ಮದುವೆ ಮತ್ತಿತರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ವಾಹನಗಳ ಸಂಖ್ಯೆ ಭಾನುವಾರ ಅಧಿಕವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ಮತ್ತಿತರ ಪ್ರದೇಶಗಳಲ್ಲಿ ವಾಹನದಟ್ಟಣೆ ಕಂಡುಬಂತು.
ಬಂಟ್ವಾಳ ಟ್ರಾಫಿಕ್ ಪೊಲೀಸ್ ಉಪನಿರೀಕ್ಷಕ ಆದರ್ಶ್ ಮತ್ತು ಸಂಪೂರ್ಣ ಸಿಬ್ಬಂದಿ ಸ್ಥಳೀಯ ಗೃಹರಕ್ಷಕ ಸಿಬ್ಬಂದಿ ಸಹಿತ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸುತ್ತಲೂ ಬ್ಲಾಕ್ ಆದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೆಳಗ್ಗೆ ಸುಮಾರು 11.30ಕ್ಕೆ ಆರಂಭಗೊಂಡ ವಾಹನದಟ್ಟಣೆ, ಮಧ್ಯಾಹ್ನ 2.30ರವರೆಗೂ ಇತ್ತು. ಬಿ.ಸಿ.ರೋಡಿನ ಕೈಕಂಬದವರೆಗೆ, ಬಂಟ್ವಾಳ ಬೈಪಾಸ್ ನ ನಾರಾಯಣಗುರು ಮಂದಿರದವರೆಗೆ ವಾಹನಗಳು ಸಾಲುಗಟ್ಟಿ ನಿಂತು ನಿಧಾನವಾಗಿ ಸಂಚರಿಸುತ್ತಿದ್ದವು. ಬಿ.ಸಿ.ರೋಡಿ ಸರ್ಕಲ್ ನಂತೂರು ಸರ್ಕಲ್ ನಂತೆ ಕಂಡುಬಂತು. ಬಿ.ಸಿ.ರೋಡ್ ಕಡೆಯಿಂದ ಬಂಟ್ವಾಳ ಕೆಳಗಿನಪೇಟೆ ಕಡೆಗೆ ಸಾಗುವ ವಾಹನಗಳು ಪರದಾಡಬೇಕಾಯಿತು.
ಬಂಟ್ವಾಳ, ಬಿ.ಸಿ.ರೋಡ್, ಪಾಣೆಮಂಗಳೂರು ಸಹಿತ ಎಲ್ಲ ಕಡೆಗಳಲ್ಲೂ ಕಲ್ಯಾಣ ಮಂಟಪಗಳು ಭರ್ತಿ ಆಗಿದ್ದವು. ವಿವಾಹ ಸಮಾರಂಭಗಳಿಗೆ ತೆರಳುವವರು ಅಧಿಕವಿದ್ದ ಕಾರಣ ಕಾರುಗಳ ಓಡಾಟ ಸಂಖ್ಯೆ ಹೆಚ್ಚಳವಾಗಿತ್ತು. ಮದುವೆಗಳು ನಡೆಯುವ ಸಮೀಪದಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳ ಪಾರ್ಕಿಂಗ್ ಗೆ ಪರದಾಟ ನಡೆಸುವ ದೃಶ್ಯ ಕಂಡುಬಂತು.