ವಾಟ್ಸಾಪ್ ಗಳಲ್ಲಷ್ಟೇ ತೊಡಗಿಸಿಕೊಳ್ಳದೆ, ಜನರ ಮಧ್ಯೆ ಸಂಚರಿಸಿ, ಕೇಂದ್ರ ಸರಕಾರ ಅನುಸರಿಸುತ್ತಿರುವ ಪೆಟ್ರೋಲ್, ಡೀಸೆಲ್ ದರ ಏರಿಕೆ ಸಹಿತ ಜನವಿರೋಧಿ ನೀತಿಗಳ ವಿರುದ್ಧ ಮನವರಿಕೆ ಮಾಡಬೇಕು ಎಂದು ಕಾಂಗ್ರೆಸ್ ನ ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಕಿವಿಮಾತು ಹೇಳಿದ್ದಾರೆ.

ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವನ್ನು ವಿರೋಧಿಸಿ ಬಿ.ಸಿ.ರೋಡಿನ ಫ್ಲೈಓವರ್ ಬಳಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಮಹಿಳಾ ಮತ್ತು ಯುವ ಘಟಕ ಮತ್ತು ಎನ್ಎಸ್.ಯು.ಐ. ವತಿಯಿಂದ ಸೋಮವಾರ ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬೆಲೆ ಏರಿಕೆ ಮಾಡುವ ದುರುದ್ದೇಶದಿಂದ ವಾಹನ ಬಳಕೆ, ಚಿನ್ನ ಬಳಕೆಯ ನಿಯಂತ್ರಣದ ಮಾತನಾಡಿದ್ದಾರೆ, ಅದಕ್ಕೆ ದೇಶಪ್ರೇಮದ ಲೇಪನ ಕೊಟ್ಟಿದ್ದಾರೆ ಎಂದು ಟೀಕಿಸಿದ ಅವರು, ಲಕ್ಷಕ್ಕಿಂತ ಮೇಲೆ ಬಂಗಾರದ ಬೆಲೆ ಏರಿದೆ. ಇಂಧನ ಬೆಲೆ ನಿಯಂತ್ರಣ ಆಗುತ್ತಿಲ್ಲ. ಕಾಂಗ್ರೆಸ್ ಸರಕಾರವಿದ್ದಾಗ ಬೆಲೆ ಏರಿಕೆ ನಿಯಂತ್ರಣದಲ್ಲಿತ್ತು ಎಂಬುದು ನೆನಪಿನಲ್ಲಿರಲಿ ಎಂದರು. ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ.ನಾವು ದಡ್ಡರಾಗಬಾರದು. ನಿರುದ್ಯೋಗ ಸಮಸ್ಯೆ ಕುರಿತು ಗಮನಹರಿಸದ ಸರಕಾರದ ವಿರುದ್ಧ ಯುವಜನತೆ ರೋಷದಿಂದಿದ್ದಾರೆ ಎಂಬುದಕ್ಕೆ ಕೋಕ್ರೋಚ್ ಜನತಾ ಪಾರ್ಟಿ ಉದಾಹರಣೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಏನಾಯಿತು ಎಂದು ಪ್ರಶ್ನಿಸಿದ ಅವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಪ್ರಧಾನಿ ಕ್ಷಮೆ ಯಾಚಿಸಬೇಕು ಎಂದರು.

ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ ಬಿಜೆಪಿಯ ಅಚ್ಛೇ ದಿನ ಎಂದರೆ ವಿಮಾನದಲ್ಲಿ ಇದ್ದವನು ಕಾರಿನಲ್ಲಿ ಹೋಗುವುದು, ಕಾರಿನಲ್ಲಿ ಹೋಗುವವ ಬೈಕಿನಲ್ಲಿ ಹೋಗುವುದು, ಬೈಕಿನಲ್ಲಿ ಹೋಗುವವರು ಸೈಕಲ್ ನಲ್ಲಿ ಹೋಗುವಂತಾಗಿದೆ. ಒಡೆದು ಆಳುವ ನೀತಿಯಿಂದ ಬಿಜೆಪಿ ಗೆಲ್ಲುತ್ತದೆಯೇ ಹೊರತು, ಜನಬೆಂಬಲದಿಂದಲ್ಲ ಎಂದರು.
ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಪ್ರತಿದಿನ ಎಂಬಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗುತ್ತಿದ್ದು, ಇದು ಕೇಂದ್ರದ ವೈಫಲ್ಯವಾಗಿದೆ ನೀಟ್ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ನೈತಿಕ ಹೊಣೆ ಹೊತ್ತು ಕೇಂದ್ರದ ಸಚಿವರು ರಾಜೀನಾಮೆ ನೀಡಬೇಕು ಎಂದರು
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಪಕ್ಷ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಪದ್ಮಶೇಖರ ಜೈನ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ರೈ, ಬಿ.ಎಂ.ಅಬ್ಬಾಸ್ ಆಲಿ, ಇಬ್ರಾಹಿಂ ನವಾಝ್, ಸಂಜೀವ ಪೂಜಾರಿ ಬಿರ್ವ, ಕೊಳ್ನಾಡು ಸುಭಾಶ್ಚಂದ್ರ ಶೆಟ್ಟಿ, ಮಹಮ್ಮದ್ ನಂದಾವರ, ಉಮೇಶ್ ಬೋಳಂತೂರು, ಎ.ಬಿ.ಅಬ್ದುಲ್ಲ, ಬಿ.ವಾಸು ಪೂಜಾರಿ ಲೊರೆಟ್ಟೊ, ಮಹಮ್ಮದ್ ಶರೀಫ್, ಸಿದ್ದೀಕ್ ಗುಡ್ಡೆಯಂಗಡಿ, ಜೆಸಿಂತಾ ಡಿಸೋಜ, ಲೋಲಾಕ್ಷ ಶೆಟ್ಟಿ, ಯುಸುಫ್ ಕರಂದಾಡಿ, ವೆಂಕಪ್ಪ ಪೂಜಾರಿ, ಕುಶಲ ಪೆರಾಜೆ, ಶೈಲಜಾ ರಾಜೇಶ್, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಪ್ರವೀಣ್ ರೋಡ್ರಿಗಸ್ ಸಹಿತ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದ್ದರು.


Be the first to comment on "ಜನರ ಮಧ್ಯೆ ತೆರಳಿ, ಕೇಂದ್ರ ಜನವಿರೋಧಿ ನೀತಿ ಮನವರಿಕೆ ಮಾಡಿ: ಕಾಂಗ್ರೆಸ್ ಕಾರ್ಯಕರ್ತರಿಗೆ ರೈ ಸಲಹೆ"