ಹಳೆ ಸಮಸ್ಯೆಗಳ ಮುಂದುವರಿದ ಚರ್ಚೆ – ಬಂಟ್ವಾಳ ಪುರಸಭೆ ಮೀಟಿಂಗ್

www.bantwalnews.com  Editor: Harish Mambady

ಜಾಹೀರಾತು

ಮಂಗಳವಾರ ಬೆಳಗ್ಗೆ ಸುಮಾರು 10.30ರಿಂದ ಮಧ್ಯಾಹ್ನ 1.30ರ ಅವಧಿ.

ಬಿ.ಸಿ.ರೋಡಿನ ಫ್ಲೈ ಓವರ್ ನಡಿ ದಟ್ಟ ಟ್ರಾಫಿಕ್ ಮಧ್ಯೆ ತರಕಾರಿ ಮಾರಾಟ ನಿರ್ಭಿಡೆಯಿಂದ ನಡೆಯುತ್ತಿದ್ದರೆ, ಇತ್ತ ಬಂಟ್ವಾಳ ಪುರಸಭೆಯಲ್ಲಿ ಫ್ಲೈಓವರ್  ಪಕ್ಕ ನೀರು ನಿಲ್ಲುವ, ತರಕಾರಿ ಮಾರುವ, ಪಾರ್ಕಿಂಗ್ ನಡೆಸುವ ಮತ್ತು ಸುಂದರಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಮುಂದುವರಿದ ಚರ್ಚೆಯು ತಾರ್ಕಿಕ ಅಂತ್ಯ ಕಾಣಲೇ ಇಲ್ಲ.

ಈ ಮಧ್ಯೆ ಪುರಸಭೆಗೆ ಮೊದಲ ಬಾರಿ ಆಗಮಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸ್ವಚ್ಛತೆ, ಯುಜಿಡಿಯ ಸಮರ್ಪಕ ಅನುಷ್ಠಾನದ ಕುರಿತು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳ ಬದ್ಧತೆಯ ಕುರಿತು ಕಿವಿಮಾತು ಹೇಳಿಹೋದರೆ,ಸದಸ್ಯರು ಇಡೀ ಮೀಟಿಂಗ್ ಮುಗಿಯುವ ಹೊತ್ತಿಗೆ ಮೀಸಲಾತಿ ಪಟ್ಟಿ ಬದಲಾವಣೆಯ ಬಳಿಕ ತಾವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎಂಬ ಗಂಭೀರ ಚಿಂತನೆಯಲ್ಲಿ ಮುಳುಗಿದರು.

ಇದು ಸುಮಾರು ಎರಡು ತಿಂಗಳ ಬಳಿಕ ನಡೆದ ಬಂಟ್ವಾಳ ಪುರಸಭೆಯ ಮಂಗಳವಾರದ ಸಾಮಾನ್ಯ ಸಭೆಯ ಸಂಕ್ತಿಪ್ತ ನೋಟ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತಿಯಲ್ಲಿ ಪಿ.ರಾಮಕೃಷ್ಣ ಆಳ್ವ –ಅಧ್ಯಕ್ಷತೆ, ಮಹಮ್ಮದ್ ನಂದರಬೆಟ್ಟು – ಉಪಾಧ್ಯಕ್ಷ, ಬಿ.ವಾಸು ಪೂಜಾರಿ – ಸ್ಥಾಯಿ ಸಮಿತಿ ಅಧ್ಯಕ್ಷ, ರೇಖಾ ಜೆ. ಶೆಟ್ಟಿ – ಮುಖ್ಯಾಧಿಕಾರಿ ಹಾಗೂ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಮೊನೀಶ್ ಆಲಿ, ಬಿ.ದೇವದಾಸ ಶೆಟ್ಟಿ, ಸುಗುಣ ಕಿಣಿ, ಭಾಸ್ಕರ ಟೈಲರ್, ಬಿ.ಮೋಹನ್, ಪ್ರವೀಣ್, ಗಂಗಾಧರ್, ಚಂಚಲಾಕ್ಷಿ, ಮಹಮ್ಮದ್ ಶರೀಫ್, ಜಗದೀಶ ಕುಂದರ್, ವಸಂತಿ  ಚಂದಪ್ಪ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

ರಾಜೇಶ್ ನಾಯ್ಕ್ ಹಿತವಚನ:

