

ಮಂಗಳೂರು, ಜೂ.9 : ಹಲಸು ಮೌಲ್ಯವರ್ಧನೆ, ಸೇವೆಯ ಸಾಕ್ಷಾತ್ಕಾರ ಈ ಹಲಸು ಮೇಳದಲ್ಲಿ ಕಾಣಬಹುದಾಗಿದೆ. ಹಲಸಿನ ಬಿಸಿ ಬಿಸಿಯಾದ ಅತ್ಯುತ್ತಮ ಆಹಾರ ತಯಾರಿಸಿ, ಗ್ರಾಹಕರಿಗೆ ನೀಡುವುದರ ಜತೆಗೆ ಮಾವು, ತರಕಾರಿ ಇತ್ಯಾದಿಗಳನ್ನು ಒದಗಿಸುವುದು ಕೃಷಿಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಹೇಳಿದರು.
ಅವರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಠಾರದಲ್ಲಿ ಹಲಸು ಮೇಳ – ಆಹಾರೋತ್ಸವ, ಹಲಸು, ಮಾವು, ತರಕಾರಿ ಮೇಳ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ.ಸುರೇಶ್ ರೈ ಅವರು ವಿವಿಧಿ ತಿಂಡಿಗಳ ಕೌಂಟರ್ ಉದ್ಘಾಟಿಸಿ, ಮಾತನಾಡಿ, ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ, ಕೃಷಿಕರು ಬೆಳೆಸುವ, ಬಳಸುವ ಆಹಾರ ವಸ್ತುಗಳನ್ನು ನಗರದ ಜನತೆಗೆ ತಲುಪಿಸುವ ಮತ್ತು ಸಂಘಟನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಪ್ರತೀ ವರ್ಷ ಏರ್ಪಡಿಸುವ ಹಲಸು ಮೇಳ – ಆಹಾರೋತ್ಸವ ಮಾದರಿಯಾಗಿದೆ. ಇಲ್ಲಿ ಮಾತೆಯರು, ಮಹನೀಯರು ಸೇವಾ ರೂಪದಲ್ಲಿ ತಯಾರಿಸಿದ ಅತ್ಯುತ್ತಮ ಆಹಾರವನ್ನು ಆರೋಗ್ಯಪೂರ್ಣ ಜೀವನಕ್ಕಾಗಿ ಸೇವಿಸಬಹುದಾಗಿದೆ. ಇಂತಹ ಸೇವಾ ಮನೋಭಾವ ಅಪರೂಪದಲ್ಲಿ ಅಪರೂಪ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶಕೀಲಾ ಕಾವ ಅವರು ಮಾತನಾಡಿ, ಸಂಸ್ಥೆಯ ಚಟುವಟಿಕೆಗಳೆಲ್ಲವೂ ವಿದ್ಯಾರ್ಥಿಗಳ ಮತ್ತು ಸಮಾಜಕ್ಕಾಗಿ ಸಮರ್ಪಿತವಾಗಿದೆ. ಇಲ್ಲಿ ಅಂಗಳಕ್ಕೆ ಇಂಟರ್ ಲಾಕ್ ಹಾಕಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ರಮೇಶ್ ಭಟ್ ಸರವು, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಮಾಜಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ, ಪ್ರಭಾಕರ ರಾವ್, ಕರ್ಣಾಟಕ ಬ್ಯಾಂಕ್ ಸಿಇಒ ಬಿ.ಎಸ್.ರಾಜ, ಸಮಿತಿ ಸಂಚಾಲಕರಾದ ಸುಬ್ರಹ್ಮಣ್ಯ ಭಟ್ ಕಾಶಿಮಠ, ಬಾಲಸುಬ್ರಹ್ಮಣ್ಯ ಕಬೆಕ್ಕೋಡು, ಮಾತೃಪ್ರಧಾನರಾದ ದೇವಿಕಾ ಶಾಸ್ತ್ರಿ, ಹವ್ಯಕಸಭಾ ಅಧ್ಯಕ್ಷೆ ಗೀತಾದೇವಿ ಸಿ., ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್, ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಪ್ರಾಂಶುಪಾಲ ಸಂದೀಪ್ ಆಚಾರ್ಯ, ಅನಂತಸುಬ್ರಹ್ಮಣ್ಯ ಶರ್ಮ, ಶ್ಯಾಮ ಭಟ್, ಡಾ.ಶಿವಶಂಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಹವ್ಯಕ ಮಂಡಲ ಉಪಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಸ್ವಾಗತಿಸಿದರು. ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ವಂದಿಸಿದರು. ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಹಲಸು, ಮಾವು ತರಕಾರಿ ಮೇಳ, ಸಾಂಸ್ಕೃತಿಕ ವೈಭವದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಏನೇನಿತ್ತು ?
ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ ಬೀಜ ಪಾಯಸ, ಹಲಸಿನ ಕಾಯಿ ದೋಸೆ/ಶುಂಠಿ ಚಟ್ನಿ, ಸೊಳೆ ರೊಟ್ಟಿ, ಗುಜ್ಜೆ ಮಂಚೂರಿ, ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಕಾಯಿ ಸೋಂಟೆ, ಹಲಸಿನ ಕಾಯಿ ಬೋಂಡ, ಹಲಸಿನ ಕಾಯಿ ಹಪ್ಪಳ, ಬಾಳೆಹಣ್ಣಿನ ಹಲ್ವ, ಹಲಸಿನ ಹಣ್ಣಿನ ಹಲ್ವ, ಹಲಸಿನ ಬೀಜದ ಅದ್ದಿಹಿಟ್ಟು, ಮಾವಿನ ಹಣ್ಣಿನ ಮಾಂಬಳ, ಹಲಸಿನ ಹಣ್ಣಿನ ಸೊಳೆ, ಹಲಸಿನ ಕಾಯಿ ಸೊಳೆ, ಗುಜ್ಜೆ ಪಲಾವ್, ಹಲಸಿನ ಹಣ್ಣು ಕೊಟ್ಟಿಗೆ, ಹಲಸಿನ ಹಣ್ಣು ಗೆಣಸಲೆ, ಜಿಲೇಬಿ, ಹಲಸಿನ ಕಾಯಿ ಪೋಡಿ, ಹಲಸಿನಕಾಯಿ ಅಂಬೊಡೆ, ಹಲಸಿನ ಹಣ್ಣಿನ ಬನ್ಸ್, ಹಲಸಿನ ಹಣ್ಣಿನ ಗುಳಿಅಪ್ಪ, ಮುರುಕು, ಅತಿರಸ, ಸಕ್ಕರೆ ಬೆರಟಿ, ಮಾವಿನ ಹಣ್ಣಿನ ರಸಾಯನ, ಕಾಫಿ, ಟೀ, ಕಷಾಯ, ಮಾವಿನಹಣ್ಣಿನ ಜ್ಯೂಸ್, ಮಸಾಲೆ ಮಜ್ಜಿಗೆ, ಹೋಳಿಗೆ, ಹಲಸು ಖಾನಾವಳಿ, ಮಾವಿನಕಾಯಿ ತೊಕ್ಕು, ಬಾಳೆಕಾಯಿ ಚಿಪ್ಸ್, ವಿವಿಧ ಜಾತಿಯ ಮಾವು, ತರಕಾರಿ ಇತ್ಯಾದಿಗಳಿದ್ದವು.


Be the first to comment on "ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ಜನಮೆಚ್ಚುಗೆ ಗಳಿಸಿದ ಹಲಸು ಮೇಳ – ಆಹಾರೋತ್ಸವ"