
ಶ್ರೀರಾಮ ನವಮಿಯ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀರಾಮ ತಾರಕ ಯಾಗ ಮಾರ್ಚ್ 27ರಂದು ಬಿ.ಸಿ.ರೋಡಿನ ಕಾಮಾಜೆ ದೈಪಲದ ಶಿವಾಜಿನಗರದಲ್ಲಿರುವ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ, ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ವತಿಯಿಂದ ನಡೆಯಲಿದೆ ಎಂದು ಮಂದಿರ ಅಧ್ಯಕ್ಷ ಕೇಶವ ದೈಪಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಂದಿರ ವತಿಯಿಂದ 15ನೇ ವರ್ಷದ ಕಾರ್ಯಕ್ರಮದ ನಿಮಿತ್ತವಾಗಿ ಈ ಬಾರಿ ಯಾಗ ಕೈಗೊಳ್ಳಲಾಗಿದ್ದು, ಈಗಾಗಲೇ ಸುತ್ತಮುತ್ತಲಿನ ಮನೆಗಳಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಸ್ಥಳೀಯ 10ಕ್ಕೂ ಅಧಿಕ ಸಂಘ, ಸಂಸ್ಥೆಗಳು ಸ್ವಯಂಸ್ಫೂರ್ತಿಯಿಂದ ಶ್ರಮದಾನದಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದಾರೆ. ಬೆಳಗ್ಗೆ 8ರಿಂದ ದೇವತಾ ಪ್ರಾರ್ಥನೆ, ಆದ್ಯ ಗಣಯಾಗ, 9ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 10ರಿಂದ ಶ್ರೀರಾಮ ತಾರಕ ಯಾಗ ಪ್ರಾರಂಭ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 18 ದಿನಗಳ ನಗರ ಭಜನೆಯ ಮಂಗಲೋತ್ಸವ ಸಂಜೆ ನಡೆಯಲಿದ್ದು, ರಾತ್ರಿ ದೇವರ ಮಹಾಪೂಜೆ ನಡೆಯಲಿದೆ ಎಂದರು.
ರಾತ್ರಿ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಂದಿರ ಗೌರವಾಧ್ಯಕ್ಷ ಎ.ನೇಮಿರಾಜ ಶೆಟ್ಟಿ ವಹಿಸುವರು. ಕಲ್ಲಡ್ಕ ಡಾ. ಪ್ರಭಾಕರ ಭಟ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ, ರಾತ್ರಿ ಭಕ್ತಿಪ್ರಧಾನ ತುಳು ನಾಟಕ ಜೋಡುಜೀಟಿಗೆ ಪ್ರದರ್ಶನಗೊಳ್ಳಲಿದೆ ಎಂದು ಕಾರ್ಯಕ್ರಮದ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಚಂದಪ್ಪ ರಾಜೀವಪಲ್ಕೆ, ಪ್ರಮುಖರಾದ ನಾರಾಯಣ ಮಾಸ್ಟರ್ ರಾಜೀವಪಲ್ಕೆ, ಅಶೋಕ್ ಕಾಮಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ವಾಣಿ ಕೇಶವ, ವಿಜಯಲಕ್ಷ್ಮಿ, ಜಯಂತಿ ಕಾಮಾಜೆ, ಗೀತಾ ರಾಮಚಂದ್ರ, ಉಮಾವತಿ, ಸುರೇಖ ಸಹಿತ ಪ್ರಮುಖರು ಉಪಸ್ಥಿತರಿದ್ದರು.


Be the first to comment on "27ರಂದು ಕಾಮಾಜೆ ದೈಪಲ ಶಿವಾಜಿನಗರದಲ್ಲಿ ಶ್ರೀರಾಮ ತಾರಕ ಯಾಗ"