ಬಜೆಟ್ ನಲ್ಲಿ ದಕ್ಷಿಣ ಕನ್ನಡ ಹಾಗೂ ಮಂಗಳೂರಿಗೆ ಏನು ಹೊಸ ಅವಕಾಶಗಳಿವೆ? ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಗಳಿವು

ನವದೆಹಲಿ: ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್, ಭಾರತದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿದ್ದು, ಇದು ಜನರ ನಿರೀಕ್ಷೆ ಹಾಗೂ ಸಾಮೂಹಿಕ ಸಹಭಾಗಿತ್ವದೊಂದಿಗೆ ಸಿದ್ಧಗೊಂಡ ‘ಯುವ ಶಕ್ತಿ’ ಆಧಾರಿತ ದೂರದೃಷ್ಟಿಯ ಬಜೆಟ್ ಎಂಬುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಣ್ಣಿಸಿದ್ದಾರೆ. 

ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಸಂಸದರು, ಇಂದು ಮಂಡಿಸಿದ ಬಜೆಟ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಬಡವರು, ಶೋಷಿತ ವರ್ಗ ಕಲ್ಯಾಣದತ್ತ ಹೊಂದಿರುವ ಸಂಕಲ್ಪಕ್ಕೆ ಸಾಕ್ಷಿಯಾಗಿದ್ದು, ಅದು ಮೂರು ಪ್ರಮುಖ ‘ಕರ್ತವ್ಯ’ಗಳ ರೂಪದಲ್ಲಿ ಕಾರ್ಯಗತಗೊಂಡಿದೆ. ಕಳೆದ 11 ವರ್ಷಗಳ  ಅಭಿವೃದ್ಧಿಯ ಅಡಿಪಾಯದ ಮೇಲೆ ಈಗ ಯುವಶಕ್ತಿ, ನಾರಿಶಕ್ತಿ, ಎಂ.ಎಸ್.ಎಂ.ಇ ಮತ್ತು ನವೋದ್ಯಮಿಗಳೆಂಬ ಸದೃಢ ಸ್ತಂಭಗಳನ್ನು ನಿರ್ಮಿಸಿ, ದೇಶದ ಪ್ರಗತಿಗೆ ಹೊಸ ವೇಗ ನೀಡುವ ಬಜೆಟ್ ಇದಾಗಿದೆ ಎಂದು ಶ್ಲಾಘಿಸಿದ್ದಾರೆ.

ಈ ಬಜೆಟ್ ಮೂರು ಪ್ರಮುಖ ಕರ್ತವ್ಯಗಳ ಆಧಾರದ ಮೇಲೆ ಅಭಿವೃದ್ಧಿ ಪೂರಕ ಆಡಳಿತದತ್ತ ಸ್ಪಷ್ಟ ದಿಕ್ಸೂಚಿಯನ್ನು ನೀಡಿದೆ. ಮೊದಲನೆಯದಾಗಿ, ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಗೆ ವೇಗ ನೀಡುವುದು ಮತ್ತು ಆರ್ಥಿಕತೆ ಚೇತರಿಸಿಕೊಳ್ಳುವ ಶಕ್ತಿಯನ್ನು ವೃದ್ಧಿಸುವುದು; ಎರಡನೆಯದಾಗಿ, ಯುವಜನತೆಯ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಅವರಲ್ಲಿ ಹೊಸ ಸಾಮರ್ಥ್ಯ ಬೆಳೆಸುವುದು ಹಾಗೂ ಮೂರನೆಯದಾಗಿ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರದೊಂದಿಗೆ ಪ್ರತಿಯೊಂದು ಕುಟುಂಬ, ಸಮುದಾಯ ಮತ್ತು ಪ್ರದೇಶಗಳಿಗೆ ಅಗತ್ಯ ಸಂಪನ್ಮೂಲ ಹಾಗೂ ಸಮಾನ ಅವಕಾಶಗಳನ್ನು ಒದಗಿಸಿ, ಎಲ್ಲರೂ ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಈ ಬಜೆಟ್‌ನ ಆಶಯವಾಗಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು

