ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಫರ್ಲಾ ವೆಲಂಕಣಿ ಚರ್ಚ್ ಸಭಾಂಗಣದಲ್ಲಿ ಗುರುವಾರ ನಡೆಯಿತು.

ದ.ಕ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೈನುಗಾರರಿಂದ ಪಡೆದ ಹಾಲಿನಿಂದ ಬರುವ ಲಾಭಾಂಶವನ್ನು ಮತ್ತೆ ಹೈನುಗಾರರಿಗೆ ನೀಡುವ ಪರಿಕಲ್ಪನೆ ಕೇವಲ ಒಕ್ಕೂಟದಲ್ಲಿ ಮಾತ್ರ ಇದೆ ವಿನಃ ಖಾಸಗಿ ವ್ಯವಸ್ಥೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ ಎಂದು ಹೇಳಿದ ಅವರು ಕಳೆದ 25 ವರ್ಷಗಳಿಂದ ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘ ಹಾಲು ಉತ್ಪಾದನೆಯಲ್ಲಿ ಮಹೋನ್ನತ ಸಾಧನೆ ಮಾಡಿದೆ. ದಕ್ಷ, ಪ್ರಾಮಾಣಿಕ ಆಡಳಿತ ಮಂಡಳಿಯ ಕಾರಣದಿಂದ ಇದು ಸಾಧ್ಯವಾಗಿದೆ ಎಂದರು.

ಒಕ್ಕೂಟದಲ್ಲಿ ಹಾಲು ಸಂಗ್ರಹ ಈಗ ಜಾಸ್ತಿ ಆಗುತ್ತಿದೆ. ಹೈನುಗಾರರಿಗೆ ಅನುಕೂಲ ಆಗುವ ಹಲವು ಯೋಜನೆಗಳನ್ನು ಪರಿಚಯಿಸಲಾಗಿದೆ. ಕರು ಹುಟ್ಟುವಲ್ಲಿಂದ ಸಾಯುವವರೆಗೆ ಅನುಕೂಲ ಆಗಬಹುದಾದ ಎಲ್ಲ ಯೋಜನೆ ಇದೆ. ಇದರ ಸದುಪಯೋಗ ಆಗಬೇಕಿದೆ. ವಿವಿಧ ಪ್ರಕಾರದಲ್ಲಿ ಸಹಾಯಧನ ಲಭ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಹಾಲು ಒಕ್ಕೂಟದ ನಿರ್ದೇಶಕ ಕೆ.ಪಿ.ಸುಚರಿತ ಶೆಟ್ಟಿ ಅವರು ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘ ಸಾರ್ಥಕ ಕಾರ್ಯದ ಮೂಲಕ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಸಂಘವಾಗಿ ಮೂಡಿಬಂದಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಗೌಡ ಅವರು ಮಾತನಾಡಿ ಈ ಹಿಂದಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಸಕ್ತ ಅವಧಿಯ ಎಲ್ಲಾ ನಿರ್ದೇಶಕ ಮಂಡಳಿ, ನೌಕರರ ಪ್ರಾಮಾಣಿಕ ಕಾರ್ಯದ ಕಾರಣಕ್ಕಾಗಿ ಸಂಘವು ರಜತ ಸಂಭ್ರಮವನ್ನು ಕಾಣುವಂತಾಗಿದೆ ಎಂದರು.
ಒಕ್ಕೂಟದ ನಿರ್ದೇಶಕರಾದ ಸವಿತಾ ಎನ್.ಶೆಟ್ಟಿ ಹಾಗೂ ನಂದರಾಮ ರೈ ಬೆಳ್ಳೂರು ಅವರು ಶುಭಹಾರೈಸಿದರು.ಫರ್ಲಾ ಚರ್ಚ್ ನ ಧರ್ಮಗುರುಗಳಾದ ವಂ/ಫಾ/ಮಾರ್ಕ್ ಅರುಣ್ ಡಿಸೋಜ ಅವರು ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಒಕ್ಕೂಟದ ಉಪವ್ಯವಸ್ಥಾಪಕಿ ಜಾನೆಟ್ ರೊಸಾರಿಯೊ, ವಿಸ್ತರಣಾಧಿಕಾರಿ ಪ್ರಫುಲ್ಲಾ, ಪಶು ವೈದ್ಯಾಧಿಕಾರಿ ಡಾ/ಚರಣ್, ನಾವೂರು ಸಂಘದ ಉಪಾಧ್ಯಕ್ಷ ಸುರೇಶ್ ಯು.ಕೆ. ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಶ್ರೇಯಸ್ಸಿಗೆ ಶ್ರಮಿಸಿದವರನ್ನು ಹಾಗೂ ಅತೀ ಹೆಚ್ಚು ಹಾಲು ನೀಡುವ ಹೈನುಗಾರರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸ್ಟೀವನ್ ಕ್ಯಾಸ್ಟಲಿನೊ ಸ್ವಾಗತಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಉಷಾ ವರದಿ ವಾಚಿಸಿದರು. ಉಮಾಶಂಕರ್ ಕಾರ್ಯಕ್ರಮ ನಿರ್ವಹಿಸಿದರು.



Be the first to comment on "ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ರಜತ ಮಹೋತ್ಸವ"