
ಬಂಟ್ವಾಳ: ತಮಗೆ ಅರ್ಹವಾಗಿ ದೊರಕಬೇಕಿದ್ದ ಹಕ್ಕುಪತ್ರವನ್ನು ಒದಗಿಸಿ ಎಂದು ಒತ್ತಾಯಿಸಿ ಪುಣಚದ ಮೂರು ಕುಟುಂಬಗಳು ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಸೋಮವಾರದಿಂದೀಚೆಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದ, ಮಂಗಳವಾರ ಬೆಳಗ್ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ಮತ್ತು ಬಂಟ್ವಾಳ ಕ್ಷೇತ್ರಗಳ ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸಾಥ್ ನೀಡಿದರು.
ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಪುಣಚ ಗ್ರಾಮದ 3 ನೇ ವಾರ್ಡ್ ನ ದೇವಿನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಕಳೆದ ಹಲವು ವರ್ಷದಿಂದ ವಾಸದ ಮನೆಗೆ ಹಕ್ಕುಪತ್ರ ನೀಡದೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿ ಮೂರು ಮನೆಗಳ ಸದಸ್ಯರು ಹಾಗೂ ಸಂಬಂಧಿಕರು ಮೌನ ಪ್ರತಿಭಟನೆ ಆರಂಭಿಸಿದ್ದರು.

ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸಿದ್ದ ಬೇಬು ಕುಮಾರಿ, ವಿಜಯಲಕ್ಷ್ಮಿ, ಪ್ರೇಮ ಅವರು ಹಾಗೂ ಮನೆ ಮಂದಿ ಸೇರಿ ಸುಮಾರು 15 ಮಂದಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು ನೇತೃತ್ವವನ್ನು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ವಹಿಸಿದ್ದು, ಅವರು ಮಾತನಾಡಿ, ಪುಣಚ ಗ್ರಾಮದ ದೇವಿನಗರ ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಪರಿಶಿಷ್ಟ ಪಂಗಡದವರಿಗೆ ಸೇರಿದ 13 ವಾಸದ ಮನೆಗಳಿದ್ದು, ಈ ಪೈಕಿ 5 ಮನೆಯವರಿಗೆ ಮನೆ ಕಟ್ಟಿ 8 ವರ್ಷವಾದರೂ ಈವರೆಗೆ ಹಕ್ಕು ಪತ್ರ ದೊರೆತಿರುವುದಿಲ್ಲ ಎಂದರು ಹಕ್ಕುಪತ್ರವನ್ನು ಪುತ್ತೂರು ಶಾಸಕರು ವಿತರಿಸಬೇಕು ಎಂದು ತಹಸೀಲ್ದಾರ್ ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಮಂಗಳವಾರ ಬಿಜೆಪಿ ಮುಖಂಡರ ಸಾಥ್:

ಮಂಗಳವಾರ ಬೆಳಗ್ಗೆ ಬಿಜೆಪಿಯ ಪುತ್ತೂರು ಕ್ಷೇತ್ರ ಹಾಗೂ ಬಂಟ್ವಾಳ ಕ್ಷೇತ್ರದ ಮುಖಂಡರು ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಆಗಮಿಸಿ ಪ್ರತಿಭಟನೆಗೆ ಸಾಥ್ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಪುತ್ತೂರು ಶಾಸಕರೇ ಬಂದು ಹಕ್ಕುಪತ್ರ ಕೊಡಬೇಕು ಎಂದೇನೂ ಇಲ್ಲ. ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರೂ ಆಗುತ್ತದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಹಸೀಲ್ದಾರ್ ಮೂಲಕವೇ ಹಕ್ಕುಪತ್ರ ಕೊಡಿಸುತ್ತಿದ್ದಾರೆ, ಪರಿಶಿಷ್ಟ ಜಾತಿ ಕುಟುಂಬದ ಸದಸ್ಯರು ಧರಣಿ ಕುಳಿತಿರುವ ವೇಳೆ ಸಭಾ ಕಾರ್ಯಕ್ರಮ ಮಾಡಿ ಹಕ್ಕುಪತ್ರ ನೀಡಲಾಗುವುದು ಎಂಬ ಧೋರಣೆ ಸರಿಯಲ್ಲ ಎಂದರು.
ಮುಖಂಡರಾದ ವಿಕಾಸ್ ಪುತ್ತೂರು ಮಾತನಾಡಿ ಕಾಂಗ್ರೆಸ್ ಶಾಸಕರ ಈ ನೀತಿ ಬಡವರ ಕುರಿತು ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದರು.
ತಹಸೀಲ್ದಾರ್ ಭೇಟಿ:
ಮಧ್ಯಾಹ್ನದ ವೇಳೆ ತಹಸೀಲ್ದಾರ್ ಮಂಜುನಾಥ್ ಭೇಟಿ ನೀಡಿ ಮಾತನಾಡಿ ಪುತ್ತೂರು ಶಾಸಕರು ಸ್ವತಃ ಕಾರ್ಯಕ್ರಮ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದಾಗಿ ತಿಳಿಸಿದ್ದಾರೆ ಎಂದರು. ಇದಕ್ಕೆ ಬಿಜೆಪಿ ಮುಖಂಡರ ಸಹಿತ ಪ್ರತಿಭಟನಾನಿರತರು ಆಕ್ಷೇಪ ವ್ಯಕ್ತಪಡಿಸಿ ಮತ್ತೆ ಧರಣಿ ಕುಳಿತರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರೊಂದಿಗೆ ಪ್ರಮುಖರಾದ ವಿಕಾಸ್ ಪುತ್ತೂರು, ಆರ್. ಚೆನ್ನಪ್ಪ ಕೋಟ್ಯಾನ್, ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಜೇಶ್ ಬನ್ನೂರು, ದೇವಪ್ಪ ಪೂಜಾರಿ ಬಾಳಿಕೆ, ದಿನೇಶ್ ಅಮ್ಟೂರು, ಪ್ರಸನ್ನ ಮಾರ್ತ, ಪುನೀತ್ ಮಾಡತ್ತಾರು, ಪುರುಷೋತ್ತಮ ಮುಂಗ್ಲಿಮನೆ, ನಿತೇಶ್ ಶಾಂತಿವನ, ಹರಿಪ್ರಸಾದ್ ಯಾದವ್, ಶಿವಕುಮಾರ್. ದಯಾನಂದ ಶೆಟ್ಟಿ ಉಜಿರೆಮಾರು. ಸುದರ್ಶನ ಬಜ, ರೊನಾಲ್ಡ್ ಡಿಸೋಜ, ಗೋವಿಂದ ಪ್ರಭು, ಹರಿಪ್ರಸಾದ್ ಭಂಡಾರಿಬೆಟ್ಟು, ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಯಶೋಧರ ಕರ್ಬೆಟ್ಟು ಸಹಿತ ಬಿಜೆಪಿಯ ಮುಖಂಡರು ಹಾಜರಿದ್ದರು.


Be the first to comment on "ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅಹೋರಾತ್ರಿ ತಾಲೂಕು ಕಚೇರಿ ಮೆಟ್ಟಿಲಲ್ಲಿ ಧರಣಿ, ಬೆಂಬಲಕ್ಕೆ ಆಗಮಿಸಿದ ಪುತ್ತೂರು, ಬಂಟ್ವಾಳ ಬಿಜೆಪಿ"