ಈ ಬಜೆಟ್ ‘ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್’ನಂತಹ ವೇದಿಕೆಗಳ ಮೂಲಕ ಯುವಜನರ ಆಲೋಚನೆಗಳನ್ನು ನೀತಿ ನಿರೂಪಣೆಯಲ್ಲಿ ಅಳವಡಿಸಿಕೊಂಡಿರುವುದು ಶ್ಲಾಘನೀಯ. ಇದು ಯುವಜನರನ್ನು ಕೇವಲ ಫಲಾನುಭವಿಗಳನ್ನಾಗಿ ನೋಡದೆ, ರಾಷ್ಟ್ರದ ನಿರ್ಧಾರಗಳಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಿದೆ. ಆ ಮೂಲಕ ಭಾರತದ ಮುಂದಿನ ಪ್ರಗತಿಯನ್ನು ಯುವಜನರು ಮುನ್ನಡೆಸುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪದೇ ಪದೇ ಒತ್ತಿ ಹೇಳಿದ್ದು, ಅದರತ್ತ ಈ ಬಜೆಟ್‌ ಕೂಡ ಗಮನಹರಿಸಿರುವುದು ಸಮಯೋಚಿತವೆನಿಸಿದೆ ಎಂದು ಹೇಳಿದ್ದಾರೆ.

2026ರ ಬಜೆಟ್ ದಕ್ಷಿಣ ಕನ್ನಡದ ಪಾಲಿಗೆ ಹೊಸ ಆರ್ಥಿಕ ಶಕ್ತಿಯಾಗಿ ಮೂಡಿಬಂದಿದೆ. ವಿಶೇಷವಾಗಿ ಎರಡು ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಈ ಬಜೆಟ್‌ ಹೆಚ್ಚಿನ  ಒತ್ತು ನೀಡಿದ್ದು, ಮಂಗಳೂರಿನಂತಹ ಬೆಳೆಯುತ್ತಿರುವ ಮಹಾನಗರಕ್ಕೆ ವರದಾನವಾಗಲಿದೆ. ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ನಮ್ಮ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ನಮಗೆ ಇದೊಂದು ಸುವರ್ಣಾವಕಾಶವಾಗಿದೆ ಎಂದು ಕ್ಯಾ.ಚೌಟ ಅಭಿಪ್ರಾಯಪಟ್ಟಿದ್ದಾರೆ.