ಪುರಸಭೆ ಎಲ್ಲ ವಿಷಯಗಳಲ್ಲೂ ಸುಂದರವಾಗಿದ್ದರೆ, ಇಡೀ ಕ್ಷೇತ್ರ ಚೆನ್ನಾಗಿರುತ್ತದೆ. ಒಳಚರಂಡಿ, ಸ್ವಚ್ಛತೆಯೇ ನನ್ನ ಮೊದಲ ಆದ್ಯತೆ. ಇವುಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳ, ಜನಪ್ರತಿನಿಗಳ ಸಹಕಾರ ಬೇಕು. ಹೀಗಂದವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ. ಜನಪ್ರತಿನಿಗಳು ಐದು ವರ್ಷಕ್ಕೊಮ್ಮೆ ಬದಲಾಗಬಹುದು ಆದರೆ ಅಧಿಕಾರಿಗಳು ತಮ್ಮ ನಿವೃತ್ತಿಯವರೆಗೆ ಸೇವೆ ಮಾಡುವವರು. ಹಾಗಾಗಿ ಯಾವುದೇ ಕೆಲಸಗಳನ್ನು ಅನುಷ್ಠಾನಕ್ಕೆ ತರುವ ಜವಬ್ದಾರಿಯುತ ಹೊಣೆಗಾರಿಕೆ ಅಕಾರಿಗಳಿದ್ದು ,ಇದನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಈ ಸಂದರ್ಭ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿಸಮಿತಿ ಅಧ್ಯಕ್ಷ ಬಿ. ವಾಸು ಪೂಜಾರಿ, ಪ್ರತಿಪಕ್ಷದ ಪರವಾಗಿ ಬಿ.ದೇವದಾಸ ಶೆಟ್ಟಿ, ಸದಸ್ಯರಾದ ಬಿ.ಮೋಹನ್, ಪ್ರವೀಣ್, ಮೊನೀಶ್ ಆಲಿ, ಮಹಮ್ಮದ್ ಇಕ್ಬಾಲ್ ಮತ್ತು ಇತರ ಸದಸ್ಯರು ಶಾಸಕರನ್ನು.   ಅಭಿನಂದಿಸಿದರೆ, ಪುರಸಭೆಯ ನೌಕರರ ಪರವಾಗಿ ನೌಕರರ ಸಂಘದ ಅಧ್ಯಕ್ಷ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಶಾಸಕರನ್ನು ಅಭಿನಂದಿಸಿದರು.

ಪ್ಲಾಸ್ಟಿಕ್ ಹೋಗಿ ಕುಪ್ಪಿ ಗ್ಲಾಸ್ ಬಂತು!

ಬಂಟ್ವಾಳ ಪುರಸಭೆ ಅಧಿಕಾರಿಗಳು ಇತ್ತೀಚೆಗೆ ಕೈಗೊಂಡ ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ದಾಳಿ ವಿಚಾರಕ್ಕೆ ಸಂಬಂಧಿಸಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಈ ಕುರಿತು ಪ್ಲಾಸ್ಟಿಕ್ ಉತ್ಪಾದಕ ಫ್ಯಾಕ್ಟರಿಯನ್ನೇ ನಿಷೇಧಿಸಬೇಕು ಎಂದು ವಾಗ್ದಾಳಿ ನಡೆಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಾಸು ಪೂಜಾರಿ, ಪ್ಲಾಸ್ಟಿಕ್ ಫ್ಯಾಕ್ಟರಿಯನ್ನೇ ಬಂದ್ ಮಾಡಿರಿ. ಇಲ್ಲವಾದರೆ ಗೂಡಂಗಡಿಗಳು, ಪುರಸಭಾ ವ್ಯಾಪ್ತಿಯ ಅಂಗಡಿಗಳಲ್ಲಿ ದಾಳಿ ನಡೆಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಬಿ.ದೇವದಾಸ ಶೆಟ್ಟಿ, ಎಸ್.ಡಿ.ಪಿ.ಐ. ಸದಸ್ಯ ಮೊನೀಶ್ ಆಲಿ, ಈ ಕುರಿತು ಸ್ಪಷ್ಟ ನೀತಿಯನ್ನು ಅನುಸರಿಸಬೇಕು, ಕಠಿಣ ನಿಯಮ ಪಾಲನೆ ವೇಳೆ ಬಡ ಅಂಗಡಿದಾರರ ಹಿತ ಕಾಯಬೇಕು, ಸಾಧ್ಯವಾದರೆ ಪ್ಲಾಸ್ಟಿಕ್ ಉತ್ಪಾದನೆಯ ಮೇಲೆ ನಿಯಂತ್ರಣ ಹೇರಲು ಪತ್ರ ಬರೆಯಿರಿ ಎಂದು ಒತ್ತಾಯಿಸಿದರು. ಪ್ಲಾಸ್ಟಿಕ್ ಮುಕ್ತ ಬಂಟ್ವಾಳ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವ ಬಂಟ್ವಾಳ ಪುರಸಭೆ ಮೀಟಿಂಗ್ ನಲ್ಲೂ ಅದೇ ಸೂತ್ರ ಅನುಸರಿಸಿತು. ಮೀಟಿಂಗ್ ನಲ್ಲಿ ಯಾವಾಗಲೂ ಕಂಡುಬರುತ್ತಿದ್ದ ಮಿನರಲ್ ವಾಟರ್ ಬಾಟಲ್ ಬದಲಾಗಿ, ಗಾಜಿನ ಗ್ಲಾಸಿನಲ್ಲಿ ನೀರು ಸರಬರಾಜಾಯಿತು.

