ತಮಗೆ ದೊರಕಬೇಕಿದ್ದ ಹಕ್ಕುಪತ್ರವನ್ನು ಒದಗಿಸಿ ಎಂದು ಒತ್ತಾಯಿಸಿ ಪುಣಚದ ಮೂರು ಕುಟುಂಬಗಳು ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಸೋಮವಾರ ಆರಂಭಿಸಿದ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿತು. ಇದು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕಾರಣ ಆ ಭಾಗದ ಮಾಜಿ ಶಾಸಕ ಬಿಜೆಪಿಯ ಸಂಜೀವ ಮಠಂದೂರು ಮತ್ತು ಪ್ರಮುಖರು ಮಂಗಳವಾರ ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದರು. ಬುಧವಾರ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಹಿತ ಪ್ರಮುಖರು ಆಗಮಿಸಿ ಸಾಥ್ ನೀಡಿದರು. ಹಕ್ಕುಪತ್ರ ನೀಡುವವರೆಗೂ ಧರಣಿ ನಡೆಯಲಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಆಡಳಿತ ಸೌಧದ ಮುಂದೆ ಬಂದು ಬಡವರು, ಪ.ಪಂಗಡದ ಬಂಧುಗಳು ನಿಂತು ತಮ್ಮ ಹಕ್ಕಿಗೆ ಕೈಚಾಚುವ ಸ್ಥಿತಿ ಎದುರಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಬೇಸರ ವ್ಯಕ್ತಪಡಿಸಿದರು.
ಧರಣಿಯ ನೇತೃತ್ವವನ್ನು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ವಹಿಸಿದ್ದರು. ಬಿಜೆಪಿ ವೇದಿಕೆಗೆ ಬೆಂಬಲ ಸೂಚಿಸಿದ್ದಾಗಿ ತಿಳಿಸಿ, ಪ್ರತಿಭಟನೆಯನ್ನು ಬೆಂಬಲಿಸಿದೆ. ಈ ಸಂದರ್ಭ ಪುತ್ತೂರು ಮಾಜಿ ಶಾಸಕ ಕೆ.ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖ ಮುಖಂಡರಾದ ವಿಕಾಸ್ ಪುತ್ತೂರು, ಆರ್. ಚೆನ್ನಪ್ಪ ಕೋಟ್ಯಾನ್, ಸುಲೋಚನಾ ಜಿ.ಕೆ. ಭಟ್, ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಸನ್ನ ಕುಮಾರ್ ಮಾರ್ತ, ಮುರಳಿಕೃಷ್ಣ ಹಸಂತಡ್ಕ, ಬೂಡಿಯಾರ್ ರಾಧಾಕೃಷ್ಣ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಪುರುಷೋತ್ತಮ ಗೌಡ ಮುಂಗ್ಲಿಮನೆ, ನಾಗೇಶ್ ಟಿ.ಎಸ್., ಪುನೀತ್ ಮಾಡತ್ತಾರ್, ಹರೀಶ್ ಬಿಜತ್ರೆ, ಸ್ವರ್ಣಲತಾ ಹೆಗ್ಡೆ, ಗೌರಿ ಬನ್ನೂರು, ಯಶೋಧಾ. ಪಿ ಬಿ ಶಿವಕುಮಾರ್, ಜಗದೀಶ್ ಆಳ್ವ ಕುವೆತ್ತ ಬೈಲು, ಪ್ರೇಮಾನಂದ ಶೆಟ್ಟಿ, ರಾಮದಾಸ್ ಬಂಟ್ವಾಳ, ಮಾಧವ ಮಾವೆ, ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ದಿನೇಶ್ ಅಮ್ಟೂರು, ಎ. ಗೋವಿಂದ ಪ್ರಭು, ದೇವಪ್ಪ ಪೂಜಾರಿ, ಮಂಜುಳಾ ರಾವ್, ಸುಮಿತ್ರಾ, ಹರೀಶ್ ಪಡು, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ದಯಾನಂದ ತೊಕ್ಕೊಟ್ಟು, ಮಹೇಶ್, ಪ್ರಭಾಕರ ಪ್ರಭು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.