ತ್ಯಾಜ್ಯ ಕೊಂಡೊಯ್ಯುವುದು, ಅದಕ್ಕೆ ವಿಧಿಸುವ ಶುಲ್ಕ, ಕಸ ವಿಲೇವಾರಿ ವಿಧಾನ ಹಾಗೂ ಅಂತಿಮವಾಗಿ ಅದರ ಸಂಸ್ಕರಣೆಯ ಜಾಗದ ಕುರಿತು ಹೊಸದಾಗಿ ಎದ್ದಿರುವ ವಿವಾದ…..
ಬಂಟ್ವಾಳ ಪುರಸಭೆ ಸಾಮಾನ್ಯ ಸಭೆ ಮಂಗಳವಾರ ನಡೆದ ಸಂದರ್ಭ ಈ ವಿಚಾರಗಳು ಚರ್ಚೆಗೆ ಬಂದವು.
ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಹಾಗೂ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಪುರಸಭೆ ಮೀಟಿಂಗ್ ನ ಹೈಲೈಟ್ಸ್ ಇವು
ಪುರಸಭೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ತ್ಯಾಜ್ಯ ಶುದ್ಧೀಕರಣ ಘಟಕವನ್ನು ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನಿರ್ಮಿಸಲು ಬದ್ಧವಾಗಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರೆ, ಸಚಿವ ಯು.ಟಿ.ಖಾದರ್ ಅವರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ರಮಾನಾಥ ರೈ ಅದನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೇ ಈ ವಿಚಾರದಲ್ಲಿ ಗೊಂದಲ ಇದೆ ಎಂದು ಎಸ್ಡಿಪಿಐ ಸದಸ್ಯ ಮಹಮ್ಮದ್ ಇಕ್ಬಾಲ್ ಟೀಕಿಸಿದರು. ಈ ಸಂದರ್ಭ ದನಿಗೂಡಿಸಿದ ಎಸ್.ಡಿ.ಪಿ.ಐ. ಸದಸ್ಯ ಮೊನೀಶ್ ಆಲಿ, ಪುರಸಭೆಯ ಕಸ ವಿಲೇವಾರಿ ದೃಷ್ಟಿಯಿಂದ ಮಹತ್ವದ್ದಾಗಿರುವ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣ ಕುರಿತು ಸ್ಪಷ್ಟವಾದ ನಿರ್ಧಾರವನ್ನು ಆಡಳಿತ ಕೈಗೊಳ್ಳಬೇಕು ಎಂದು ಹೇಳಿದರು. ಸಜೀಪನಡು ಗ್ರಾಪಂ ಅಧ್ಯಕ್ಷರು ಘಟಕದ ಕುರಿತು ಕಳೆದ ಎಂಟು ವರ್ಷಗಳಿಂದ ಜನಪರವಾದ ಕಾಳಜಿಯಿಂದ ಹೋರಾಟ ಮಾಡುತ್ತಿದ್ದು, ಎಸ್ಡಿಪಿಐ ಇದರ ನೇತೃತ್ವ ವಹಿಸಿದೆ. ಹೀಗಿದ್ದೂ ಅವರ ಮೇಲೆ ವೃಥಾ ಆರೋಪ ಮಾಡಲಾಗುತ್ತಿದೆ ಎಂದು ಇಕ್ಬಾಲ್ ಹೇಳಿದರು.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇ ಮಾಡಲು ಸ್ಥಳಾವಕಾಶ ಇಲ್ಲದೆ ಪ್ರಸ್ತುತ ಮಂಗಳೂರು ಮಹಾನಗರಪಾಲಿಕೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಾಗಿಸುತ್ತಿದ್ದು, ಮತ್ತು ಕಂಚಿನಡ್ಕದಲ್ಲಿ ಉದ್ದೇಶಿತ ತ್ಯಾಜ್ಯ ಸಂಸ್ಕರಣಾ ಘಟಕ ಪ್ರಾರಂಭಿಸಲು ಇರುವ ಅಡೆತಡೆ ನಿವಾರಿಸಲು ಸಮಯಾವಕಾಶ ಅಗತ್ಯ. ಪ್ರಸ್ತುತ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಹಾಯ ಮಾಡುವಂತ ಪೈರೋಲಿಸಿಸ್ ಯಂತ್ರವನ್ನು ಒದಗಿಸುವಂತೆ ಪರಿಸರ ಇಲಾಖೆಯನ್ನು ಕೋರಲು ಸಭೆ ತೀರ್ಮಾನಿಸಿತು.