ಇಂಟರ್ಲಾಕ್  ಯಾರು ಹಾಕಬೇಕು?

ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿ ಎಸ್.ಎಫ್.ಸಿ.ಯಲ್ಲಿ ಉಳಿಕೆ ನಿಧಿಯನ್ನು ಬಳಸಿ ಇಂಟರ್ ಲಾಕ್ ಅಳವಡಿಸುವ ಪ್ರಸ್ತಾಪವನ್ನು ಅಧ್ಯಕ್ಷ ರಾಮಕೃಷ್ಣ ಆಳ್ವ ಮಂಡಿಸಿದಾಗ, ಬಿಜೆಪಿ, ಎಸ್.ಡಿ.ಪಿ.ಐ. ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಆದರೆ ಪುರಸಭೆ ಉಳಿಕೆ ನಿಧಿಯಲ್ಲಿ ಇದನ್ನು ಕೈಗೊಳ್ಳುವ ಬದಲು ಹೆದ್ದಾರಿ ಪ್ರಾಧಿಕಾರದಿಂದಲೇ ಮಾಡಿಸಬಹುದು ಎಂದು ಸದಸ್ಯ ಪ್ರವೀಣ್, ಗಂಗಾಧರ ಹೇಳಿದರು. ಕೊಟ್ಟಾರ, ಸುರತ್ಕಲ್ ಮಾದರಿಯಲ್ಲಿ ಬಿ.ಸಿ.ರೋಡ್ ಫ್ಲೈಓವರ್ ಅಡಿಯನ್ನೂ ಸುಂದರಗೊಳಿಸಲಾಗುವುದಾಗಿ ಅಧ್ಯಕ್ಷರು ತಿಳಿಸಿದರು.

ನೀರಿನ ಬಿಲ್ಲು

ಪುರಸಭೆ ನೀರಿನ ಬಿಲ್ ಏರಿಕೆಯಾಗಿದೆಯಾ ಎಂದು ಪ್ರಶ್ನಿಸಿದ ಪ್ರವೀಣ್, ಈ ಕುರಿತು ಸ್ಪಷ್ಟನೆ ಬಯಸಿದರು. ಈ ಸಂದರ್ಭ ಉತ್ತರಿಸಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಒಟ್ಟು ೬೩೦೦ರಷ್ಟು ನೀರಿನ ಕನೆಕ್ಷನ್ ಇದ್ದು, ೮೦ ರೂ ಗೃಹಬಳಕೆಯ ಬಿಲ್ ತೆಗೆದುಕೊಳ್ಳಲಾಗುತ್ತಿದೆ. ಅದಕ್ಕೆ ೧೦ ರೂಪಾಯಿಯನ್ನು ಸೇವಾ ಶುಲ್ಕವಾಗಿ ಸ್ವೀಕರಿಸಲಾಗುತ್ತಿದೆ ಎಂದರು.