ವೃತ್ತಿಪರ ಕೌಶಲ್ಯಾಭಿವೃದ್ಧಿ ಹಾಗೂ ಹಣಕಾಸು ಸಬಲೀಕರಣದ ಮೇಲೆ ಬಜೆಟ್ ಇಟ್ಟಿರುವ ಗಮನವು ಮಂಗಳೂರಿನ MSMEಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಕರಾವಳಿಯ ಸಾಂಪ್ರದಾಯಿಕ ಉದ್ಯಮಗಳಿಗೆ ಹೊಸ ಚೈತನ್ಯ ನೀಡಲಿದೆ. ನಮ್ಮ ಭಾಗದ ಯುವ ಉದ್ಯಮಿಗಳು ಜಾಗತಿಕ ವೇದಿಕೆಯಲ್ಲಿ ಸದ್ದು ಮಾಡಲು ಬೇಕಾದ ಭದ್ರ ಬುನಾದಿಯನ್ನು ಈ ಬಜೆಟ್ ಒಳಗೊಂಡಿದೆ. ಕರಾವಳಿ ಸರಕು ಸಾಗಣೆ, ಬಂದರು ಆಧಾರಿತ ಅಭಿವೃದ್ಧಿ ಮತ್ತು ನಗರ ಆರ್ಥಿಕ ವಲಯಗಳ ಉತ್ತೇಜನಕ್ಕೂ ಪೂರಕವಾಗಿದೆ ಎಂದಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾದ ‘ಕರಾವಳಿ ಸರಕು ಸಾಗಣೆ ಉತ್ತೇಜನ ಯೋಜನೆ’ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕ್ರಮಗಳು ಮಂಗಳೂರನ್ನು ಅಂತರಾಷ್ಟ್ರೀಯ ಮಟ್ಟದ ಲಾಜಿಸ್ಟಿಕ್ಸ್ ಹಬ್ ಆಗಿ ರೂಪಿಸಲಿವೆ. ನಗರ ಆರ್ಥಿಕ ವಲಯದ  ಪ್ರಸ್ತಾವನೆಯು ಮಂಗಳೂರು-ಉಡುಪಿ ಕಾರಿಡಾರ್‌ ಅನ್ನು ಬಂದರು, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮದ ಬಲಿಷ್ಠ ಕೇಂದ್ರವನ್ನಾಗಿಸಲಿದೆ. ಇದರೊಂದಿಗೆ, ಎಂ.ಎಸ್.ಎಂ.ಇ (MSME) ವಲಯಕ್ಕೆ ನೀಡಲಾದ ಆರ್ಥಿಕ ನೆರವು ಮತ್ತು ದೇಶೀಯ ಸೀ-ಪ್ಲೇನ್ ಕಾರ್ಯಾಚರಣೆಗೆ ಬೆಂಬಲ ನೀಡಿರುವುದು ಕರಾವಳಿಯ ಸಂಪರ್ಕ ಹಾಗೂ ಉದ್ಯಮಗಳಿಗೆ ಹೊಸ ಆಯಾಮ ನೀಡಲಿದ್ದು, ಈ ಭಾಗದ ಸಮಗ್ರ ಪ್ರಗತಿಗೆ ಸಾಕ್ಷಿಯಾಗಲಿದೆ ಎಂದು ಸಂಸದ ಕ್ಯಾ. ಚೌಟ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ಪ್ರವಾಸೋದ್ಯಮ, ಆಯುಷ್‌ ಸಂಯೋಜನೆಯೊಂದಿಗೆ ಪ್ರಾದೇಶಿಕ ಮೆಡಿಕಲ್‌ ಹಬ್‌ಗಳ ಸ್ಥಾಪನೆಗಳ ಪ್ರಸ್ತಾಪವು ದಕ್ಷಿಣ ಕನ್ನಡದ ಇಕೋ-ವ್ಯವಸ್ಥೆಗೆ ಹೆಚ್ಚು ಪೂರಕವಾಗಿದೆ. ಈ ಹಿನ್ನಲೆಯಲ್ಲಿ ಆಯುಷ್‌ ಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸಲಾಗುವುದು. ಅಲ್ಲದೆ, ಅನಿಮೇಷನ್‌, ವಿಷ್ಯುವಲ್‌ ಎಫೆಕ್ಟ್‌, ಗೇಮಿಂಗ್‌ಗೆ ಆದ್ಯತೆ ನೀಡಿರುವುದು ದಕ್ಷಿಣ ಕನ್ನಡದ ಉದಯೋನ್ಮುಖ ಸೃಜನಶೀಲ ಹಾಗೂ ಸ್ಟೆಮ್‌ ಆಧಾರಿತ ಯುವ ಪ್ರತಿಭೆಗಳ ಉತ್ತೇಜನಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಜತೆಗೆ, ಬಜೆಟ್‌ನಲ್ಲಿ ಮೀನುಗಾರಿಕೆ, ಮೆರೈನ್‌ ವ್ಯಾಲ್ಯು ಚೈನ್‌ ಮತ್ತು ಕರಾವಳಿ ಜೀವನೋಪಾಯದ ಅಂಶಗಳಿಗೂ ಒತ್ತು ನೀಡಿರುವುದು ಮೀನುಗಾರರು, ರಫ್ತುದಾರರು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಹೆಚ್ಚಿನ ಪ್ರಯೋಜನ ಉಂಟು ಮಾಡಲಿದೆ ಎಂದು ಕ್ಯಾ.ಚೌಟ ತಿಳಿಸಿದ್ದಾರೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಜೆಟ್ ನಲ್ಲಿ ದಕ್ಷಿಣ ಕನ್ನಡ ಹಾಗೂ ಮಂಗಳೂರಿಗೆ ಏನು ಹೊಸ ಅವಕಾಶಗಳಿವೆ? ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಗಳಿವು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*