ಕಸ ಸಂಗ್ರಹಕ್ಕೆ ನಿಗದಿಯಾದ ದರ 30 ರೂ. ಆದರೆ 50 ರೂಪಾಯಿಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಅದಕ್ಕೆ ಕೊಡುವ ರಶೀದಿಯಲ್ಲಿ ಪುರಸಭೆ ಬಂಟ್ವಾಳ ಎಂದಿದೆ. ಇದು ಪುರಸಭೆಯಿಂದ ಸ್ವೀಕಾರವಾಗುವುದೋ ಅಥವಾ ಗುತ್ತಿಗೆದಾರರಿಗೋ, ಅಧಿಕ ಹಣ ವಸೂಲಾತಿ ಎಷ್ಟು ಸರಿ ಎಂದು ದೇವದಾಸ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಮನೆ ಮನೆ ಸಂಗ್ರಹದ ಜವಾಬ್ದಾರಿ ಗುತ್ತಿಗೆದಾರರದ್ದು, ಪುರಸಭೆ ಸೂಚನೆಯಂತೆ ಮಾಡುತ್ತಿದ್ದಾರೆ ಎಂದು ಹೇಳಿದಾಗ ಬಲವಾಗಿ ಆಕ್ಷೇಪಿಸಿದ ಸದಸ್ಯ ಗೋವಿಂದ ಪ್ರಭು, ಸರಕಾರದ ನಿಯಮಾವಳಿಯಂತೆ ಗುತ್ತಿಗೆದಾರರಿಗೆ ವಾಹನ, ಡೀಸೆಲ್ ಸಹಿತ ಹಲವು ಸೌಲಭ್ಯಗಳನ್ನು ಪುರಸಭೆ ಕೊಡುತ್ತಿದೆ. ಹೀಗಿದ್ದೂ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು. ಚರ್ಚೆಯಲ್ಲಿ ಪ್ರವೀಣ್, ಗಂಗಾಧರ್, ಸುಗುಣಾ ಕಿಣಿ ಮೊದಲಾದವರು ಪಾಲ್ಗೊಂಡರು.
ಸಭೆಯಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಕುರಿತು ಏರಿದ ಧ್ವನಿಯಲ್ಲಿ ಚರ್ಚೆಗಳು ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷ ವಾಸು ಪೂಜಾರಿ, ತಾನು ಖುದ್ದು ಮುತುವರ್ಜಿ ವಹಿಸಿ ಬೆಳಗ್ಗೆ ನಗರ ಸಂಚರಿಸಿ, ಕಸ ವಿಲೇವಾರಿ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂಬ ಭರವಸೆ ನೀಡಿದರು.
ಬಂಟ್ವಾಳ ಪುರಸಭೆಗೆ ಜೂನ್ 1ರಿಂದ 30ರವರೆಗಿನ ಅವಧಿಯಲ್ಲಿ ಪಾವತಿಗೆ ಬಾಕಿ ಇರುವ ನೀರಿನ ಕರ ೨೦ ಲಕ್ಷ ರೂಪಾಯಿಯನ್ನು ಪರಿಸರ ಮಾಲಿನ್ಯ ಮಂಡಳಿ ಮಂಗಳೂರು ಇವರಿಗೆ ಪಾವತಿಸುವ ಕುರಿತು ಮಂಗಳೂರಿನ ಪರಿಸರ ಅಧಿಕಾರಿ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಯಿತು.
ಸಭೆ ಮುಕ್ತಾಯವಾಗುವ ಹೊತ್ತಿಗೆ ನಿರ್ಣಯಗಳನ್ನು ಕೈಬರಹದಲ್ಲಿ ದಾಖಲಿಸಿದನ್ನು ನಮಗೆ ತೋರಿಸಿ ಎಂದು ಸದಸ್ಯ ದೇವದಾಸ ಶೆಟ್ಟಿ ಪಟ್ಟು ಹಿಡಿದು ಈ ಕುರಿತು ಜಿಲ್ಲಾಧಿಕಾರಿ ಆದೇಶದ ಪ್ರತಿಯನ್ನು ಪ್ರದರ್ಶಿಸಿದರು. ಈ ಸಂದರ್ಭ ಮುಖ್ಯಾಧಿಕಾರಿ ತತ್ಕ್ಷಣ ದಾಖಲಾತಿ ಮಾಡಲು ಅಸಾಧ್ಯ ಎಂದು ಹೇಳಿದರು. ಐದು ದಿನದೊಳಗೆ ನಿರ್ಣಯ ದಾಖಲಿಸಿದ ಮಾಹಿತಿಯನ್ನು ರವಾನಿಸುವ ಕುರಿತ ಪತ್ರವನ್ನು ಅಧ್ಯಕ್ಷ ರಾಮಕೃಷ್ಣ ಆಳ್ವ ಓದಿ ಹೇಳಿದರು. ಈ ಸಂದರ್ಭ ಮಾತನಾಡಿದ ಶೆಟ್ಟಿ, ತಾನು ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದಷ್ಟೇ ಕೇಳುತ್ತಿದ್ದೇನೆ ಎಂದು ಹೇಳಿದರು.
ಚರ್ಚೆಯಲ್ಲಿ ಬಿ.ಮೋಹನ್, ಚಂಚಲಾಕ್ಷಿ, ಸುಗುಣ ಕಿಣಿ, ಮೊಹಮ್ಮದ್ ಶರೀಫ್, ಇಕ್ಬಾಲ್ ಗೂಡಿನಬಳಿ, ಮೊನೀಶ್ ಆಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಉಪಸ್ಥಿತರಿದ್ದರು.
Be the first to comment on "ತ್ಯಾಜ್ಯ ವಿಲೇವಾರಿ – ಪುರಸಭೆಯಲ್ಲಿ ಕಾವೇರಿದ ಚರ್ಚೆ"