ಕರೆಂಟ್ ಪ್ರಾಬ್ಲಂ

ಪುರಸಭಾ ವ್ಯಾಪ್ತಿಯಲ್ಲಿ ವಿದ್ಯುತ್ ಆಗಾಗ್ಗೆ ಕಡಿತಗೊಳ್ಳುವ ವಿಚಾರದ ಕುರಿತು ಮಾತನಾಡಿದ ಸದಸ್ಯ ಬಿ.ದೇವದಾಸ ಶೆಟ್ಟಿ, ಮಳೆಗಾಲಕ್ಕೆ ಮುನ್ನ ಮಾಡಬೇಕಾದ ಕೆಲಸಕಾರ್ಯಗಳನ್ನು ಇನ್ನೂ ಮೆಸ್ಕಾಂ ನಡೆಸಿಲ್ಲ ಎಂದು ದೂರಿದರು. ಈ ಸಂದರ್ಭ, ಪಿಡಬ್ಲುಡಿ, ಮೆಸ್ಕಾಂ ಮತ್ತು ಸಂಚಾರಿ ಪೊಲೀಸರ ಸಭೆಯೊಂದನ್ನು ಕರೆಯಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿ, ಅಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ಶೋಭಲಕ್ಷ್ಮೀ ಮಾಹಿತಿ ನೀಡಿ, ಕುಡಿಯುವ ನೀರಿನ ಪೈಪ್ ಲೈನ್ ಹಾಕುವ ಕಾಮಗಾರಿಯಲ್ಲಿ ೯೦ ಕಿ.ಮೀ.ನಷ್ಟು ಹಾಕಬೇಕಾಗಿದ್ದು, ೮೬ ಕಿ.ಮೀ ನಷ್ಟು ಕೆಲಸವಾಗಿದೆ ಎಂದರು. ಈ ಸಂದರ್ಭ ನೀರಿನ ಸರಬರಾಜು ಸಮಸ್ಯೆಗಳ ಕುರಿತು ಸದಸ್ಯರು ಇಂಜಿನಿಯರ್ ಅವರಿಂದ ಮಾಹಿತಿ ಪಡೆದುಕೊಂಡರು.

ತರಕಾರಿ ಮಾರಾಟ, ಕೆಸರಿನ ಸಮಸ್ಯೆ:

ಫ್ಲೈಓವರ್ ಅಡಿಯಲ್ಲಿ ತರಕಾರಿ ಮಾರಾಟ ಮಾಡುವುದು ಮತ್ತು ರಸ್ತೆ ಬದಿಯಲ್ಲಿ ಕೆಸರು ನಿಲ್ಲುವುದರ ಕುರಿತು ಮಾಧ್ಯಮಗಳ ವರದಿಗಳನ್ನು ಸದಸ್ಯರಾದ ವಾಸು ಪೂಜಾರಿ ಮತ್ತು ಜಗದೀಶ ಕುಂದರ್ ಗಮನ ಸೆಳೆದರು.  https://bantwalnews.com/2018/06/18/road-problem/

ಪುರಸಭೆ ವ್ಯಾಪ್ತಿಯಲ್ಲಿರುವ ಕೆಸರು ನಿಲ್ಲುವ ಜಾಗಗಳಲ್ಲಿ ಕೆಸರು ತೆಗೆಯುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ತರಕಾರಿ ಮಾರಾಟ ಮಾಡುವ ವಿಚಾರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮೀಸಲಾತಿ ಯಾರು ಮಾಡಿದ್ದು?

ಪುರಸಭೆಯ ಮೀಸಲಾತಿ ಪಟ್ಟಿಯನ್ನು ಮಾಡಿದವರು ಯಾರು ಎಂದು ಪ್ರಶ್ನಿಸಿದ ಎಸ್.ಡಿ.ಪಿ.ಐ. ಸದಸ್ಯ ಮುನೀಶ್ ಆಲಿ, ಇದರ ರಚನೆಯೇ ಸರಿಯಾಗಿಲ್ಲ ಎಂದರು. ಇದಕ್ಕೆ ಸರ್ವ ಸದಸ್ಯರೂ ದನಿ ಗೂಡಿಸಿದರು. ವಾರ್ಡ್ ವಿಂಗಡಣೆ ಸಹಿತ ಹಲವು ವಿಚಾರಗಳಲ್ಲಿ ದೋಷವಿದೆ, ಇದರ ಪುನರ್ ಪರಿಶೀಲನೆ ಅಗತ್ಯ ಎಂದು ದೇವದಾಸ ಶೆಟ್ಟಿ ಹೇಳಿದರು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಹಳೆ ಸಮಸ್ಯೆಗಳ ಮುಂದುವರಿದ ಚರ್ಚೆ – ಬಂಟ್ವಾಳ ಪುರಸಭೆ ಮೀಟಿಂಗ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*