾದ ರಿತೇಶ್, ಶೇಖರ್ ರೆಡ್ಡಿ, ಕೋಮಲಾ, ಶ್ವೇತಾ, ಡಿಸಿಸಿ ಬ್ಯಾಂಕ್ ಸಿಬ್ಬಂದಿ ಪದ್ಮನಾಭ ಶೆಟ್ಟಿ ವಾಮದಪದವು, ಪಂಜಿಕಲ್ಲು ಶಾಲಾ ಶಿಕ್ಷಕ ಇಂಮ್ತಿಯಾಜ್, ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ರಮೇಶ್ ನಾಯಕ್ ರಾಯಿ, ತುಳು ಸಾಹಿತ್ಯ ಅಕಾಡಮಿ ಸದಸ್ಯ ಆಲದಪದವು ಗೋಪಾಲ ಅಂಚನ್ ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ಇಸಿಒ ಸುಶೀಲಾ ವಂದಿಸಿದರು.
Be the first to comment on "ಸರಕಾರಿ ಶಾಲೆಗಳಿಗೆ ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣೆ"